Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಗಳಿಗಾಗಿ ‘ಗಂಡಸಾದ’ ತಾಯಿ: 30 ವರ್ಷಗಳ ಕಾಲ ವೇಷ ಮರೆಸಿ ಬದುಕಿದ ಅಮ್ಮನ ಸಾಹಸಗಾಥೆ!

Spread the love

ಚೆನ್ನೈ: ಪಿತೃಪ್ರಧಾನ ಸಮಾಜದ ಒಳಿತು-ಕೆಡಕುಗಳ ಬಗ್ಗೆ ಮಾತನಾಡುತ್ತಾ ಹೋದರೆ, ಅದಕ್ಕೆ ಕೊನೆಯೇ ಇಲ್ಲವಾಗುತ್ತದೆ. ಸಮಾಜದಲ್ಲಿ ಗಂಡಸಿಗೆ ಇರುವ ಪ್ರಾಶಸ್ತ್ಯ ಹೆಣ್ಣಿಗೆ ಇಲ್ಲದಿರುವುದು ಪಿತೃಪ್ರಧಾನ ಸಮಾಜದ ಬಹುದೊಡ್ಡ ತೊಡಕು. ಸಮಾಜದಲ್ಲಿ ಗಂಡಸಿಗೆ ಸಿಗುವ ಸ್ಥಾನಮಾನ, ಗೌರವ ಮತ್ತು ಸಾಮಾಜಿಕ ಮನ್ನಣೆ, ಹೆಣ್ಣಿಗೆ ಸಿಗದಿರುವುದು ಪಿತೃಪ್ರಧಾನ ಸಮಾಜದ ಬಹುದೊಡ್ಡ ದುರಂತಗಳಲ್ಲಿ ಒಂದು.

ಆ ದುರಂತದ ಬಲಿಪಶುಗಳು ನಮ್ಮ-ನಿಮ್ಮ ನಡುವೆಯೇ ಇದ್ದಾರೆ ಕೂಡ.

ನಮ್ಮ ಆದಿ ಸಮಾಜ ಮಾತೃಪ್ರಧಾನ ಸಮಾಜದಿಂದ ಅದ್ಯಾವಾಗ ಪಿತೃಪ್ರಧಾನ ಸಮಾಜವಾಗಿ ಬದಲಾಯಿತೋ, ಅಂದಿನಿಂದಲೇ ಹೆಣ್ಣಿನ ಅಸ್ತಿತ್ವವೇ ಗೌಣವಾಗುತ್ತಾ ಹೋಯಿತು. ಪುರುಷನಿಂದಲೇ ಎಲ್ಲವೂ ಸಾಧ್ಯ ಎಂಬ ಭಾವನೆ ಮೊಳಕೆಯೊಡೆದಿದ್ದೇ ತಡ, ಹೆಣ್ಣು ಅಬಲೆಯಾಗಿ ಕಾಣಿಸಿಕೊಳ್ಳತೊಡಗಿದಳು. ಸಾವಿರಾರು ವರ್ಷಗಳ ಸಾಮಾಜಿಕ ರಚನೆ ಕೇವಲ ಗಂಡಸಿನಲ್ಲಿ ಮಾತ್ರವಲ್ಲ, ಹೆಣ್ಣಿನಲ್ಲೂ ಇಂತಹ ಭಾವನೆ ಬೇರೂರಲು ಕಾರಣವಾಗಿದೆ.

ಈ ಭಾವನೆ ಕೇವಲ ಸಮಾಜದಲ್ಲಿ ಮಾತ್ರವಲ್ಲ, ಪ್ರತಿ ಕುಟುಂಬದಲ್ಲೂ, ಪ್ರತಿ ಮನೆಯಲ್ಲೂ ಅಂತಿಮವಾಗಿ ಪ್ರತಿಯೊಬ್ಬ ವ್ಯಕತಿಯಲ್ಲೂ ಆಳವಾಗಿ ಬೇರೂರಿದೆ. ಈ ಭಾವನೆಯ ತೀವ್ರತೆ ಎಷ್ಟಿದೆ ಎಂದರೆ ಖುದ್ದು ಹೆಣ್ಣು ಕೂಡ, ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿಲು ಗಂಡಸಿನ ವೇಷ ಧರಿಸಲು ಸಿದ್ಧವಾಗುವಷ್ಟು. ಇದಕ್ಕೆ ತಮಿಳುನಾಡಿನ ತೂತುಕುಡಿಯ ಎಸ್.‌ ಪೆಚಿಯಮ್ಮಾಳ್‌ ಅವರ ಜೀವನ ಕಥೆ ಜ್ವಲಂತ ಉದಾಹರಣೆ.

ಮುತ್ತಿನಂತ ಅವ್ವ ಈ ಮುತ್ತು ಮಾಸ್ಟರ್‌:

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಒಂದು ಸಣ್ಣ ಹಳ್ಳಿಯಲ್ಲಿ, “ಮುತ್ತು ಮಾಸ್ಟರ್” ಎಂದು ಕರೆಯಲ್ಪಡುವ ವ್ಯಕ್ತಿ, ಸಮಾಜದಲ್ಲಿ ಅತ್ಯಂತ ಗೌರವಾನ್ವಿತ ವ್ಯಕ್ತಿ. ಅವರು ಈ ಹಳ್ಳಿಯಲ್ಲಿ ದಶಕಗಳಿಂದಚಹಾ ಅಂಗಡಿ ನಡೆಸುತ್ತಿದ್ದಾರೆ. ಹಳ್ಳಿಯ ಜನ ಇವರನ್ನು ಗೌರವಪೂರ್ವಕವಾಗಿ
“ಅಣ್ಣಾಚಿ” ಎಂದೇ ಕರೆಯುತ್ತಾರೆ. ಆದರೆ ಈ ಮುತ್ತು ಮಾಸ್ಟರ್‌ ಅಸಲಿಗೆ ಯಾರು ಎಂಬುದನ್ನು ತಿಳಿದುಕೊಳ್ಳಲು ಈ ಜಗತ್ತಿಗೆ ಬರೋಬ್ಬರಿ 30 ವರ್ಷಗಳು ಬೇಕಾಯ್ತು ಎಂದರೆ ನೀವು ನಂಬಲೇಬೇಕು.

ಹೌದು, ಹಳ್ಳಿ ಜನರ ಪ್ರೀತಿಯ “ಅಣ್ಣಾಚಿ” ಗಂಡಲ್ಲ, ಓರ್ವ ಹೆಣ್ಣು. ಆಕೆಯ ನೈಜ ಹೆಸರು ಎಸ್.‌ ಪೆಚ್ಚಿಯಮ್ಮಾಳ್‌. ಹಾಗಿದ್ದರೆ ಈ ಮಹಿಳೆ ಮೂರು ದಶಕಗಳಿಂದ ಗಂಡಿನ ವೇಷದಲ್ಲಿದ್ದದ್ದು ಯಾಕೆ? ಈ ಕಥೆ ತಾಯಿಯೊಬ್ಬಳ ಅದಮ್ಯ ಪ್ರೀತಿ ಮತ್ತು ತ್ಯಾಗದ ಎಳೆಯನ್ನು ಬಿಡಿಸುತ್ತಾ ಹೋಗುತ್ತದೆ. ಪೆಚ್ಚಿಯಮ್ಮಾಳ್‌ ತನ್ನ ಮಗಳಿಗಾಗಿ ಬರೋಬ್ಬರಿ 30 ವರ್ಷಗಳ ಕಾಲ ಗಂಡಿನ ವೇಷದಲ್ಲಿ ಬದುಕಿದ ಕಥೆ ಎಂತಹವರನ್ನೂ ದಂಗುಬಡಿಸುತ್ತದೆ.

ಕೇವಲ 20ನೇ ವಯಸ್ಸಿನಲ್ಲಿ ಮದುವೆಯಾಗಿದ್ದ ಪೆಚ್ಚಿಯಮ್ಮಾಳ್‌, ತಮ್ಮ ಕೊರಳಿಗೆ ತಾಳಿ ಕಟ್ಟಿದ್ದ ಗಂಡನನ್ನು ಕೇವಲ 15 ದಿನಗಳಲ್ಲಿ ಕಳೆದುಕೊಂಡಿದ್ದರು. ಗಂಡನ ಸಾವಿನ ಕೆಲವೇ ದಿನಗಳ ಬಳಿಕ ತಾನು ಗರ್ಭಿಣಿ ಎಂಬ ಸಂಗತಿ ಕೂಡ ಆಕೆಗೆ ಗೊತ್ತಾಗಿದೆ. ಅದೇ ರೀತಿ ಪೆಚ್ಚಿಯಮ್ಮಾಳ್‌ಗೆ ಷಣ್ಮುಗಸುಂದರಿ ಎಂಬ ಹೆಣ್ಣುಮಗು ಕೂಡ ಜನಿಸುತ್ತದೆ. ಆದರೆ ಇದು ಪೆಚ್ಚಿಯಮ್ಮಾಳ್‌ಗೆ ಸಂತಸಕ್ಕಿಂತ ಚಿಂತೆಯ ಸಂಗತಿಯಾಗಿ ಕಂಡುಬಂದಿತ್ತು.

ಆದರೆ ಸಂಪ್ರದಾಯವಾದಿ ಸಮಾಜದಲ್ಲಿ ಹೆಣ್ಣು ಮಗುವನ್ನು ಹೊಂದಿರುವ ವಿಧವೆಯಾಗಿ ಕೆಲಸ ಹುಡುಕುವುದು ಕಷ್ಟಕರವಾಗಿತ್ತು.
ಸಾಮಾಜಿಕ ಸವಾಲುಗಳು ಮತ್ತು ತನ್ನ ಮಗುವಿನ ಉಳಿವಿನ ನಡುವಿನ ಆಯ್ಕೆಯನ್ನು ಎದುರಿಸಿದ ಪೆಚಿಯಮ್ಮಾಳ್, ಒಂದು ದಿನ ಆಮೂಲಾಗ್ರ ನಿರ್ಧಾರವನ್ನು ತೆಗೆದುಕೊಂಡರು. ತಮ್ಮ ಮಗಳ ಭವಿಷ್ಯಕ್ಕಾಗಿ ಪೆಚ್ಚಿಯಮ್ಮಾಳ್‌ ಗಂಡಸಾಗಿ ಬದಲಾಗುತ್ತಾರೆ. ತಮ್ಮ ತಲೆಗೂದಲನ್ನು ಚಿಕ್ಕದಾಗಿ ಕತ್ತರಿಸಿ, ಪುರುಷರ ಬಟ್ಟೆಗಳನ್ನು ಧರಿಸಲಾರಂಭಿಸಿದ ಪೆಚ್ಚಿಯಮ್ಮಾಳ್‌, ಮುತ್ತು ಮಾಸ್ಟರ್‌ ಆಗಿ ಬದಲಾಗುತ್ತಾರೆ.

ಮಗಳ ಭವಿಷ್ಯವನ್ನು ಸುಭದ್ರವಾಗಿಸುವ ಏಕೈಕ ಉದ್ದೇಶದಿಂದ, ಪೆಚ್ಚಿಯಮ್ಮಾಳ್‌ ಆರಂಭದ ದಿನಗಳಲ್ಲಿ ಚೆನ್ನೈ ಮತ್ತು ತೂತುಕುಡಿಯ ಹೋಟೆಲ್‌ಗಳಲ್ಲಿ ಸಪ್ಲೈಯರ್‌ ಆಗಿ ಕೆಲಸ ಮಾಡಿದರು. ಆ ಬಳಿಕ ಕಷ್ಟಪಟು ಸಂಪಾದಿಸಿದ ಹಣದಲ್ಲಿ ತಮ್ಮದೇ ಆದ ಸ್ವಂತ ಚಹಾ ಅಂಗಡಿಯನ್ನು ತೆರೆದರು. ಪೆಚ್ಚಿಯಮ್ಮಾಳ್‌ ಉರ್ಫ್‌ ಮುತ್ತು ಮಾಸ್ಟರ್‌ ಮಾಡುವ ಚಹಾ ಮತ್ತು ಪರೋಟಾ ತೂತುಕುಡಿಯಲ್ಲಿ ಜನಪ್ರಿಯವಾಯಿತು.

ಹೀಗೆ ತನ್ನ ಪ್ರೀತಿಪಾತ್ರ ಮಗಳಿಗಾಗಿ ಬರೀಬ್ಬರಿ 30 ವರ್ಷಗಳ ಕಾಲ ಮುತ್ತು ಮಾಸ್ಟರ್‌ ಆಗಿ ಜೀವನ ನಡೆಸಿದ ಪೆಚ್ಚಿಯಮ್ಮಾಳ್‌, ಕಷ್ಟಪಟ್ಟು ದುಡಿದು ಪ್ರತಿ ಪೈಸೆಯನ್ನೂ ಕೂಡಿಟ್ಟು ಮಗಳು ಷಣ್ಮುಗಸುಂದರಿಯನ್ನು ಬೆಳೆಸಿದ್ದಾರೆ. ಆಕೆ ಕೂಡ ಕಷ್ಟಪಟ್ಟು ಓದಿ ಉತ್ತಮ ಶಿಕ್ಷಣವನ್ನು ಪಡೆದು, ಮದುವೆಯೂ ಆಗಿ ಒಳ್ಳೆಯ ಜೀವನ ನಡೆಸುತ್ತಿದ್ದಾರೆ.ಈಗ ಪೆಚ್ಚಿಯಮ್ಮಾಳ್‌ ಅವರಿಗೆ 57 ವರ್ಷ. ತಮ್ಮ ಬದುಕಿನ ಗುರಿಯನ್ನು ತಲುಪಿದ ತೃಪ್ತಿ ಅವರಲ್ಲಿ ಎದ್ದು ಕಾಣುತ್ತದೆ.

ಹೆಣ್ಣಾಗಿ ಏನು ಮಾಡಲು ಸಾಧ್ಯವಿರಲ್ಲವೋ ಅದನ್ನು ಗಂಡಾಗಿ ಮಾಡಿದ್ದೇನೆ ಎನ್ನುವ ಸಂತೃಪ್ತಿಯ ಭಾವ ಅವರಲ್ಲಿದೆ. ಈಗ ಮತ್ತೆ ಮರಳಿ ಪೆಚ್ಚಿಯಮ್ಮಾಳ್‌ ಬದುಕನ್ನು ಬದುಕಲು ಇಷ್ಟಪಡುತ್ತೀರಾ ಎಂದರೆ, ಇಲ್ಲ ಮುತ್ತು ಮಾಸ್ಟರ್‌ ಆಗಿಯೇ ಇರಲು ಬಯಸುವುದಾಗಿ ಅವರು ಹೇಳುತ್ತಾರೆ. 30 ವರ್ಷಗಳ ಗಂಡಸಿನ ರೂಪ ಮಗತ್ತು ಬದುಕು ಅವರೊಳಗಿನ ಹೆಣ್ತನವನ್ನು ಮರೆಸಿದೆ. ಆದರೆ ಮಗಳ ವಿಚಾರಕ್ಕೆ ಬಂದಾಗ ಆಕೆ ಈಗಲೂ ಕರುಣಾಮಯಿ ತಾಯಿಯೇ ಹೌದು.

ಪೆಚ್ಚಿಯಮ್ಮಾಳ್‌ ಕಥೆ ಅನೇಕರಿಗೆ ಸ್ಪೂರ್ತಿದಾಯಕವಾಗಿ ಕಾಣುತ್ತದೆ. ಆದರೆ ಆಕೆ ಗಂಡಸಿನ ವೇಷ ಧರಿಸಲು ಕಾರಣ, ನಮ್ಮ ಪುರುಷ ಪ್ರಧಾನ ಸಮಾಜದ ದೌರ್ಬಲ್ಯಗಳು ಎಂಬುದು ನಿರ್ವಿವಾದ. ಪುರುಷ ಪ್ರಧಾನ ಸಮಾಜದಲ್ಲಿ ಸಕಾರಾತ್ಮಕ ಅಂಶಗಳಿವೆಯಾದರೂ, ಅದು ಸುರಕ್ಷಿತವಾಗಿ ಬದುಕಿನ ಬಂಡಿ ಎಳೆಯಲು ಓರ್ವ ಹೆಣ್ಣನ್ನು ಹೆಣ್ಣಾಗಿಯೇ ಇರಲು ಬಿಡದಷ್ಟು ಕ್ರೂರಿಯು ಆಗಿದೆ.


Spread the love
Share:

administrator

Leave a Reply

Your email address will not be published. Required fields are marked *