ಎಸಿ ಸ್ಪೋಟದಿಂದ ₹25 ಲಕ್ಷ ಬೆಲೆಬಾಳುವ ವಸ್ತುಗಳ ಭಸ್ಮ

ಚಿಂತಾಮಣಿ: ತಾಲ್ಲೂಕಿನ ಕೈವಾರ ಗ್ರಾಮದ ಮನೆಯೊಂದರಲ್ಲಿ ಬುಧವಾರ ಎಸಿ ಸ್ಫೋಟಗೊಂಡು ಗೃಹ ಉಪಯೋಗಿ ವಸ್ತುಗಳು ಸುಟ್ಟು ಭಸ್ಮವಾಗಿದ್ದವು. ಸುಮಾರು ₹25 ಲಕ್ಷ ನಷ್ಟವಾಗಿದ್ದರೂ ಎಸಿ ಕಂಪನಿಯವರು ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ ಎಂದು ಮನೆ ಮಾಲೀಕರು ಆರೋಪಿಸಿದ್ದಾರೆ.
ಗ್ರಾಮದ ನಾಡಕಚೇರಿಯಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿರುವ ಮಂಜುನಾಥ್ ಅವರ ಮನೆಯಲ್ಲಿ ಬುಧವಾರ ಬೆಳಗಿನ ಜಾವ ಎಸಿ ಸ್ಫೋಟದಿಂದ ಗೃಹ ಉಪಯೋಗಿ ವಸ್ತುಗಳು ಸುಟ್ಟು ಭಸ್ಮವಾಗಿದ್ದವು. ಆ ದಿನ ಮನೆಯಲ್ಲಿ ಯಾರು ಇರಲಿಲ್ಲ.
ಮಂಜುನಾಥ್ ಮಗಳು ಅನಾರೋಗ್ಯದಿಂದ ಹೊಸಕೋಟೆಯ ಆಸ್ಪತ್ರೆಗೆ ದಾಖಲಾಗಿದ್ದರು. ಮಗಳನ್ನು ನೋಡಿಕೊಳ್ಳಲು ದಂಪತಿ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದರು. ಬೀಗ ಹಾಕಿದ್ದ ಮನೆಯಲ್ಲಿ ಬುಧವಾರ ನಸುಕಿನಲ್ಲಿ ಎಸಿ ಸ್ಫೋಟಗೊಂಡಿದೆ ಎಂದು ಮಂಜುನಾಥ್ ಅವರ ಪತ್ನಿ ಲಾವಣ್ಯ ತಿಳಿಸಿದರು.
ಮನೆಯಲ್ಲಿದ್ದ ಟಿವಿ, ಲ್ಯಾಪ್ಟಾಪ್, ಕಂಪ್ಯೂಟರ್, ಪ್ರಿಂಟರ್, ಸಂಗೀತ ಕೀಬೋರ್ಡ್, ಕುರ್ಚಿಗಳು, ಫ್ಯಾನ್, ರಿಫ್ರಿಜರೇಟರ್, ಗೀಜರ್ ಸುಟ್ಟು ಹೋಗಿವೆ. ಅಕ್ಕ ಪಕ್ಕದಲ್ಲಿ ಮನೆಗಳು ಇಲ್ಲದಿದ್ದರಿಂದ ಹೊರಗಡೆಯವರಿಗೆ ಗೊತ್ತಾಗಿಲ್ಲ. ಗುರುವಾರ ಮಂಜುನಾಥ್ ವಾಪಸ್ ಬಂದು ನೋಡಿದಾಗ ಅನುಹುತವಾಗಿರುವುದು ಗೊತ್ತಾಗಿದೆ. ಅವರು ಅಗ್ನಿಶಾಮಕದವರಿಗೆ ದೂರು ನೀಡಿದ್ದಾರೆ. ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳು ನಷ್ಟ ಹೊಂದಿರುವ ಬಗ್ಗೆ ವರದಿ ನೀಡಿದ್ದಾರೆ.
ಕಾರು ಖರೀದಿಸಲು ಮನೆಯಲ್ಲಿ ಇಟ್ಟಿದ್ದ ₹10 ಲಕ್ಷ, ರೇಷ್ಮೆ ಸೀರೆ ಹಾಗೂ ಇತರೆ ಕೆಲವು ಬೆಲೆಬಾಳುವ ವಸ್ತುಗಳು ಸುಟ್ಟು ಕರಕಲಾಗಿವೆ. ಅಂದಾಜು ₹25 ಲಕ್ಷ ನಷ್ಟವಾಗಿದೆ ಎಂದು ಮನೆ ಮಾಲೀಕರು ತಿಳಿಸಿದ್ದಾರೆ.