ಬೌನ್ಸರ್ ಎಸೆತಕ್ಕೆ ಕೆರಳಿದ ಪೂರನ್: ಕೃನಾಲ್ ಪಾಂಡ್ಯ ಜೊತೆ ವಾಕ್ಸಮರ

ಬೆಂಗಳೂರು: 2026 ರ ಐಪಿಎಲ್ನಲ್ಲಿ ಗುರುವಾರ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ, ಲಕ್ನೋ ಸೂಪರ್ ಜೈಂಟ್ಸ್ ತಂಡವು ಆರ್ಸಿಬಿಯನ್ನು (Royal Challengers Bengaluru) ಕೊನೆಯ ಓವರ್ನಲ್ಲಿ ಸೋಲಿಸಿ ರೋಚಕ ಜಯ ಸಾಧಿಸಿತು. ಲಕ್ನೋ ತಂಡಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿತ್ತು. ಗೆದ್ದರೆ ತನ್ನ ಪ್ಲೇಆಫ್ ಸ್ಥಾನವನ್ನು ಉಳಿಸಿಕೊಳ್ಳುವ ಅವಕಾಶ ಅತ್ತ ಆರ್ಸಿಬಿಗೂ ಗೆಲುವು ಅವಶ್ಯಕವಿತ್ತು. ಹೀಗಾಗಿ ಉಭಯ ಆಟಗಾರರು ಮೈದಾನದಲ್ಲಿ ಹೋರಾಡುತ್ತಿದ್ದರು. ಈ ಬಿಸಿ ವಾತಾವರಣದ ಮಧ್ಯೆ ಆರ್ಸಿಬಿಯ ಕೃನಾಲ್ ಪಾಂಡ್ಯ ಮತ್ತು ಲಕ್ನೋದ ನಿಕೋಲಸ್ ಪೂರನ್ ನಡುವೆ ಜಗಳ ಕೂಡ ನಡೆಯಿತು.
ಪಾಂಡ್ಯ ಮತ್ತು ಪೂರನ್ ನಡುವಿನ ಸಂಘರ್ಷ
ಈ ಘಟನೆಯು ಕೃನಾಲ್ ಪಾಂಡ್ಯ, ಅರ್ಶಿನ್ ಕುಲಕರ್ಣಿ ಅವರನ್ನು ಔಟ್ ಮಾಡಿದ ಬಳಿಕ ಹಾಗೂ ನಿಕೋಲಸ್ ಪೂರನ್ ಕ್ರೀಸ್ಗೆ ಬಂದಾಗ ಸಂಭವಿಸಿತು. ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬಂದ ನಿಕೋಲಸ್ ಪೂರನ್ ಅವರನ್ನು ಕೃನಾಲ್ ತೀಕ್ಷ್ಣವಾದ ಬೌನ್ಸರ್ ಮೂಲಕ ಸ್ವಾಗತಿಸಿದರು. ಗಂಟೆಗೆ ಸುಮಾರು 119 ಕಿ.ಮೀ ವೇಗದಲ್ಲಿ ಬಂದ ಚೆಂಡು ಪೂರನ್ ಅವರನ್ನು ಭಯ ಹುಟ್ಟಿಸಿತು.
ಮುಂದಿನ ಎಸೆತದಲ್ಲಿಯೇ ಕೃನಾಲ್ ಮತ್ತೊಂದು ಬೌನ್ಸರ್ ಎಸೆದರು, ಇದರಿಂದ ಪೂರನ್ ರನ್ ಗಳಿಸಿದರು. ರನ್ ಪೂರ್ಣಗೊಳಿಸಿದ ನಂತರ, ಪೂರನ್ ಕೃನಾಲ್ ಬಳಿ ಬಂದು ಏನೋ ಹೇಳುತ್ತಿದ್ದಂತೆ ಪರಿಸ್ಥಿತಿ ಉದ್ವಿಗ್ನವಾಯಿತು. ಇಬ್ಬರೂ ಎದುರೆದುರಾಗಿ ಕೆಲ ಸೆಕೆಂಡ್ ನಿಂತರು. ಆದಾಗ್ಯೂ, ಈ ಬಿಸಿಯ ವಾತಾರವಣ ಹೆಚ್ಚು ಕಾಲ ಉಳಿಯಲಿಲ್ಲ, ತಜ್ಷಣವೇ ಇಬ್ಬರೂ ಆಟಗಾರರು ಆಟಕ್ಕೆ ಮರಳಿದರು. ಈ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.ಪ್ಲೇಆಫ್ ರೇಸ್ಗೆ ಇನ್ನೂ ಅವಕಾಶ
ಆರ್ಸಿಬಿ ವಿರುದ್ಧದ ಈ ಗೆಲುವು ರಿಷಭ್ ಪಂತ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪ್ಲೇಆಫ್ ಭರವಸೆಯನ್ನು ಜೀವಂತವಾಗಿರಿಸಿದೆ. ಆರು ಪಂದ್ಯಗಳ ಸೋಲಿನ ಸರಣಿಯನ್ನು ಮುರಿದು, ಲಕ್ನೋ ತಮ್ಮ ಸತತ ಮೂರನೇ ಗೆಲುವು ದಾಖಲಿಸಿದೆ. ಆದಾಗ್ಯೂ, ಅವರ ಹಾದಿಯು ಅಷ್ಟೊಂದು ಸುಲಭವಾಗಿಲ್ಲ. ಎಲ್ಎಸ್ಜಿ ತಂಡವು ತಮ್ಮ ಉಳಿದ ಎಲ್ಲಾ ಪಂದ್ಯಗಳನ್ನು ಗೆಲ್ಲುವುದು ಮಾತ್ರವಲ್ಲದೆ, ಇತರ ತಂಡಗಳ ಫಲಿತಾಂಶಗಳನ್ನು ಸಹ ಅವಲಂಬಿಸಬೇಕಾಗುತ್ತದೆ. ಈ ಗೆಲುವು ಖಂಡಿತವಾಗಿಯೂ ತಂಡದ ಮನೋಸ್ಥೈರ್ಯವನ್ನು ಹೆಚ್ಚಿಸಿದೆ. ಪಂತ್ ಪಡೆ ಈಗ ಉಳಿದ ಪಂದ್ಯಗಳನ್ನು ಮಾಡು ಇಲ್ಲವೇ ಮಡಿ ಎಂಬ ಮನೋಭಾವದಿಂದ ಎದುರುಸಬೇಕಾಗಿದೆ.
