ನಮೋ ಘಾಟ್ನಲ್ಲಿ ಭೀಕರ ಕೃತ್ಯ; 17ರ ಹರೆಯದ ಬಾಲಕನನ್ನು ಥಳಿಸಿ ಕೊಂದ ಗಾರ್ಡ್ಗಳು

ವಾರಣಾಸಿ: ಉತ್ತರ ಪ್ರದೇಶದ ವಾರಣಾಸಿಯ ನಮೋ ಘಾಟ್ನಲ್ಲಿ ಗಾರ್ಡ್ಗಳು 17ರ ಹರೆಯದ ಬಾಲಕನನ್ನು ಥಳಿಸಿ ಹತ್ಯೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿ ಪೊಲೀಸರು ನಾಲ್ವರು ಗಾರ್ಡ್ಗಳನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಮೃತನನ್ನು ಸೋನ್ ಭದ್ರದ ನಿವಾಸಿ ರಾಜೇಶ್ ಜೈಸ್ವಾಲ್ ಅಲಿಯಾಸ್ ಚಿಂಟು (17) ಎಂದು ಗುರುತಿಸಲಾಗಿದೆ. ರವಿವಾರ ಮುಂಜಾನೆ ನಮೋ ಘಾಟ್ಗೆ ಐವರು ಸ್ನೇಹಿತರು ತೆರಳಿದ್ದರು. ಈ ವೇಳೆ ಘಟನೆ ನಡೆದಿದೆ.
ಗಾರ್ಡ್ಗಳು ರಾಜೇಶ್ ಜೈಸ್ವಾಲ್ ಮತ್ತು ಆತನ ಸ್ನೇಹಿತರಿಗೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ರಾಜೇಶ್ಗೆ ಗಂಭೀರವಾದ ಗಾಯಗಳಾಗಿತ್ತು. ಆತನನ್ನು ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಆತ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.

ಸ್ನೇಹಿತ ಹೇಳಿದ್ದೇನು?
ರಾಜೇಶ್ ಜೈಸ್ವಾಲ್ ನಾಲ್ವರು ಸ್ನೇಹಿತರೊಂದಿಗೆ ಸೋನಭದ್ರದಿಂದ ವಾರಾಣಸಿಗೆ ಬಂದಿದ್ದ. ಕುಟುಂಬದ ಸದಸ್ಯರೊಬ್ಬರಿಗೆ ಔಷಧಿ ತರಲು ಆತ ವಾರಾಣಸಿಗೆ ಬಂದಿದ್ದ. ರಾಜೇಶ್ ಸಹೋದರಿ ಮತ್ತು ಭಾವ ಕೂಡ ವಾರಾಣಸಿಯಲ್ಲೇ ವಾಸವಾಗಿದ್ದು, ಅದಕ್ಕಾಗಿ ರಾತ್ರಿ ಅವರ ಮನೆಯಲ್ಲಿ ತಂಗಿದ್ದ ಎಂದು ಆತನ ಸ್ನೇಹಿತ ಬ್ರಿಜೇಶ್ ಗುಪ್ತಾ ಹೇಳಿದ್ದಾನೆ.
“ರವಿವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ನಾವು ಐವರು ಸ್ನೇಹಿತರು ನಮೋ ಘಾಟ್ ವೀಕ್ಷಣೆಗೆ ತೆರಳಿದ್ದೆವು. ಈ ವೇಳೆ ಭದ್ರತಾ ಸಿಬ್ಬಂದಿ ನಮ್ಮನ್ನು ತಡೆದಿದ್ದಾರೆ. ಇದರಿಂದಾಗಿ ರಾಜೇಶ್ ಮತ್ತು ಒಬ್ಬ ಗಾರ್ಡ್ ನಡುವೆ ವಾಗ್ವಾದ ನಡೆದಿದೆ. ಗಾರ್ಡ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ನೀವು ಏಕೆ ನಿಂದಿಸುತ್ತಿದ್ದೀರಿ? ಎಂದು ರಾಜೇಶ್ ಪ್ರಶ್ನಿಸಿದ್ದಾನೆ. ಇದಾದ ನಂತರ ನಾವು ಇನ್ನೊಂದು ಬದಿಗೆ ಹೋದೆವು. ಮತ್ತೆ ವಾಪಾಸ್ಸಾದಾಗ ಗಾರ್ಡ್ ಮತ್ತು 10 ರಿಂದ 12 ಸಹಚರರು ನಮ್ಮನ್ನು ತಡೆದರು. ಅವರು ನಮ್ಮನ್ನು ಹೊಡೆಯಲು ಪ್ರಾರಂಭಿಸಿದರು. ಅವರು ರಾಜೇಶ್ಗೆ ಹೆಚ್ಚು ಹಲ್ಲೆ ನಡೆಸಿದ್ದಾರೆ. ರಾಜೇಶ್ ರಕ್ತದ ಮಡುವಿನಲ್ಲಿ ಬಿದ್ದನು ಎಂದು ಸ್ನೇಹಿತ ಹೇಳಿದ್ದಾನೆ.
ಸಿಸಿಟಿವಿ ಪರಿಶೀಲಿಸಿದರೆ ಸತ್ಯ ಬಹಿರಂಗ:
ಕಾವಲುಗಾರರು ನನ್ನನ್ನೂ ಬೆನ್ನಟ್ಟಿ ಹೊಡೆದರು. ಹತ್ಯೆ ನಡೆಸಲು ಪ್ರಯತ್ನಿಸಿದರು. ಆದರೆ ನಾನು ಅಲ್ಲಿಂದ ಓಡಿಹೋದೆ. ಗಾರ್ಡ್ಗಳು ನಮ್ಮ ಜೊತೆಗಿದ್ದ ಇತರರಿಗೂ ಹಲ್ಲೆ ನಡೆಸಿದ್ದಾರೆ. ಈ ವೇಳೆ ಜನರು ಸ್ಥಳದಲ್ಲಿ ಜಮಾಯಿಸಿದರು. ಕೆಲವರು ರಾಜೇಶ್ ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಪಕ್ಕದ ಸಿಸಿಟಿವಿಗಳನ್ನು ಪರಿಶೀಲಿಸಿದರೆ, ಸತ್ಯ ಹೊರಬರುತ್ತದೆ ಎಂದು ಬ್ರಿಜೇಶ್ ಗುಪ್ತಾ ಹೇಳಿದರು.