ಆರೆಸ್ಸೆಸ್ ಸಮಾವೇಶದಲ್ಲಿ ಸಿಪಿಐ ನಾಯಕಿ ಭಾಗಿ ಕಮ್ಯೂನಿಸ್ಟ್ ವಲಯದಲ್ಲಿ ಭಾರಿ ಸಂಚಲನ; ಶಿಸ್ತು ಕ್ರಮದ ಸಾಧ್ಯತೆ

ಮಂಜೇಶ್ವರ: ಆರೆಸ್ಸೆಸ್ ಆಯೋಜಿಸಿದ್ದ ಹಿಂದೂ ಸಮಾವೇಶದಲ್ಲಿ ಸಿಪಿಐ ನಾಯಕಿ ಭಾಗವಹಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಮೀಂಜ ಪಂಚಾಯತಿನ ಮಾಜಿ ಅಧ್ಯಕ್ಷೆ ಹಾಗೂ ಸಿಪಿಐ ಕಾಸರಗೋಡು ಜಿಲ್ಲಾ ಸಮಿತಿ ಸದಸ್ಯೆಯಾದ ಸುಂದರಿ ಶೆಟ್ಟಿ ಅವರು ಮೀಂಜದಲ್ಲಿ ನಡೆದ ಹಿಂದೂ ಸಮಾವೇಶದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಅವರು ಭಾರತಾಂಬೆಯ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ವೇದಿಕೆಯಲ್ಲಿ ಭಾಷಣ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಸಿಪಿಐ ಜಿಲ್ಲಾ ಘಟಕವು ಸುಂದರಿ ಶೆಟ್ಟಿಗೆ ಸ್ಪಷ್ಟಿಕರಣ ನೀಡುವಂತೆ ನೋಟೀಸ್ ಜಾರಿ ಮಾಡಿದೆ. ಕಮ್ಯೂನಿಷ್ಟ ಧೋರಣೆಗಳನ್ನು ಅನುಸರಿಸುವ ಪಕ್ಷದ ಹಿರಿಯ ನಾಯಕಿಯೊಬ್ಬರು ಹಿಂದೂ ಸಮಾವೇಶದಲ್ಲಿ ಪಾಲ್ಗೊಂಡಿರುವುದು ಪಕ್ಷದ ಆಂತರಿಕ ವಲಯದಲ್ಲಿ ಇರಿಸುಮುರಿಸು ಉಂಟುಮಾಡಿದೆ ಎಂದು ತಿಳಿದು ಬಂದಿದೆ.
ಈ ಘಟನೆಗೆ ಸಂಬಂಧಿಸಿ ಸುಂದರಿ ಶೆಟ್ಟಿ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
