ನೀಟ್ ಪರೀಕ್ಷೆ ರದ್ದಾದ ಹಿನ್ನೆಲೆ ಖಿನ್ನತೆ; 18 ವರ್ಷದ ವಿದ್ಯಾರ್ಥಿನಿ ದಾರುಣ ಆತ್ಮಹ*ತ್ಯೆ!

ಲಾತೂರ್: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಪರೀಕ್ಷೆ ರದ್ದಾಗಿದ್ದರಿಂದ ಮಾನಸಿಕ ಖಿನ್ನತೆಗೆ ಗುರಿಯಾಗಿದ್ದ ತಮ್ಮ 18 ವರ್ಷದ ಪುತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮಹಾರಾಷ್ಟ್ರದ ಲಾತೂರ್ ನ ರೈತರೊಬ್ಬರು ಆರೋಪಿಸಿದ್ದಾರೆ.
ಈ ಸಂಬಂಧ ಆಕಸ್ಮಿಕ ಸಾವು ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು, ವಿದ್ಯಾರ್ಥಿನಿಯ ತಂದೆಯ ಆರೋಪದ ಕುರಿತು ತನಿಖೆ ನಡೆಸುತ್ತಿದ್ದಾರೆ.
ಮೃತ ವಿದ್ಯಾರ್ಥಿನಿಯನ್ನು ಗೊಂಡೆಗಾಂವ್ ಗ್ರಾಮದ ಮೈಥಿಲಿ ಅಶೋಕ್ ಸೋನ್ವಾಲೆ ಎಂದು ಗುರುತಿಸಲಾಗಿದ್ದು, ಮೇ 16ರಂದು ಆಕೆ ತನ್ನ ತೋಟದಲ್ಲಿನ ಮರವೊಂದಕ್ಕೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾಳೆ ಎಂದು ಆರೋಪಿಸಲಾಗಿದೆ. ಆಕೆಯ ಮರಣೋತ್ತರ ಪರೀಕ್ಷೆ ಮತ್ತು ಕಾನೂನು ವಿಧಿವಿಧಾನಗಳನ್ನು ಪೂರೈಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರವಿವಾರ ಈ ಕುರಿತು ಪೊಲೀಸರಿಗೆ ಹೇಳಿಕೆ ನೀಡಿರುವ ಮೃತ ವಿದ್ಯಾರ್ಥಿನಿಯ 50 ವರ್ಷದ ತಂದೆ ಅಶೋಕ್ ವಿಠಲ್ ಸೋನ್ವಾಲೆ, ಮೇ 3ರಂದು ನಡೆದಿದ್ದ ನೀಟ್ ಪರೀಕ್ಷೆಗೆ ತಮ್ಮ ಪುತ್ರಿ ಮೈಥಿಲಿ ಹಾಜರಾಗಿದ್ದಳು. ಆದರೆ, ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದದಿಂದ ಪರೀಕ್ಷೆ ರದ್ದಾಗಿದ್ದರಿಂದ, ಆಕೆ ತೀವ್ರ ಮಾನಸಿಕ ಒತ್ತಡಕ್ಕೆ ಗುರಿಯಾಗಿದ್ದಳು. ಆಕೆ ವೈದ್ಯೆಯಾಗುವ ಆಕಾಂಕ್ಷೆ ಹೊಂದಿದ್ದಳು” ಎಂದು ತಿಳಿಸಿದ್ದಾರೆ.
“ನಾನು ಪರೀಕ್ಷೆಗೆ ಚೆನ್ನಾಗಿ ಸನ್ನದ್ಧಳಾಗಿ, ತೃಪ್ತಿಕರವಾಗಿ ಪರೀಕ್ಷೆ ಬರೆದಿದ್ದರೂ, ಪರೀಕ್ಷೆ ರದ್ದಾಗಿರುವುದರಿಂದ ನನ್ನ ಭವಿಷ್ಯದ ಬಗ್ಗೆ ಆತಂಕವುಂಟಾಗಿದೆ ಎಂದು ಪರೀಕ್ಷೆ ರದ್ದತಿಯಿಂದ ವಿಚಲಿತಳಾಗಿದ್ದ ಮೈಥಿಲಿ ನಮಗೆ ತಿಳಿಸಿದ್ದಳು” ಎಂದು ಅವರು ಹೇಳಿದ್ದಾರೆ. ಆಕೆ ಒತ್ತಡವನ್ನು ನಿಭಾಯಿಸಲಾಗದೆ, ತನ್ನ ಜೀವನವನ್ನು ಅಂತ್ಯಗೊಳಿಸಿಕೊಂಡಿದ್ದಾಳೆ ಎಂದೂ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ವೈದ್ಯಕೀಯ ಪ್ರವೇಶಾತಿಗಾಗಿ ಮೇ 3ರಂದು ನಡೆದಿದ್ದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮೇ 12ರಂದು ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಿತ್ತು. ಜೂನ್ 21ರಂದು ಮರು ಪರೀಕ್ಷೆಯನ್ನು ನಿಗದಿಗೊಳಿಸಲಾಗಿದೆ.
ಮೇ 3ರಂದು ದೇಶಾದ್ಯಂತ 551 ನಗರಗಳು ಹಾಗೂ ವಿದೇಶಗಳ 14 ನಗರಗಳಲ್ಲಿನ ಪರೀಕ್ಷಾ ಕೇಂದ್ರಗಳಲ್ಲಿ ನೀಟ್ ಪರೀಕ್ಷೆಯನ್ನು ನಡೆಸಲಾಗಿತ್ತು. ಈ ಪರೀಕ್ಷೆಗೆ ಸುಮಾರು 23 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಆದರೆ, ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮೇ 12ರಂದು ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು.