ಕೇರಳ: ಶಾಲಾ ಆವರಣದಲ್ಲಿ ಸ್ಫೋಟಕ ಎಸೆದ ಬಾಲಕ, ಇಬ್ಬರಿಗೆ ಗಾಯ

ತಿರುವನಂತಪುರಂ: ಶಾಲಾ ಆವರಣದಲ್ಲಿ ಸಿಕ್ಕ ವಸ್ತುವನ್ನು ಸ್ಫೋಟಕ(Explosive)ವೆಂದು ಅರಿಯದೆ ಎಸೆದ ಪರಿಣಾಮ ಸ್ಫೋಟಗೊಂಡು, ಬಾಲಕ ಸೇರಿ ಇಬ್ಬರು ಗಾಯಗೊಂಡಿರುವ ಘಟನೆ ಕೇರಳದ ಪಾಲಕ್ಕಾಡ್ ಜಿಲ್ಲೆಯ ವಡಕ್ಕಂತರಾದಲ್ಲಿ ನಡೆದಿದೆ. ಶಾಲಾ ಆವರಣದ ಹೊರಗೆ ಬುಧವಾರ ಸ್ಫೋಟಕಗಳು ಪತ್ತೆಯಾಗಿದ್ದು, ನಂತರ ಅವು ಅಪಾಯಕಾರಿ ಸ್ವರೂಪದ್ದಾಗಿದ್ದವು ಎಂದು ಪೊಲೀಸರು ಸಲ್ಲಿಸಿದ ಪ್ರಥಮ ಮಾಹಿತಿ ವರದಿ (ಎಫ್ಐಆರ್)ಯಲ್ಲಿ ತಿಳಿಸಲಾಗಿದೆ.

ಆದರೆ ಬಾಲಕ ಇದರ ಬಗ್ಗೆ ಅರಿಯದೆ ಎಸೆದಿದ್ದ, ಕಾಡು ಹಂದಿಯನ್ನು ಹೊಡೆಯಲು ಆ ಸ್ಫೋಟಕವನ್ನು ಬಳಸಲಾಗುತ್ತಿತ್ತು ಎಂದು ಹೇಳಲಾಗಿದೆ. ಸ್ಫೋಟಕಗಳಲ್ಲಿ ಒಂದನ್ನು 10 ವರ್ಷದ ಬಾಲಕ ನಾರಾಯಣನ್ ಎಂಬಾತ ಎಸೆದಿದ್ದಾನೆ. ಸಾಧನವು ಸ್ಫೋಟಗೊಂಡ ಪರಿಣಾಮವಾಗಿ, ಹುಡುಗ ಮತ್ತು ಹತ್ತಿರದಲ್ಲಿದ್ದ 84 ವರ್ಷದ ಮಹಿಳೆ ಲೀಲಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಮಧ್ಯಾಹ್ನ 3.45 ರ ಸುಮಾರಿಗೆ ವ್ಯಾಸ ವಿದ್ಯಾ ಪೀಡಂ ಪೂರ್ವ ಪ್ರಾಥಮಿಕ ಶಾಲೆಯ ಗೇಟ್ ಬಳಿ ನಾರಾಯಣನ್ಗೆ ಸ್ಫೋಟಕಗಳು ಸಿಕ್ಕಿದ್ದವು. ಏನಾಗುತ್ತೆ ನೋಡೋಣವೆಂದು ಕೆಳಕ್ಕೆ ಎಸೆದಿದ್ದಾನೆ. ಬಳಿಕ ದೊಡ್ಡ ಶಬ್ದ ಕೇಳಿಸಿತ್ತು. ಶಾಲಾ ಅಧಿಕಾರಿಗಳು ಮತ್ತು ನಿವಾಸಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಪೊಲೀಸರಿಗೆ ಮಾಹಿತಿ ನೀಡಿದರು.