ಚೆನ್ನೈ: ಹೊಸ ಆಂದೋಲನಕ್ಕೆ ತಮಿಳುನಾಡು ಮಾಜಿ ಬಿಜೆಪಿ ಬಾಸ್ ಅಣ್ಣಾಮಲೈ ಮುನ್ನುಡಿ!

ಹೊಸದಿಲ್ಲಿ: ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ರಾಜ್ಯದಲ್ಲಿ ಹೊಸ ಆಂದೋಲನವೊಂದನ್ನು ಆರಂಭಿಸಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ ಎಂದು NDTV ವರದಿ ಮಾಡಿದೆ.
ಸಮಾನ ಮನೋಭಾವದ ಜನರನ್ನು ಒಗ್ಗೂಡಿಸುವುದು, ಬಲಿಷ್ಠ ಸ್ವಯಂಸೇವಕರ ಜಾಲವನ್ನು ನಿರ್ಮಿಸುವುದು ಹಾಗೂ ಅವರನ್ನು ರಾಜಕೀಯವಾಗಿ ಬೆಳೆಸುವುದು ಈ ಆಂದೋಲನದ ಉದ್ದೇಶವಾಗಿದೆ ಎಂದು ಹೇಳಲಾಗಿದೆ. ಅಣ್ಣಾಮಲೈ ಅವರು ಈಗಾಗಲೇ ‘We the leaders’ ಎಂಬ ಲಾಭರಹಿತ ಸಂಸ್ಥೆಯನ್ನು ನಡೆಸುತ್ತಿದ್ದು, ಅದರ ಮೂಲಕವೇ ಈ ಚಟುವಟಿಕೆಗಳನ್ನು ವಿಸ್ತರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಆದರೆ, ಮುಂದಿನ ಆರು ತಿಂಗಳ ಅವಧಿಯಲ್ಲಿ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುವ ಯಾವುದೇ ಯೋಜನೆ ಇಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರೇ ಅಣ್ಣಾಮಲೈ ಅವರ ರಾಜಕೀಯ ಸ್ಫೂರ್ತಿಯಾಗಿದ್ದಾರೆ ಎಂದೂ ತಿಳಿಸಲಾಗಿದೆ.
ಮಾಜಿ ಐಪಿಎಸ್ ಅಧಿಕಾರಿ ಆಗಿರುವ ಅಣ್ಣಾಮಲೈ 2020ರಲ್ಲಿ ರಾಜಕೀಯ ಪ್ರವೇಶಿಸಿದ್ದರು. 2021ರಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡ ಅವರು 2025ರವರೆಗೆ ಆ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದರು.
ತಮಿಳುನಾಡಿನಲ್ಲಿ ಬಿಜೆಪಿಯ ಸಂಘಟನೆಯನ್ನು ಬಲಪಡಿಸಿದ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಡುವ ಅಣ್ಣಾಮಲೈ, ತಮ್ಮ ಆಕ್ರಮಣಕಾರಿ ರಾಜಕೀಯ ಶೈಲಿ ಹಾಗೂ ಮಾಧ್ಯಮಗಳಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳುವ ಮೂಲಕ ರಾಷ್ಟ್ರೀಯ ನಾಯಕತ್ವದ ಗಮನ ಸೆಳೆದಿದ್ದರು.
ಆದರೆ, ದ್ರಾವಿಡ ಚಳವಳಿಯ ನಾಯಕ ಸಿ.ಎನ್. ಅಣ್ಣಾದೊರೈ ಹಾಗೂ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಕುರಿತು ಅವರು ನೀಡಿದ್ದ ಕೆಲವು ವಿವಾದಾತ್ಮಕ ಹೇಳಿಕೆಗಳು ಮಿತ್ರಪಕ್ಷ AIADMKಯ ಅಸಮಾಧಾನಕ್ಕೆ ಕಾರಣವಾಗಿದ್ದವು. ಇದರ ಪರಿಣಾಮವಾಗಿ ಬಿಜೆಪಿ-AIADMK ಮೈತ್ರಿಯಲ್ಲಿ ಬಿರುಕು ಉಂಟಾಗಿ, ಎರಡೂ ಪಕ್ಷಗಳು ಪ್ರತ್ಯೇಕವಾಗಿ ಚುನಾವಣೆಗೆ ಸ್ಪರ್ಧಿಸಿದ್ದವು. ಆ ಚುನಾವಣೆಯಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟ ಭರ್ಜರಿ ಜಯ ಸಾಧಿಸಿತ್ತು.
ಬಳಿಕ ಬಿಜೆಪಿ-AIADMK ಮೈತ್ರಿ ಮರುಸ್ಥಾಪನೆಯಾಗುವ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಘಟಕದ ನಾಯಕತ್ವದಲ್ಲಿ ಬದಲಾವಣೆ ತರಬೇಕೆಂಬ ಷರತ್ತನ್ನು AIADMK ಪ್ರಧಾನ ಕಾರ್ಯದರ್ಶಿ ಇ. ಪಳನಿಸ್ವಾಮಿ ಮುಂದಿಟ್ಟಿದ್ದರು ಎಂದು ಮೂಲಗಳು ತಿಳಿಸಿವೆ. ಇದರ ಬೆನ್ನಲ್ಲೇ ಅಣ್ಣಾಮಲೈ ಅವರನ್ನು ರಾಜ್ಯಾಧ್ಯಕ್ಷ ಹುದ್ದೆಯಿಂದ ಬದಲಿಸಿ, ನೈನಾರ್ ನಾಗೇಂದ್ರನ್ ಅವರನ್ನು ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.
ಗಮನಾರ್ಹ ಸಂಗತಿಯೆಂದರೆ, ಅಣ್ಣಾಮಲೈ ಇದುವರೆಗೆ ಲೋಕಸಭೆ ಅಥವಾ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಅವರಿಗೆ ಯಾವುದೇ ಚುನಾವಣಾ ಟಿಕೆಟ್ ಕೂಡ ದೊರೆತಿಲ್ಲ. ಆದರೂ ತಮಿಳುನಾಡು ಬಿಜೆಪಿಯ ಪ್ರಮುಖ ನಾಯಕರಾಗಿ ಅವರು ಹೊರಹೊಮ್ಮಿದ್ದಾರೆ.