ಆಸ್ತಿಗಾಗಿ ಅಣ್ಣನ ಮಗನನ್ನೇ ಕೊಲೆ ಮಾಡಿದ ಚಿಕ್ಕಪ್ಪ; ಅತ್ತಿಗೆ, ಇನ್ನೋರ್ವ ಮಗನ ಮೇಲೂ ಚಾಕು ದಾಳಿ

ಸಿಂಧನೂರು : ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸ್ವಂತ ಅಣ್ಣನ ಮಗನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿ, ಅತ್ತಿಗೆಯನ್ನು ಕೊಲೆ ಮಾಡಲು ಯತ್ನಿಸಿದ ಘಟನೆ ಬುಧವಾರ ಬೆಳಗ್ಗೆ ತಾಲ್ಲೂಕಿನ ಅಲಬನೂರು ಗ್ರಾಮದಲ್ಲಿ ನಡೆದಿದೆ.
ನಾಗರಾಜ ಸಿದ್ದಪ್ಪ ಆಲ್ವಿ (12) ಕೊಲೆಯಾದ ಬಾಲಕನಾಗಿದ್ದು, ಅಮೃತಾ ಸಿದ್ದಪ್ಪ (42) ತೀವ್ರವಾಗಿ ಗಾಯಗೊಂಡಿದ್ದಾರೆ. ಮೃತ ವ್ಯಕ್ತಿಯ ಚಿಕ್ಕಪ್ಪ ಬಸವರಾಜ ರುದ್ರಪ್ಪ ಆಲ್ವಿ ಕೊಲೆ ಮಾಡಿದ ವ್ಯಕ್ತಿಯಾಗಿದ್ದಾನೆ.
ಮಂಗಳವಾರ ಅಲಬನೂರು ಗ್ರಾಮಕ್ಕೆ ಬಂದ ಕೊಲೆಗೈದ ವ್ಯಕ್ತಿ ಬಸವರಾಜ ತನ್ನ ತಾಯಿಯ ಮನೆಯಲ್ಲಿದ್ದು, ಬುಧವಾರ ಅದೇ ಗ್ರಾಮದ ತನ್ನ ಸಹೋದರ ಸಿದ್ದಪ್ಪನ ಮನೆಗೆ ಚಾಕು ಸಹಿತ ತೆರಳಿದ್ದಾನೆ. ಮನೆಯಲ್ಲಿ ಸಿದ್ದಪ್ಪ ಹೆಂಡತಿ ಅಮೃತಾ, ಮಕ್ಕಳಾದ ನಾಗರಾಜ ಮತ್ತು ಧನುಷ್ ಇದ್ದು, ಅತ್ತಿಗೆ ಮತ್ತು ಮಕ್ಕಳ ಮೇಲೆ ಚಾಕುವಿನಿಂದ ಕೊಲೆ ಮಾಡಲು ಯತ್ನಿಸಿದ್ದು, ಘಟನೆಯಲ್ಲಿ ನಾಗರಾಜ ಎನ್ನುವ ಬಾಲಕ ಸಾವನ್ನಪ್ಪಿದ್ದು, ಅಮೃತಾ ಮತ್ತು ಧನುಷ್ ಎನ್ನುವವರಿಗೆ ಗಂಭೀರ ಗಾಯಗಳಾಗಿದ್ದು, ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತರಲಾಗಿದೆ.

ಘಟನಾ ಸ್ಥಳಕ್ಕೆ ಡಿವೈಎಸ್ಪಿ ಜಿ.ಚಂದ್ರಶೇಖರ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.
ಅಲಬನೂರು ಗ್ರಾಮದ ಚಿನ್ನಮ್ಮರುದ್ರಪ್ಪ ಎನ್ನುವ ಮಹಿಳೆಗೆ ಸಿದ್ದಪ್ಪ ಹಾಗೂ ಬಸವರಾಜ ಎನ್ನುವ ಇಬ್ಬರು ಪುತ್ರರಿದ್ದು, ಸಿದ್ದಪ್ಪ ಎನ್ನುವ ಅಲಬನೂರು ಗ್ರಾಮದಲ್ಲಿ ವಾಸವಿದ್ದು ಇನ್ನೋರ್ವ ಪುತ್ರ ಬಸವರಾಜ ಸಿರುಗುಪ್ಪ ತಾಲ್ಲೂಕಿನ ಅಳ್ಳಿಗನೂರು ಗ್ರಾಮದಲ್ಲಿ ವಾಸಿಸುತ್ತಿದ್ದಾನೆ. ಇಬ್ಬರು ಸಹೋದರರ ನಡುವಿನ ಆಸ್ತಿ ವಿಚಾರ ಹಿರಿಯ ಸಹೋದರ ಸಿದ್ದಪ್ಪನ ಮಗ ನಾಗರಾಜ ಸಾವಿನಲ್ಲಿ ಅಂತ್ಯಗೊಂಡಿದೆ.