ವಾಯುವ್ಯ ದೆಹಲಿಯಲ್ಲಿ ಗುಂಡಿನ ಚಕಮಕಿ; ಸಿಗ್ಮಾ ಗ್ಯಾಂಗ್ನ ನಾಯಕ ರಂಜನ್ ಪಾಠಕ್ ಸೇರಿ ನಾಲ್ವರು ಹತ್ಯೆ

ದೆಹಲಿ: ದೆಹಲಿಯ ರೋಹಿಣಿಯಲ್ಲಿ ಬೆಳಗಿನ ಜಾವ ಪೊಲೀಸ್ ಎನ್ಕೌಂಟರ್(Police Encounter) ನಡೆದಿದೆ. ಸಿಗ್ಮಾ ಗ್ಯಾಂಗ್ನ ನಾಲ್ವರು ಮೋಸ್ಟ್ ವಾಂಟೆಡ್ ಗ್ಯಾಂಗ್ಸ್ಟರ್ಗಳನ್ನು ಹತ್ಯೆ ಮಾಡಲಾಗಿದೆ. ದೆಹಲಿ ಮತ್ತು ಬಿಹಾರ ಪೊಲೀಸರ ತಂಡಗಳು ಮತ್ತು ಗ್ಯಾಂಗ್ಸ್ಟರ್ಗಳ ನಡುವೆ ವಾಯುವ್ಯ ದೆಹಲಿಯಲ್ಲಿ ಬೆಳಗಿನ ಜಾವ 2.20 ಕ್ಕೆ ಗುಂಡಿನ ಚಕಮಕಿ ನಡೆಯಿತು.

ದೆಹಲಿ ಪೊಲೀಸ್ ಮೂಲಗಳ ಪ್ರಕಾರ, ಪೊಲೀಸರು ಗ್ಯಾಂಗ್ ಸದಸ್ಯರನ್ನು ತಡೆಯಲು ಪ್ರಯತ್ನಿಸಿದಾಗ ಎನ್ಕೌಂಟರ್ ನಡೆಯಿತು. ಗ್ಯಾಂಗ್ಸ್ಟರ್ಗಳು ಪೊಲೀಸರ ಮೇಲೆ ಗುಂಡು ಹಾರಿಸಿದಾಗ ಅವರು ಕೂಡ ಪ್ರತೀಕಾರದ ದಾಳಿ ನಡೆಸಿದರು. ನಾಲ್ವರು ಆರೋಪಿಗಳಿಗೂ ಗುಂಡೇಟಿನ ಗಾಯಗಳಾಗಿದ್ದು, ಅವರನ್ನು ರೋಹಿಣಿಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅಲ್ಲಿ ಎಲ್ಲಾ ನಾಲ್ವರು ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಗ್ಯಾಂಗ್ಸ್ಟರ್ ರಂಜನ್ ಪಾಠಕ್ (25 ವರ್ಷ), ಬಿಮ್ಲೇಶ್ ಮಹ್ತೊ (25 ವರ್ಷ), ಮನೀಶ್ ಪಾಠಕ್ (33 ವರ್ಷ) ಮತ್ತು ಅಮನ್ ಠಾಕೂರ್ (21 ವರ್ಷ) ಎಂದು ಗುರುತಿಸಲಾಗಿದೆ. ರಂಜನ್ ಪಾಠಕ್ ಅವರ ನಾಯಕನಾಗಿದ್ದ. ಸಿಗ್ಮಾ ಗ್ಯಾಂಗ್ ಬಿಹಾರದಾದ್ಯಂತ ಸುಲಿಗೆ ಮತ್ತು ಗುತ್ತಿಗೆ ಹತ್ಯೆಗಳಲ್ಲಿ ಭಾಗಿಯಾಗಿಯಾಗಿದ್ದ.
ಈ ನಾಲ್ವರು ವ್ಯಕ್ತಿಗಳು ಬಿಹಾರದಲ್ಲಿ ಕೊಲೆ, ಸುಲಿಗೆ ಮತ್ತು ಸಂಘಟಿತ ಅಪರಾಧ ಚಟುವಟಿಕೆಗಳು ಸೇರಿದಂತೆ ಹಲವಾರು ಘೋರ ಅಪರಾಧಗಳಲ್ಲಿ ಪೊಲೀಸರಿಗೆ ಬೇಕಾಗಿದ್ದರು ಎಂದು ದೆಹಲಿ ಪೊಲೀಸ್ ಮೂಲಗಳು ದೃಢಪಡಿಸಿವೆ.
ಪಾಠಕ್ನನ್ನು ಹಿಡಿದುಕೊಟ್ಟವರಿಗೆ 25,000 ರೂ. ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು . ಸೀತಾಮರ್ಹಿ ಮತ್ತು ಬಿಹಾರದ ಪಕ್ಕದ ಜಿಲ್ಲೆಗಳಲ್ಲಿ ನಡೆದ ಐದು ಪ್ರಮುಖ ಕೊಲೆಗಳು ಸೇರಿದಂತೆ ಎಂಟು ಕ್ರಿಮಿನಲ್ ಪ್ರಕರಣಗಳಲ್ಲಿ ಪಾಠಕ್ ಬೇಕಾಗಿದ್ದ.ಪಾಠಕ್ ಸಾಮಾಜಿಕ ಮಾಧ್ಯಮ ಮತ್ತು ಆಡಿಯೊ ಸಂದೇಶಗಳ ಮೂಲಕ ಪೊಲೀಸರಿಗೆ ಬಹಿರಂಗವಾಗಿ ಸವಾಲು ಹಾಕುತ್ತಿದ್ದ ಎಂದು ದೆಹಲಿ ಪೊಲೀಸ್ ಮೂಲವೊಂದು ಬಹಿರಂಗಪಡಿಸಿದೆ.
ಇತ್ತೀಚೆಗೆ ಪತ್ತೆಯಾಗಿರುವ ಆಡಿಯೊ ಕ್ಲಿಪ್ ಬಿಹಾರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಗ್ಯಾಂಗ್ ರೂಪಿಸುತ್ತಿದ್ದ ಪ್ರಮುಖ ಪಿತೂರಿಯ ವಿವರಗಳನ್ನು ಬಹಿರಂಗಪಡಿಸಿದೆ ಎನ್ನಲಾಗಿದೆ. ಎನ್ಕೌಂಟರ್ ನಂತರ, ಪ್ರದೇಶವನ್ನು ಸುತ್ತುವರಿಯಲಾಯಿತು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಂಡಗಳನ್ನು ಕರೆಸಲಾಯಿತು. ಗ್ಯಾಂಗ್ನ ಉಳಿದ ಜಾಲ ಮತ್ತು ಅವರ ಸಂಭಾವ್ಯ ಸಂಪರ್ಕಗಳನ್ನು ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ.