ಮಧ್ಯಪ್ರದೇಶ: ಅಣಕು ಚಿತೆ ಏರಿ ಬುಡಕಟ್ಟು ಮಹಿಳೆಯರ ಆಕ್ರೋಶ; ಕೆನ್-ಬೆಟ್ವಾ ನದಿ ಜೋಡಣೆ ಯೋಜನೆಗೆ ತೀವ್ರ ವಿರೋಧ

ಭೋಪಾಲ್: ನೂರಾರು ಮಂದಿ ಬುಡಕಟ್ಟು ಜನಾಂಗದ ಮಹಿಳೆಯರು ಮಧ್ಯಪ್ರದೇಶದ ಭಾತರ್ಪುರ ಜಿಲ್ಲೆಯಲ್ಲಿ ಗುರುವಾರ ಅಣಕು ಚಿತೆಯಲ್ಲಿ ಮಲಗಿ ಪ್ರತಿಭಟನೆ ನಡೆಸಿದರು. ಪ್ರಸ್ತಾವಿತ ಕೆನ್-ಬೆಟ್ವಾ ನದಿ ಜೋಡಣೆಯನ್ನು ವಿರೋಧಿಸಿ ಈ ಪ್ರತಿಭಟನೆ ನಡೆಸಿದ ರೈತ ಮಹಿಳೆಯರು ಕೊನೆಯುಸಿರು ಇರುವವರೆಗೂ ಯೋಜನೆಯನ್ನು ವಿರೋಧಿಸುವುದಾಗಿ ಎಚ್ಚರಿಕೆ ನೀಡಿದರು.
ಪುಟ್ಟ ಮಕ್ಕಳನ್ನು ಹಿಡಿದ ನೂರಾರು ಮಹಿಳೆಯರು ಚಿತೆಯಲ್ಲಿ ಮಲಗಿರುವ ದೃಶ್ಯಾವಳಿಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಚಿತಾ ಆಂದೋಲನದಲ್ಲಿ ಮಹಿಳೆಯರು ನ್ಯಾಯ ಅಥವಾ ಸಾವನ್ನು ಆಗ್ರಹಿಸಿದರು. ಅವರನ್ನು ಚದುರಿಸಲು ಪೊಲೀಸರು ಪ್ರಯತ್ನ ನಡೆಸಿದಾಗ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಯಿತು. ಕೊನೆಗೆ ಪೊಲೀಸರು ಹಿಂದಡಿ ಇಡಬೇಕಾಯಿತು.
ಆಡಳಿತ ಯಂತ್ರ ನಿರಂತರವಾಗಿ ಕಿರುಕುಳ ನೀಡುತ್ತಾ ಬಂದಿದೆ ಎಂದು ಆಪಾದಿಸಿದ ಮಹಿಳೆಯರು, ಬೇಡಿಕೆ ಈಡೇರುವವರೆಗೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಈ ಪ್ರಸ್ತಾವಿತ ಯೋಜನೆಯಡಿ ಕೆನ್ ನದಿ ಪಾತ್ರದ ನೀರನ್ನು ಜಲಕ್ಷಾಮ ಇರುವ ಬೆಟ್ಟಾ ನದಿ ಜಲಾನಯನ ಪ್ರದೇಶಕ್ಕೆ ತಿರುಗಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ದೌಧಾನ್ ಅಣೆಕಟ್ಟು ನಿರ್ಮಾಣ ಮಾಡಿ, 200 ಕಿಲೋಮೀಟರ್ ಉದ್ದದ ನಾಲೆಯ ಮೂಲಕ ನೀರು ಹರಿಸಲಾಗುತ್ತದೆ. ಜತೆಗೆ ಸಂಬಂಧಿತ ನೀರಾವರಿ ಹಾಗೂ ವಿದ್ಯುತ್ ಮೂಲಸೌಕರ್ಯಗಳೂ ನಿರ್ಮಾಣವಾಗಲಿವೆ. ಈ ಯೋಜನೆಯಿಂದ 10 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸಲು ಸಾಧ್ಯವಾಗುತ್ತದೆ ಎನ್ನುವುದು ಅಧಿಕಾರಿಗಳ ಪ್ರತಿಪಾದನೆ, 62 ಲಕ್ಷ ಮಂದಿಗೆ ಕುಡಿಯುವ ನೀರು ಹಾಗೂ ವಿದ್ಯುತ್ ಉತ್ಪಾದನೆ ಸಾಧ್ಯ ಎಂದು ಹೇಳುತ್ತಾರೆ. ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶದ ಬರಪೀಡಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಯೋಜನೆ ಉದ್ದೇಶಿಸಿದ್ದು, ಹಲವು ವರ್ಷಗಳಲ್ಲಿ ಹಂತ ಹಂತವಾಗಿ ಯೋಜನೆ ಜಾರಿಗೆ ಉದ್ದೇಶಿಸಲಾಗಿದೆ.
ಭೂಮಿ ಹಾಗೂ ಅರಣ್ಯದ ಹಕ್ಕಿಗೆ ಸಂಬಂಧಿಸಿದ ಆತಂಕವನ್ನು ಹಾಗೂ ಸ್ಥಳಾಂತರ ಭೀತಿಯ ಆತಂಕವನ್ನು ಅಧಿಕಾರಿಗಳು ನಿವಾರಿಸಿಲ್ಲ ಎನ್ನುವುದು ಗ್ರಾಮಸ್ಥರ ಅಭಿಪ್ರಾಯ.
