ಕಾಲ್ತುಳಿತಕ್ಕೆ ವಿರಾಟ್ ಕಾರಣನಾ?ಲಂಡನ್ ಪ್ರಯಾಣ ಅವಸರಕ್ಕೆ ಕಾರಣವಯಿತಾ?

ಬೆಂಗಳೂರು:ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತದ ಬಗ್ಗೆ ದೇಶವ್ಯಾಪಿ ಚರ್ಚೆಗಳು ಆರಂಭವಾಗಿವೆ. ಈ ದುರ್ಘಟನೆಯಲ್ಲಿ 11 ಆರ್ಸಿಬಿ ಅಭಿಮಾನಿಗಳು ಸಾವನ್ನಪ್ಪಿದ್ದರೆ, 40ಕ್ಕೂ ಹೆಚ್ಚು ಅಭಿಮಾನಿಗಳು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಗೆ ಕಾರಣ ಏನೆಂಬುದರ ಕುರಿತು ಅವಲೋಕಿಸಿದರೆ ಯಾವುದೇ ಯೋಜನೆ, ಪೂರ್ವ ಸಿದ್ಧತೆಗಳಿಲ್ಲದೇ ಕಾರ್ಯಕ್ರಮ ಆಯೋಜಿಸಿದ್ದು, ಸರ್ಕಾರ ತರಾತುರಿಯಲ್ಲಿ ಕಾರ್ಯಕ್ರಮಕ್ಕೆ ಬೆಂಬಲಿಸಿದ್ದು, ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕ್ರೀಡಾಂಗಣದ ಬಗ್ಗೆ ಮತ್ತು ಅಭಿಮಾನಿಗಳ ಬಗ್ಗೆ ಅರಿವಿದ್ದರೂ ದೊಡ್ಡ ಕಾರ್ಯಕ್ರಮ ನಡೆಸಲು ಮುಂದಾದದ್ದು ಹೀಗೆ ಹಲವಾರು ಕಾರಣಗಳು ಕಣ್ಮುಂದೆ ಬರಲಿವೆ.
ಈ ಕಾರಣಗಳ ಜೊತೆ ಇದೀಗ ಮತ್ತೊಂದು ಆರೋಪ ಎಕ್ಸ್ ವೇದಿಕೆಯಲ್ಲಿ ಕೇಳಿಬರುತ್ತಿದ್ದು, ಆರ್ಸಿಬಿ ಆತುರಾತುರವಾಗಿ ಕಾರ್ಯಕ್ರಮ ಆಯೋಜಿಸಲು ವಿರಾಟ್ ಕೊಹ್ಲಿಯೇ ಕಾರಣ ಎನ್ನಲಾಗುತ್ತಿದೆ. ಹೌದು, ವಿರಾಟ್ ಕೊಹ್ಲಿ ಇಂದು ಲಂಡನ್ಗೆ ತೆರಳಬೇಕಿರುವ ಕಾರಣ ನಿನ್ನೆ ತರಾತುರಿಯಲ್ಲಿ ಬೆಂಗಳೂರಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಬೇಕಾಗಿ ಬಂತು, ಇದರಿಂದಲೇ ಟ್ರೋಫಿ ಗೆದ್ದ ಮಾರನೇ ದಿನವೇ ಕಾರ್ಯಕ್ರಮ ನಡೆಸಲಾಯಿತು ಹಾಗೂ ಕಾಲ್ತುಳಿತ ಸಂಭವಿಸಿತು ಎಂದು ಆರೋಪಿಸುತ್ತಿದ್ದಾರೆ.
ಇನ್ನು ಇದಕ್ಕೆ ತಕ್ಕಂತೆ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಇಂದು ಬೆಂಗಳೂರಿನಿಂದ ಮುಂಬೈಗೆ ನಿರ್ಗಮಿಸಿದ್ದು, ಈ ವಿಡಿಯೊಗಳನ್ನು ಹಂಚಿಕೊಂಡಿರುವ ನೆಟ್ಟಿಗರು ಅವರು ಕೊಟ್ಟ ಕಾರಣಕ್ಕೆ ಇದೇ ಸಾಕ್ಷಿ, ಘಟನೆ ನಡೆದು 24 ಗಂಟೆ ಆಗಿಲ್ಲ, ಆಗಲೇ ಕೊಹ್ಲಿ ಬೆಂಗಳೂರಿನಿಂದ ಹೊರಟಿದ್ದಾರೆ ಎಂದು ಕಿರಿಕಾರಿದ್ದಾರೆ.