ಮನೆಯಲ್ಲಿಯೇ ಬಾಂಬ್ ತಯಾರಿವೇಳೆ ಸ್ಫೋಟ – ವ್ಯಕ್ತಿ ಭೀಕರವಾಗಿ ಸಾವು

ಕಾಸರಗೋಡು: ಮನೆಯೊಳಗೆ ನಾಡ ಬಾಂಬ್ ತಯಾರಿಸುತ್ತಿದ್ದಾಗ ಸ್ಫೋಟ ಸಂಭವಿಸಿ ವ್ಯಕ್ತಿಯೋರ್ವನ ದೇಹ ಛಿದ್ರಗೊಂಡು ಸಾವಿಗೀಡಾದ ಘಟನೆ ಕಣ್ಣೂರಿಗೆ ಸಮೀಪದ ಕಣ್ವಪುರ ಕಿರಳಯಿಲ್ನ ಬಾಡಿಗೆ ಮನೆಯೊಂದರಲ್ಲಿ ಆ. 30ರಂದು ಮುಂಜಾನೆ 1.51ರ ವೇಳೆಗೆ ಸಂಭವಿಸಿದೆ.

ಸ್ಫೋಟದ ಪ್ರಖರತೆಗೆ ಮನೆ ಪೂರ್ಣವಾಗಿ ಕುಸಿದಿದೆ.
ಅಲ್ಲಿದ್ದ ವ್ಯಕ್ತಿಯ ದೇಹ ಛಿದ್ರಗೊಂಡು ಅವಯವಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಸಮೀಪದ ಮನೆಗಳ ಗೋಡೆಗಳೂ ಬಿರುಕು ಬಿಟ್ಟಿವೆ. ಕೆಲವು ಮನೆಗಳ ಕಿಟಕಿ ಬಾಗಿಲಿನ ಗಾಜುಗಳು ಒಡೆದಿವೆ.
ಮನೆಯಲ್ಲಿ ಸಿಡಿಯದ ಇನ್ನೊಂದು ಬಾಂಬ್ ಹಾಗೂ ಬಾಂಬ್ ತಯಾರಿಗೆ ಬಳಸುವ ಸಾಮಗ್ರಿಗಳೂ ಪತ್ತೆಯಾಗಿವೆ. ಸ್ಫೋಟದ ಶಬ್ದದಿಂದ ಜನರು ಭಯಭೀತರಾಗಿ ಮನೆಗಳಿಂದ ಹೊರಕ್ಕೆ ಓಡಿಬಂದರು. ಈ ಬಾಡಿಗೆ ಮನೆಯಲ್ಲಿ ಇಬ್ಬರು ವಾಸಿಸುತ್ತಿದ್ದಾರೆ. ಅವರು ರಾತ್ರಿ ವೇಳೆಯಲ್ಲಿ ಮಾತ್ರವೇ ಮನೆಗೆ ಬರುತ್ತಿದ್ದರು ಎಂದು ನೆರೆಮನೆಯವರು ತಿಳಿಸಿದ್ದಾರೆ.ಪೊಲೀಸರು, ಬಾಂಬ್ ನಿಷ್ಕ್ರಿಯ ದಳದವರು, ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಈ ಕುರಿತು ಸಮಗ್ರ ತನಿಖೆ ನಡೆಯುತ್ತಿದೆ.
2016ರಲ್ಲಿ ಸಂಭವಿಸಿದ ಸ್ಫೋಟದ ಆರೋಪಿ:
ಕಿಳಿಕ್ಕೇಕರ ಗೋವಿಂದನ್ ಎಂಬವರ ಮಾಲಕತ್ವದ ಮನೆ ಇದಾಗಿದ್ದು, ಉತ್ಸವಗಳ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ಪಟಾಕಿ ಸಾಮಗ್ರಿಗಳನ್ನು ಪೂರೈಸುವ ಅನೂಪ್ ಮಾಲಿಕ್ ಎಂಬಾತ ಆ ಮನೆಯನ್ನು ಬಾಡಿಗೆಗೆ ಪಡೆದಿದ್ದು, ಆತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 2016ರಲ್ಲಿ ಕಣ್ಣೂರು ಪೊಡಿಕುನ್ನಿನ ಮನೆಯೊಂದರಲ್ಲಿ ಸ್ಫೋಟಕ ವಸ್ತು ಸಿಡಿದು ಹಾನಿ ಸಂಭವಿಸಿದ ಪ್ರಕರಣದಲ್ಲೂ ಅನೂಪ್ ಆರೋಪಿಯಾಗಿದ್ದಾನೆ. ಮೃತಪಟ್ಟಿರುವ ವ್ಯಕ್ತಿ ಕಾರ್ಮಿಕನಾಗಿದ್ದು, ಕಣ್ಣೂರು ಮಾಟ್ಟೂಲ್ ನಿವಾಸಿ ಮೊಹಮ್ಮದ್ ಅಶಾಮ್ ಎಂದು ಗುರುತಿಸಲಾಗಿದೆ ಎಂದು ಪ್ರಾಥಮಿಕ ಮಾಹಿತಿ ಲಭಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.