ತ್ರಿಶೂರ್ನಲ್ಲಿ ಗರ್ಭಿಣಿ ಆತ್ಮಹತ್ಯೆ: ‘ಅಮ್ಮಾ, ಅವರು ನನ್ನನ್ನು ಸಾಯಿಸ್ತಾರೆ’ ಎಂದು ಮೆಸೇಜ್, ಪತಿ, ಅತ್ತೆ ಬಂಧನ!

ತ್ರಿಶೂರ್: ಅಮ್ಮಾ ನಾನು ಸಾಯ್ತೀನಿ, ಇಲ್ಲದಿದ್ದರೆ ಅವರೇ ನನ್ನನ್ನು ಸಾಯಿಸುತ್ತಾರೆ ಎಂದು ತಾಯಿಗೆ ಮೆಸೇಜ್ ಕಳುಹಿಸಿ ಗರ್ಭಿಣಿ(Pregnant) ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೇರಳದ ತ್ರಿಶೂರ್ನಲ್ಲಿ ನಡೆದಿದೆ.ತ್ರಿಶೂರ್ ಜಿಲ್ಲೆಯ ವೆಲ್ಲಂಗುಲರ್ನಲ್ಲಿರುವ ತನ್ನ ಪತಿಯ ಮನೆಯಲ್ಲಿ ಫಸೀಲಾ ಎಂಬ ಮಹಿಳೆ ನೇಣಿಗೆ ಶರಣಾಗಿದ್ದಾರೆ.

ಜುಲೈ 29ರಂದು ಘಟನೆ ನಡೆದಿದೆ. ಇರಿಂಜಲಕುಡ ಪೊಲೀಸರು ಆಕೆಯ ಪತಿ ನೌಫಲ್ ಮತ್ತು ಅತ್ತೆ ರಮ್ಲಾ ಅವರನ್ನು ಬಂಧಿಸಿದ್ದು, ಇಬ್ಬರನ್ನೂ ಬುಧವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಿತ್ಯವೂ ಅತ್ತೆ ಮನೆಯಲ್ಲಿ ಮಹಿಳೆ ನರಕ ಅನುಭವಿಸುತ್ತಿದ್ದರು. ತಾಯಿಗೆ ಕಳುಹಿಸಿರುವ ಸಂದೇಶದಲ್ಲಿ ಅತ್ತೆ ನಿತ್ಯವೂ ತನ್ನ ಮೇಲೆ ಹಲ್ಲೆ ನಡೆಸುತ್ತಾರೆ ಎಂದು ಬರೆಸಿದ್ದರು.
ತನ್ನ ತಾಯಿಗೆ ಕಳುಹಿಸಿದ ಸಂದೇಶಗಳಲ್ಲಿ, ಫಸೀಲಾ ತಾನು ಎರಡನೇ ಬಾರಿಗೆ ಗರ್ಭಿಣಿಯಾಗಿದ್ದೇನೆ ಮತ್ತು ತನ್ನ ಪತಿ ತನ್ನ ಹೊಟ್ಟೆಗೆ ಹಲವು ಬಾರಿ ಒದ್ದಿದ್ದಾನೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ನನ್ನ ಒಂದು ಕೈ ಮುರಿದಿದ್ದಾನೆ.ಕೊನೆಯ ಸಂದೇಶಗಳಲ್ಲಿ ಒಂದರಲ್ಲಿ, ಫಸೀಲಾ ತನ್ನ ತಾಯಿಗೆ ನಾನು ಸಾಯುತ್ತೇನೆ, ಇಲ್ಲದಿದ್ದರೆ ಅವರು ನನ್ನನ್ನು ಕೊಲ್ಲುತ್ತಾರೆ ಎಂದು ಬರೆದಿದ್ದಾರೆ.
ಆತ್ಮಹತ್ಯೆಗೆ ಪ್ರಚೋದನೆ ಮತ್ತು ಇತರೆ ಸಂಬಂಧಿತ ಸೆಕ್ಷನ್ಗಳಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ತ್ರಿಶೂರ್ನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ದಂಪತಿಗೆ ಒಬ್ಬ ಮಗನಿದ್ದಾನೆ.
ಕೇರಳದ ಮಹಿಳೆಯರ ಮೇಲೆ ದೌರ್ಜನ್ಯದ ಪ್ರಕರಣಗಳು ಹೆಚ್ಚುತ್ತಿರುವ ನಡುವೆ, ಕೊಲ್ಲಂನ 29ವರ್ಷದ ಅಥುಲ್ಯಾ ಎಂಬ ಮಹಿಳೆ ಜುಲೈ 21ರಂದು ಯುನೈಟೆಡ್ ಅರಬ್ ಎಮಿರೇಟ್ಸ್ನ ಅಪಾರ್ಟ್ಮೆಂಟ್ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಆಕೆಯ ಕುಟುಂಬವು ಆಕೆಯ ಪತಿಯೇ ಕೊಲೆ ಮಾಡಿದ್ದಾನೆ ಇದು ಆತ್ಮಹತ್ಯೆಯಲ್ಲ ಎಂದು ಆರೋಪಿಸಿದೆ. ಕೊಲ್ಲಂ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಅವರ ಕುಟುಂಬದ ಪ್ರಕಾರ, 2014ರಲ್ಲಿ ಮದುವೆಯಾದಾಗಿನಿಂದ ಅಥುಲ್ಯಾ ವರದಕ್ಷಿಣೆ ಬೇಡಿಕೆ ಇಟ್ಟು ನಿತ್ಯ ದೈಹಿಕ ಮತ್ತು ಮಾನಸಿಕ ಕಿರುಕುಳವನ್ನು ಎದುರಿಸುತ್ತಿದ್ದರು.
ಮತ್ತೊಂದು ಪ್ರಕರಣದಲ್ಲಿ ಜುಲೈ 8ರಂದು ಶಾರ್ಜಾದಲ್ಲಿರುವ ತಮ್ಮ ಫ್ಲಾಟ್ನಲ್ಲಿ 32 ವರ್ಷದ ವಿಪಂಚಿಕಾ ಮಣಿಯನ್ ಮತ್ತು ಅವರ ಒಂದೂವರೆ ವರ್ಷದ ಮಗಳು ಶವವಾಗಿ ಪತ್ತೆಯಾಗಿದ್ದರು. ವಿಪಂಚಿಕಾ ಬರೆದ ಆತ್ಮಹತ್ಯಾ ಪತ್ರದಲ್ಲಿ ವರ್ಷಗಳ ಕಾಲ ವರದಕ್ಷಿಣೆ ಕಿರುಕುಳ ಅನುಭವಿಸಿರುವುದಾಗಿ ಹೇಳಿದ್ದರು.
