ಬೀದರ್: ಪಶು ವೈದ್ಯಕೀಯ ವಿವಿಯಲ್ಲಿ 45 ಕೋಟಿ ರೂ. ನಕಲಿ ಬಿಲ್ ಹಗರಣ; ವಿಶ್ರಾಂತ ಕುಲಪತಿ ಸೇರಿ ಆರು ಮಂದಿ ಲೋಕಾಯುಕ್ತ ಬಲೆಗೆ!

ಬೀದರ್: ಇಲ್ಲಿನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದಲ್ಲಿ 2017-18ರಲ್ಲಿ ನಕಲಿ ಬಿಲ್ ಸೃಷ್ಟಿಸಿ 45 ಕೋಟಿ ರೂ.ಗೂ ಅಧಿಕ ಹಣ ಲೂಟಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ವಿವಿಯ ವಿಶ್ರಾಂತ ಕುಲಪತಿ, ನಿವೃತ್ತ ಕಂಟ್ರೋಲರ್ ಸೇರಿದಂತೆ ಆರು ಮಂದಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಎಚ್.ಡಿ.ನಾರಾಯಣ ಸ್ವಾಮಿ, ನಿವೃತ್ತ ಕಂಟ್ರೋಲರ್ ಕೆ.ಎಲ್.ಸುರೇಶ್, ಎಫ್ಟಿಎ ಮೃಂತ್ಯುಂಜಯ್ ಹಿರೇಮರ್, ಬೆಂಗಳೂರಿನ ಖಾಸಗಿ ಎಂಟರ್ ಪ್ರೈಸಸ್ ವೊಂದರ ಮಾಲಕ ಬೋಪಣ್ಣ ಮಂಜುನಾಥ್ ಹಾಗೂ ಖಾತೆಗೆ ಹಣ ಹಾಕಿಸಿಕೊಂಡು ತೆಗೆದುಕೊಟ್ಟ ರಾಮಗೊಂಡ ಬಂಧಿತ ಆರೋಪಿಗಳಾಗಿದ್ದಾರೆ.

ಬೀದರ್ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದಲ್ಲಿ 2017-18ರಲ್ಲಿ 45 ಕೋಟಿ ರೂ.ಗೂ ಅಧಿಕ ಮೊತ್ತದ ನಕಲಿ ಬಿಲ್ ಗಳನ್ನು ಸೃಷ್ಟಿಸಿ ಅಕ್ರಮ ಎಸಗಿರುವ ಆರೋಪ ಕೇಳಿಬಂದಿತ್ತು. ವಿವಿಯ ಸಿಬ್ಬಂದಿ ಹಾಗೂ ಬೆಂಗಳೂರಿನ ಖಾಸಗಿ ಎಂಟರ್ ಪ್ರೈಸಸ್ ವೊಂದು ಈ ಹಗರಣದಲ್ಲಿ ಭಾಗಿಯಾಗಿದೆ ಎಂದು ದೂರಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ವಿಶ್ರಾಂತ ಕುಲಪತಿ ಸಹಿತ ಆರು ಮಂದಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಲೋಕಾಯುಕ್ತ ಎಡಿಜಿಪಿ ಮನೀಷ್ ಕರ್ಬಿಕರ್, ಐಜಿಪಿ ಡಾ.ಎ.ಎಸ್.ಸುಬ್ರಮಣೇಶ್ವರ್, ಎಸ್ಪಿಗಳಾದ ಬದ್ರಿನಾಥ್ ಹಾಗೂ ಸಿದ್ದರಾಜು ಮಾರ್ಗದರ್ಶನದಲ್ಲಿ ಬೀದರ್ ಲೋಕಾಯುಕ್ತ ಡಿಎಸ್ಪಿ ಹಣಮಂತರಾಯ, ಸಂತೋಷ್ ರಾಠೋಡ್ ಸೇರಿದಂತೆ ಹಲವು ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.