ಜಾರ್ಖಂಡ್: ಚಲಿಸುವ ರೈಲು ಹತ್ತಲು ಹೋಗಿ ಹಳಿಗಳ ನಡುವೆ ಬಿದ್ದ ತಾಯಿ; ಇಬ್ಬರು ಕಂದಮ್ಮಗಳ ಮುಂದೆಯೇ ಮಹಿಳೆ ಸಾ*ವು

ಜಾರ್ಖಂಡ್ : ಅವಳಿ ಹಸುಗೂಸುಗಳೊಂದಿಗೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಚಲಿಸುವ ರೈಲು ಹತ್ತಲು ಹೋಗಿ ಆಯತಪ್ಪಿ ಹಳಿಗಳ ನಡುವೆ ಬಿದ್ದು ಮೃತಪಟ್ಟ ಘಟನೆ ಜಾರ್ಖಂಡ್ನ ಕೊಡೆರ್ಮಾ ರೈಲು ನಿಲ್ದಾಣದಲ್ಲಿ ಶುಕ್ರವಾರ ಸಂಜೆ ನಡೆದಿದೆ. ಪಶ್ಚಿಮ ಬಂಗಾಳದ ಬರ್ಧಮಾನ್ ಜಿಲ್ಲೆಯ ಮುಸ್ಕಾನ್ ಮಾಸಿ (24) ಮೃತ ದುರ್ದೈವಿ.

ಮುಸ್ಕಾನ್ ಅವರು ತಮ್ಮ ಇಬ್ಬರು ಮಕ್ಕಳು ಮತ್ತು ಸೊಸೆಯೊಂದಿಗೆ ಸೀಲ್ಡಾ-ಜಲಿಯನ್ವಾಲಾ ಬಾಗ್ ಎಕ್ಸ್ಪ್ರೆಸ್ನಲ್ಲಿ ಅಸನ್ಸೋಲ್ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದರು. ರೈಲು ಕೊಡೆರ್ಮಾ ನಿಲ್ದಾಣದ 4ನೇ ಪ್ಲಾಟ್ಫಾರ್ಮ್ಗೆ ಬಂದಾಗ ಅವರು ಏನೋ ಸಾಮಾನು ತರಲು ಕೆಳಗಿಳಿದಿದ್ದರು. ಈ ವೇಳೆ ರೈಲು ಹೊರಟಿದ್ದು, ಚಲಿಸುತ್ತಿದ್ದ ರೈಲನ್ನು ಹತ್ತಲು ಪ್ರಯತ್ನಿಸಿದಾಗ ಎರಡು ಬೋಗಿಗಳ ನಡುವಿನ ಅಂತರದಲ್ಲಿ ಸಿಲುಕಿ ರೈಲಿನ ಚಕ್ರಕ್ಕೆ ಸಿಲುಕಿದ್ದಾರೆ.
ಅಪಘಾತದ ಹಿನ್ನೆಲೆಯಲ್ಲಿ ರೈಲು ಸುಮಾರು ಅರ್ಧ ಗಂಟೆಗಳ ಕಾಲ ನಿಲ್ದಾಣದಲ್ಲೇ ನಿಂತಿತ್ತು. ಇದರಿಂದಾಗಿ ಜನ ಶತಾಬ್ದಿ ಎಕ್ಸ್ಪ್ರೆಸ್ ಹಾಗೂ ಸ್ವರ್ಣಜಯಂತಿ ಎಕ್ಸ್ಪ್ರೆಸ್ ಸೇರಿದಂತೆ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ರೈಲ್ವೆ ಪೊಲೀಸರು (RPF) ಸ್ಥಳಕ್ಕೆ ಆಗಮಿಸಿ ಹಸುಗೂಸುಗಳನ್ನು ರಕ್ಷಿಸಿದ್ದು, ಮೃತರ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ.