“ಕರ್ನೂಲ್: ಮಗನನ್ನು ಕೊಂದ ಪಾಪಿ ತಾಯಿ ಪೊಲೀಸ್ ವಶದಲ್ಲಿದ್ದಾಗಲೇ ಸಾ*ವು!

ಕರ್ನೂಲ್: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಹದಿಹರೆಯದ ಮಗ ನನ್ನು ಪ್ರಿಯಕರನೊಂದಿಗೆ ಸೇರಿ ಭೀಕರವಾಗಿ ಕೊಲೆ ಮಾಡಿ, ಹೈಕೋರ್ಟ್ ಮೆಟ್ಟಿಲೇರಿ ನಾಟಕವಾಡಿದ್ದ ತಾಯಿಯನ್ನು ಪೊಲೀಸರು ಅರೆಸ್ಟ್ ಮಾಡಿ ಜೈಲಿಗೆ ತಳ್ಳಿದ್ದಾರೆ. ಆದರೆ ಆಕೆ ಆಸ್ಪತ್ರೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಕರ್ನೂಲ್ ನಲ್ಲಿ ನಡೆದಿದ್ದು, ಪೊಲೀಸರು ಶವವನ್ನು ಹೊರತೆಗೆದು ಕೊಲೆ ರಹಸ್ಯವನ್ನು ಬಯಲು ಮಾಡಿದ ಕೆಲವೇ ಗಂಟೆಗಳಲ್ಲಿ ಈ ಸಾವು ಸಂಭವಿಸಿದ್ದು, ಗ್ರಾಮಸ್ಥರು ಇದೊಂದು ‘ಲಾಕಪ್ ಡೆತ್’ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಕೌತಾಲಂ ಮಂಡಲದ ಬಡಿನೆಹಾಳು ಗ್ರಾಮದ ನಿವಾಸಿಯಾಗಿದ್ದ ಗಂಗಮ್ಮ ಮತ್ತು ಚಿನ್ನಮಲ್ಲಯ್ಯ ದಂಪತಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬ ಹೆಣ್ಣು ಮಗಳಿದ್ದಾಳೆ. ಕೆಲವು ವರ್ಷಗಳ ಹಿಂದೆ ಚಿನ್ನಮಲ್ಲಯ್ಯ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಇದಾದ ಬಳಿಕ ಗಂಗಮ್ಮ ತನ್ನ ಸೋದರ ಸಂಬಂಧಿ, ದರ್ಗಪ್ಪ ಎಂಬಾತನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಳು. ಗಂಗಮ್ಮಳ ಹಿರಿಯ ಮಗ ವೀರೇಶ್ (17 ವರ್ಷ) ದರ್ಗಪ್ಪ ಪದೇ ಪದೇ ಮನೆಗೆ ಬರುವುದನ್ನು ತೀವ್ರವಾಗಿ ವಿರೋಧಿಸುತ್ತಿದ್ದನು ಹಾಗೂ ಈ ವಿಚಾರವಾಗಿ ಮನೆಯಲ್ಲಿ ಹಲವು ಬಾರಿ ಜಗಳಗಳು ನಡೆದಿದ್ದವು.
ತಮ್ಮ ಸಂಬಂಧಕ್ಕೆ ಮುಳ್ಳಾಗಿದ್ದ ವೀರೇಶ್ನನ್ನು ಮುಗಿಸಲು ಸಂಚು ರೂಪಿಸಿದ ಗಂಗಮ್ಮ ಮತ್ತು ದರ್ಗಪ್ಪ, 2024 ರ ನವೆಂಬರ್ನಲ್ಲಿ ಮನೆಯಲ್ಲೇ ಆತನಿಗೆ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದರು. ಬಳಿಕ ಸಾಕ್ಷ್ಯ ನಾಶಪಡಿಸಲು ಶವವನ್ನು ಕಂಬಳಿಯಲ್ಲಿ ಸುತ್ತಿ, ಬೈಕ್ನಲ್ಲಿ ಸಾಗಿಸಿ ಹತ್ತಿರದ ಸ್ಮಶಾನದಲ್ಲಿ ರಹಸ್ಯವಾಗಿ ಹೂತು ಹಾಕಿದ್ದರು. ನವೆಂಬರ್ 11, 2024 ರಂದು ಕೌತಾಲಂ ಠಾಣೆಗೆ ತೆರಳಿದ ಗಂಗಮ್ಮ, ತನ್ನ ಮಗ ನಾಪತ್ತೆಯಾಗಿದ್ದಾನೆ ಎಂದು ದೂರು ನೀಡಿ ಪೊಲೀಸರ ದಾರಿ ತಪ್ಪಿಸಿದ್ದಳು.
ಹೈಕೋರ್ಟ್ ಮೆಟ್ಟಿಲೇರಿದರೆ ಸರ್ಕಾರದಿಂದ ಹಣ ಸಿಗುತ್ತದೆ ಎಂದು ಕೆಲವರು ನೀಡಿದ ಸಲಹೆಯ ಮೇರೆಗೆ ಗಂಗಮ್ಮ, ಪೊಲೀಸರು ಮಗನನ್ನು ಹುಡುಕುತ್ತಿಲ್ಲ ಎಂದು ಆರೋಪಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಳು. ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ಎರಡು ವಾರಗಳಲ್ಲಿ ವರದಿ ನೀಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (DGP) ಆದೇಶಿಸಿತು. ತಕ್ಷಣವೇ ಕಾರ್ಯಪ್ರವೃತ್ತರಾದ ಡಿಜಿಪಿ ಅವರು ಗುಂಟೂರು ಸಿಸಿಎಸ್ ಹೆಚ್ಚುವರಿ ಎಸ್ಪಿ ಸುಪ್ರಜಾ ಮತ್ತು ಡಿಎಸ್ಪಿ ರವಿ ಕುಮಾರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (SIT) ರಚಿಸಿದರು. ಎಸ್ಐಟಿ ಕಟ್ಟುನಿಟ್ಟಿನ ತನಿಖೆ ನಡೆಸಿದಾಗ ತಾಯಿಯ ಪಾಪದ ಕೃತ್ಯ ಬಯಲಾಯಿತು. ಪೊಲೀಸರು ಭಾನುವಾರ ಜಿ. ಹೊಸಳ್ಳಿ ಸ್ಮಶಾನಕ್ಕೆ ತೆರಳಿ ವೀರೇಶ್ನ ಅಸ್ಥಿಪಂಜರವನ್ನು ವಶಪಡಿಸಿಕೊಂಡಿದ್ದಾರೆ. ಸ್ಥಳದಲ್ಲಿ ಸಿಕ್ಕ ಹಗ್ಗ, ಟವಲ್ ಮತ್ತು ಕಂಬಳಿ ವೀರೇಶ್ನದ್ದೇ ಎಂದು ಕುಟುಂಬಸ್ಥರು ಗುರುತಿಸಿದ್ದಾರೆ.
ಮಗನ ಕಳೇಬರ ಸಿಕ್ಕ ಬೆನ್ನಲ್ಲೇ ತಾಯಿ ಗಂಗಮ್ಮ ಕರ್ನೂಲ್ನ ಕಾರ್ಪೊರೇಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದು ಸಾರ್ವಜನಿಕರಲ್ಲಿ ಹತ್ತಾರು ಅನುಮಾನಗಳಿಗೆ ಕಾರಣವಾಗಿದೆ. ಅನಾರೋಗ್ಯದ ಕಾರಣ ಆಕೆಯನ್ನು ಅದೋನಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಕರ್ನೂಲ್ಗೆ ಸ್ಥಳಾಂತರಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಪೊಲೀಸರು ವಿಚಾರಣೆಗೆ ಕರೆದೊಯ್ದು ತೀವ್ರ ಕಿರುಕುಳ ನೀಡಿದ್ದರಿಂದಲೇ ಆಕೆ ಲಾಕಪ್ನಲ್ಲಿ ಮೃತಪಟ್ಟಿದ್ದಾಳೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಲ್ಲದೆ, ಇದು ಸಹಜ ಸಾವಾಗಿದ್ದರೆ ಪೊಲೀಸ್ ಮೇಲ್ವಿಚಾರಣೆಯಲ್ಲಿ ತರಾತುರಿಯಲ್ಲಿ ಅಂತ್ಯಕ್ರಿಯೆ ಏಕೆ ಮಾಡಲಾಯಿತು ಎಂದು ಪ್ರಶ್ನಿಸಿದ್ದಾರೆ. ಸದ್ಯ ಪೊಲೀಸರು ಗಂಗಮ್ಮನ ಸಾವನ್ನು ಅನುಮಾನಾಸ್ಪದ ಸಾವು ಎಂದು ಕೇಸ್ ದಾಖಲಿಸಿಕೊಂಡಿದ್ದು, ಪ್ರಕರಣದ ಮತ್ತೊಬ್ಬ ಆರೋಪಿ ದರ್ಗಪ್ಪನನ್ನು ಬಂಧಿಸಿ ರಿಮಾಂಡ್ ಮಾಡಿದ್ದಾರೆ.