ಕೋಳಿ ಸಾರು ನೀಡದಿದ್ದಕ್ಕೆ ಆಕ್ರೋಶ; ಪೈಪ್ನಿಂದ ಹೊಡೆದು ಚಿಕ್ಕಪ್ಪನನ್ನೇ ಕೊಂದ ಕಿರಾತಕ ಸೋದರಳಿಯ

ಪಾಲಕ್ಕಾಡ್: ಮನೆಯಲ್ಲಿ ತಯಾರಿಸಿದ ಕೋಳಿ ಸಾರನ್ನು ನೀಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಕೆರಳಿದ ವ್ಯಕ್ತಿಯೊಬ್ಬ ತನ್ನ ಚಿಕ್ಕಪ್ಪನನ್ನು ಪೈಪ್ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಪಾಲಕ್ಕಾಡ್ನ ಕೌಂಡನೂರಿನಲ್ಲಿ ನಡೆದಿದೆ. ಸ್ಥಳೀಯ ಪೊಲೀಸರು ಆರೋಪಿ ಪ್ರಭಾಕರನ್ (45) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.

ಮೃತಪಟ್ಟವರನ್ನು ಸೆಂಥಿಲ್ ಕುಮಾರ್ ಎಂದು ಗುರುತಿಸಲಾಗಿದೆ. ಭಾನುವಾರ ಸಂಜೆ 6:30ರ ಸುಮಾರಿಗೆ ಈ ರಕ್ತಪಾತ ನಡೆದಿದೆ. ಮನೆಯಲ್ಲಿ ಕೋಳಿ ಸಾರು ತಯಾರಿಸಿದ್ದ ಸೆಂಥಿಲ್ ಕುಮಾರ್ ಅವರು ಅದನ್ನು ಪ್ರಭಾಕರನ್ಗೆ ನೀಡಿರಲಿಲ್ಲ. ಇದರಿಂದ ತೀವ್ರ ಆಕ್ರೋಶಗೊಂಡ ಪ್ರಭಾಕರನ್, ಸೆಂಥಿಲ್ ಕುಮಾರ್ ಅವರು ಮನೆಯ ಬಳಿಯ ರಸ್ತೆಯಲ್ಲಿ ಹೋಗುತ್ತಿದ್ದಾಗ ಅವರನ್ನು ತಡೆದು ನಿಲ್ಲಿಸಿದ್ದಾನೆ.
ಮಾತಿನ ಚಕಮಕಿ ಮಿತಿಮೀರಿ ಪ್ರಭಾಕರನ್ ತನ್ನ ಬಳಿಯಿದ್ದ ಪೈಪ್ನಿಂದ ಸೆಂಥಿಲ್ ಕುಮಾರ್ ಅವರ ತಲೆ ಮತ್ತು ದೇಹಕ್ಕೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡ ಕುಮಾರ್ ಅವರನ್ನು ಪಾಲಕ್ಕಾಡ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಆರೋಪಿ ವಿರುದ್ಧ ಬಿಎನ್ಎಸ್ (BNS) ಕಾಯ್ದೆಯಡಿ ಕೊಲೆ ಪ್ರಕರಣ ದಾಖಲಾಗಿದೆ.