ಬಸ್ಸಿಗಾಗಿ ಕಾಯುತ್ತಿದ್ದ ಯುವಕನ ಕಿಡ್ನಾಪ್; ಬಲವಂತವಾಗಿ ಮಂಗಳಮುಖಿ ವೇಷ ಹಾಕಿಸಿ ಸೆಕ್ಸ್ ವರ್ಕ್ಗೆ ಬಳಸಿಕೊಂಡ ಗ್ಯಾಂಗ್

ಮೈಸೂರು: ಬಸ್ಸಿಗಾಗಿ ಕಾಯುತ್ತಿದ್ದ ಯುವಕನೋರ್ವನನ್ನು ಅಪಹರಿಸಿ, ಆತನಿಗೆ ಬಲವಂತವಾಗಿ ಮಂಗಳಮುಖಿ ವೇಷ ಹಾಕಿಸಿ, ಹಣದ ದಂಧೆ ಹಾಗೂ ಸೆಕ್ಸ್ ವರ್ಕ್ಗೆ ಬಳಸಿಕೊಂಡಿದ್ದಾರೆ ಎಂದು ಮೈಸೂರಿನ ಲಷ್ಕರ್ ಠಾಣೆಗೆ ನೊಂದ ಯುವಕ ದೂರು ನೀಡಿದ್ದಾರೆ.

ಅನಿಲ್ ಕುಮಾರ್ ಅಲಿಯಾಸ್ ಅಕ್ಷತಾ ಎಂಬುವವರೇ ನೊಂದ ಯುವಕ. ಮೈಸೂರು ಜಿಲ್ಲೆಯ ನಂಜನಗೂಡಿನ ತ್ಯಾಗರಾಜ ಕಾಲೋನಿಯ ಯುವಕ ಅನಿಲ್ ಕುಮಾರ್, 4 ತಿಂಗಳ ಹಿಂದೆ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಬಸ್ ಗಾಗಿ ಕಾಯುತ್ತಿದ್ದಾಗ ಮಂಗಳಮುಖಿ ಅನಿತಾ ಮತ್ತು ತಂಡ ಅನಿಲ್ ಕುಮಾರ್ ಗೆ ಪರಿಚಯವಾಗಿದೆ. ಅನಿಲ್ ಕುಮಾರ್ ಗೆ ಮುಸುಕು ಹಾಕಿ ಬಲವಂತವಾಗಿ ಕಿಡ್ನಾಪ್ ಮಾಡಿ ಮಂಗಳೂರಿಗೆ ಕರೆದೊಯ್ದಿದ್ದರು ಎಂದು ಆರೋಪಿಸಲಾಗಿದೆ.
ಅನಿಲ್ ಕುಮಾರ್ಗೆ ಬಲವಂತವಾಗಿ ಸೀರೆ, ನೈಟಿ, ಕಿವಿಗೆ ಓಲೆ, ಮೂಗಿಗೆ ಬೊಟ್ಟು ಹಾಕಿ ಮಂಗಳಮುಖಿಯಂತೆ ವೇಷ ಹಾಕಿಸಿ ಬಲವಂತವಾಗಿ ಬೀದಿಗಳಲ್ಲಿ ಅಂಗಡಿಗಳ ಮುಂದೆ ಕಲೆಕ್ಷನ್ ಮಾಡಿಸಿದ್ದಾರೆ. ಪ್ರತಿದಿನ 2 ರಿಂದ 3 ಸಾವಿರ ಕಲೆಕ್ಷನ್ ಮಾಡಿಸಿ ರೀಲ್ಸ್ ತಯಾರಿಸಿ ಸಾಮಾಜಿಕ ಜಾಲತಾಣದಲ್ಲೂ ಅಪ್ಲೋಡ್ ಮಾಡಿದ್ದಾರೆ.
ನಾಲ್ಕು ತಿಂಗಳ ಹಿಂದೆ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಅನಿಲ್ ಕುಮಾರ್ಗೆ ಮಂಗಳಮುಖಿ ಅನಿತಾ ಮತ್ತು ತಂಡ ಪರಿಚಯವಾಗಿತ್ತು. ನಂತರ ಆತನನ್ನು ಬಲವಂತವಾಗಿ ಅಪಹರಿಸಿದ ತಂಡ ಮಂಗಳೂರಿಗೆ ಕರೆದೊಯ್ದಿತ್ತು. ಅಲ್ಲಿ ಆತನಿಗೆ ಬಲವಂತವಾಗಿ ಸೀರೆ, ನೈಟಿ ತೊಡಿಸಿ, ಕಿವಿ ಓಲೆ, ಮೂಗುಬಟ್ಟು ಹಾಕಿಸಿ ‘ಅಕ್ಷತಾ’ ಎಂದು ಹೆಸರಿಟ್ಟು ಮಂಗಳಮುಖಿಯಾಗಿ ವೇಷ ಬದಲಿಸಿದ್ದರು ಎಂದು ಆರೋಪಿಸಲಾಗಿದೆ.
ಯುವಕ ಅನಿಲ್ನನ್ನು ಬೀದಿಗಳಲ್ಲಿ ಅಂಗಡಿಗಳ ಮುಂದೆ ನಿಲ್ಲಿಸಿ ಪ್ರತಿದಿನ 2 ರಿಂದ 3 ಸಾವಿರ ರೂಪಾಯಿ ಕಲೆಕ್ಷನ್ ಮಾಡಿಸುತ್ತಿದ್ದರು. ಅಷ್ಟೇ ಅಲ್ಲದೆ, ಮಂಗಳೂರು ಮತ್ತು ಕೇರಳದ ವಿವಿಧ ಭಾಗಗಳಿಗೆ ಕಳುಹಿಸಿ ಸೆಕ್ಸ್ ವರ್ಕ್ಗೆ ಬಳಸಿಕೊಂಡಿದ್ದಾರೆ ಎಂದು ಅನಿಲ್ ದೂರಿನಲ್ಲಿ ಆರೋಪಿಸಿದ್ದಾರೆ. ಆತನ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸಮಾಜ ಕಲ್ಯಾಣ ಇಲಾಖೆಯಿಂದ ಮಂಗಳಮುಖಿ ಎಂದು ಸರ್ಟಿಫಿಕೇಟ್ ಕೊಡಿಸಲಾಗಿದೆ. ಮುಂಬೈಗೆ ಕರೆದೊಯ್ದು ಶಸ್ತ್ರಚಿಕಿತ್ಸೆ ಮೂಲಕ ಶಾಶ್ವತವಾಗಿ ಲಿಂಗ ಬದಲಾವಣೆ ಮಾಡಲು ಈ ತಂಡ ಸ್ಕೆಚ್ ಹಾಕಿತ್ತು ಎನ್ನಲಾಗಿದೆ.
ನಂತರ ಇದರಿಂದ ನೊಂದು ಇವರ ಕಪಿಮುಷ್ಠಿಯಿಂದ ಹೊರಬರಲು ನಿರ್ಧರಿಸಿದ ಅನಿಲ್, ತಾನು ದುಡಿದ 3 ಲಕ್ಷ ರೂಪಾಯಿ ಕೇಳಿದಾಗ ಅನಿತಾ ಉಲ್ಟಾ ಹೊಡೆದಿದ್ದಾಳೆ. ತನ್ನ ಮನೆಯಿಂದ 5 ಲಕ್ಷ ರೂಪಾಯಿ ಮತ್ತು ಚಿನ್ನಾಭರಣ ಕಳ್ಳತನ ಮಾಡಿದ್ದಾನೆ ಎಂದು ಸುಳ್ಳು ಕೇಸ್ ಹಾಕಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಹೇಗೋ ಮಾಡಿ ಅಲ್ಲಿಂದ ತಪ್ಪಿಸಿಕೊಂಡು ನಂಜನಗೂಡು ಸೇರಿದರೆ, ಅಲ್ಲಿಗೂ ಮಂಗಳಮುಖಿಯರನ್ನು ಕಳಿಸಿ ದಂಧೆಗೆ ಬರುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಅನಿಲ್ ಅಳಲು ತೋಡಿಕೊಂಡಿದ್ದಾರೆ. ಸುಮಾರು ಶೇ. 90ರಷ್ಟು ದೃಷ್ಟಿ ದೋಷ ಹೊಂದಿರುವ ಅನಿಲ್ ಕುಮಾರ್, ನಂಜನಗೂಡು ಪೊಲೀಸರು ಸ್ಪಂದಿಸದ ಹಿನ್ನೆಲೆಯಲ್ಲಿ ಮೈಸೂರಿನ ಲಷ್ಕರ್ ಠಾಣೆಗೆ ದೂರು ನೀಡಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.