ಒಂದೇ ದೇವಸ್ಥಾನಕ್ಕೆ ಹೊರಟವರ ಮೇಲೆ 2 ಅಪಘಾತ: ಬಸ್ ಅಪಘಾತದಲ್ಲಿ 3 ಬಲಿ, ಬೈಕ್ ಡಿಕ್ಕಿಯಾಗಿ ಮತ್ತೋರ್ವ ಪಾದಯಾತ್ರಿ ಸಾವು

ಕೊಪ್ಪಳ: ಹುಲಿಗೆಮ್ಮ ದೇವಸ್ಥಾನದ (Huligemma Devi Temple) ಪಾದಯಾತ್ರೆಗೆ ಹೊರಟಿದ್ದರ ಮೇಲೆ ಖಾಸಗಿ ಬಸ್ (Private Bus) ಹರಿದು ಸ್ಥಳದಲ್ಲಿಯೇ ಮೂವರು ಸಾವನ್ನಪ್ಪಿ, ನಾಲ್ವರು ಗಾಯಗೊಂಡ ಘಟನೆ ಕೂಕನಪಳ್ಳಿ ಗ್ರಾಮದ ರಾ.ಹೆ. 50 ರಲ್ಲಿ ನಡೆದಿದೆ.

ಅನ್ನಪೂರ್ಣ(40),ಪ್ರಕಾಶ್(25), ಶರಣಪ್ಪ(19) ಮೃತರು. ಸಿಂದಗಿಯಿಂದ ಬೆಂಗಳೂರಿಗೆ (Bengaluru) ತೆರಳುತ್ತಿದ್ದ ಖಾಸಗಿ ಸ್ಲೀಪರ್ ಕೋಚ್ ಬಸ್ ಹರಿದ ಪರಿಣಾಮ ಮೂವರು ಮೃತಪಟ್ಟಿದ್ದಾರೆ
ಗದಗ ಜಿಲ್ಲೆಯ ರೋಣ ತಾಲೂಕಿನ ತಳ್ಳಿಹಾಳ ಗ್ರಾಮದ ಇವರು ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಸ್ಥಾನಕ್ಕೆ ಶನಿವಾರ ಪಾದಯಾತ್ರೆಗೆ ಹೊರಟಿದ್ದರು. ಇನ್ನು ಕೇವಲ ಕೇವಲ 3 ಗಂಟೆ ಕಳೆದರೆ ಇವರು ದೇವಸ್ಥಾನ ತಲುಪುತ್ತಿದ್ದರು.
ಪ್ರಾಣಾಪಾಯದಿಂದ ಪಾರಾದ ನಾಲ್ವರನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಎಸ್ಪಿ ಡಾ ರಾಮ್ ಅರಸಿದ್ದಿ ಭೇಟಿ ಪರಿಶೀಲನೆ ನಡೆಸಿದ್ದಾರೆ. ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಖಾಸಗಿ ಬಸ್ ಚಾಲಕನನ್ನು ಬಂಧಿಸಿಲಾಗಿದೆ.
ಬೈಕ್ ಡಿಕ್ಕಿಯಾಗಿ ಸಾವು: ಕುಕನೂರಿನಿಂದ ಹುಲಿಗೆಗೆ ಪಾದಯಾತ್ರೆ ಮಾಡುತ್ತಿದ್ದ ಯವಕನಿಗೆ ಬೈಕ್ ಡಿಕ್ಕಿಯಾಗಿ ಮೃತಪಟ್ಟ ಘಟನೆ ಭಾನಾಪುರ ಬಳಿ ರಾತ್ರಿ ನಡೆದಿದೆ.
ಕುಕನೂರಿನ ವೀರೇಶ ಹಳ್ಳಿಕೇರಿ (28) ಮೃತಪಟ್ಟಿದ್ದಾರೆ. ಒಟ್ಟು 9 ಭಕ್ತರು ಪಾದಯಾತ್ರೆಗೆ ಹೊರಟ್ಟಿದ್ದರು. ಭಾನಾಪುರ ಬಳಿ ಬೈಕ್ ಡಿಕ್ಕಿಯಾಗಿ ವೀರೇಶನಿಗೆ ಗಂಭೀರ ಗಾಯವಾಗಿ ಮೃತಟ್ಟಿದ್ದಾರೆ.