ಬೆಂಗಳೂರು: ರಾಜೇಶ್ ಎಕ್ಸ್ಪೋರ್ಟ್ಸ್ನಿಂದ 15.15 ಲಕ್ಷ ಕೋಟಿ ರೂ. ವಂಚನೆ ಆರೋಪ; ಸೆಬಿ ಪ್ರಾಥಮಿಕ ತನಿಖೆಯಲ್ಲಿ ಶಾಕಿಂಗ್ ಅಂಶ ಬಹಿರಂಗ!

ದೇಶದ ಅತಿ ದೊಡ್ಡ ಚಿನ್ನ ಸಂಸ್ಕರಣೆ ಮತ್ತು ಆಭರಣ ರಫ್ತು ಕಂಪನಿಗಳಲ್ಲೊಂದಾದ, ಬೆಂಗಳೂರು ಮೂಲದ ರಾಜೇಶ್ ಎಕ್ಸ್ಪೋರ್ಟ್ಸ್ ಲಿಮಿಟೆಡ್ (Rajesh Exports Ltd) ಇದೀಗ ಭಾರತೀಯ ಕಾರ್ಪೊರೇಟ್ ವಲಯವೇ ಬೆಚ್ಚಿಬೀಳುವಂತಹ ಮಹಾ ಆರ್ಥಿಕ ಹಗರಣದ ಸುಳಿಗೆ ಸಿಲುಕಿದೆ. ಬಂಡವಾಳ ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಬಿ (SEBI) ನಡೆಸಿರುವ ಪ್ರಾಥಮಿಕ ತನಿಖೆಯಲ್ಲಿ ಕಂಪನಿಯು ಬರೋಬ್ಬರಿ 15.15 ಲಕ್ಷ ಕೋಟಿ ರೂ. ಬೃಹತ್ ಪ್ರಮಾಣದ ಆದಾಯವನ್ನು ತಪ್ಪಾಗಿ ಬಿಂಬಿಸಿ ಹೂಡಿಕೆದಾರರಿಗೆ ವಂಚಿಸಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಹಣಕಾಸು ವರ್ಷ 2021 ರಿಂದ 2025 ರ ನಡುವಿನ ಅವಧಿಯಲ್ಲಿ ಕಂಪನಿಯು ತನ್ನ ಅಂಗಸಂಸ್ಥೆಗಳ (Subsidiaries) ಮೂಲಕ ಬಂದ ಆದಾಯದಲ್ಲಿ 99.8% ರಷ್ಟು ಹಣವನ್ನು ಕೇವಲ ಕಾಗದದ ಮೇಲಷ್ಟೇ ಸೃಷ್ಟಿಸಿ, ಲೆಕ್ಕಪತ್ರಗಳಲ್ಲಿ ಭಾರಿ ಅಕ್ರಮ ಎಸಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸ್ವಿಜ್ಜರ್ಲ್ಯಾಂಡ್ನಲ್ಲಿರುವ ಜಗತ್ಪ್ರಸಿದ್ಧ ಚಿನ್ನದ ರಿಫೈನರಿಯ ಹೆಸರನ್ನು ಬಳಸಿಕೊಂಡು ಸುಳ್ಳು ಆದಾಯದ ಬೆಟ್ಟವನ್ನು ಸೃಷ್ಟಿಸಿದ್ದಕ್ಕೆ ಸೆಬಿ ಈಗ ಪ್ರವರ್ತಕರಿಗೆ ನಿಷೇಧ ಹೇರಿದೆ. ಹೀಗಾಗಿ ಷೇರು ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿರುವ ಈ ಹಗರಣದ ಹಿನ್ನೆಲೆ ಏನು? ಸೆಬಿ ವರದಿಯಲ್ಲಿರುವ ಶಾಕಿಂಗ್ ಅಂಶಗಳು ಏನು? ಬೆಳಕಿಗೆ ಬಂದಿದ್ದು ಹೇಗೆ? ಇತ್ಯಾದಿ ವಿವರಗಳ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಬೆಂಗಳೂರಿನಲ್ಲಿದೆ ಕಚೇರಿ:
ಈ ಕಂಪನಿಯನ್ನು 1989 ರಲ್ಲಿ ಸ್ಥಾಪಿಸಲಾಗಿದ್ದು ಬೆಂಗಳೂರಿನಲ್ಲಿ ಇದರ ಪ್ರಧಾನ ಕಚೇರಿ ಇದೆ. ಈ ಕಂಪನಿಯು ಚಿನ್ನದ ಗಣಿಗಾರಿಕೆಯಿಂದ ಹಿಡಿದು, ಸಂಸ್ಕರಣೆ, ಆಭರಣ ವಿನ್ಯಾಸ, ಸಗಟು ಮಾರಾಟ ಮತ್ತು ಚಿಲ್ಲರೆ ವ್ಯಾಪಾರದವರೆಗಿನ (Mine-to-Retail) ಸಂಪೂರ್ಣ ಪೂರೈಕೆ ಸರಪಳಿಯನ್ನು ತನ್ನದೇ ನಿಯಂತ್ರಣದಲ್ಲಿ ಹೊಂದಿರುವ ಕಂಪನಿಯಾಗಿದೆ. ಭಾರತದಲ್ಲಿ ಇದರ ಆಭರಣ ಮಳಿಗೆಗಳು ಶುಭ್ ಜ್ಯುವೆಲ್ಲರ್ಸ್ (Shubh Jewellers) ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ.