ಮುಂಬೈ ಐಐಟಿಯ ಮೂವರು ವಿದ್ಯಾರ್ಥಿಗಳ ಭೀಕರ ಸಾ*ವು: ಪುಣೆ-ಮುಂಬೈ ಹೆದ್ದಾರಿಯಲ್ಲಿ ಟ್ರಕ್ಗೆ ಕಾರು ಡಿಕ್ಕಿ

ನವಿಮುಂಬೈ: ಸೂರ್ಯೋದಯದ ದೃಶ್ಯ ಸೆರೆಹಿಡಿಯಲು ಲೋನಾವಳಿಗೆ ತೆರಳಿ ವಾಪಸ್ಸಾಗುತ್ತಿದ್ದ ಮುಂಬೈ ಐಐಟಿಯ ಮೂವರು ವಿದ್ಯಾರ್ಥಿಗಳು ಪುಣೆ-ಮುಂಬೈ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಬೇರೆ ವಾಹನವನ್ನು ಹಿಂದಿಕ್ಕುವ ಭರದಲ್ಲಿ ಇವರು ಪ್ರಯಾಣಿಸುತ್ತಿದ್ದ ಕಾರು ಟ್ರಕ್ ಗೆ ಅಪ್ಪಳಿಸಿ ಹಲವು ಸುತ್ತು ತಿರುಗಿ ಹೆದ್ದಾರಿಯಲ್ಲಿ ಉರುಳಿ ಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ.
ಟ್ರಕ್ ಚಾಲಕ ಪರಾರಿಯಾಗಿದ್ದಾನೆ. ಅಜಾಗರೂಕತೆ ಮತ್ತು ನಿರ್ಲಕ್ಷ್ಯದ ಚಾಲನೆ ಆರೋಪದಲ್ಲಿ ಆತನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಈ ವಿದ್ಯಾರ್ಥಿಗಳೊಂದಿಗೆ ಇತರ ಮೂವರು ವಿದ್ಯಾರ್ಥಿಗಳು ಪ್ರತ್ಯೇಕ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.
ಮದ್ಯಪಾನ ಮಾಡಿ ಚಾಲನೆ ಮಾಡಿದ ಸಾಧ್ಯತೆಯನ್ನು ಪೊಲೀಸರು ಅಲ್ಲಗಳೆದಿದ್ದು, ಅಟಾಪ್ಪಿ ವರದಿಗಾಗಿ ಕಾಯಲಾಗುತ್ತಿದೆ. ವಿದ್ಯಾರ್ಥಿಗಳು ಸೀಟ್ ಬೆಲ್ಟ್ ಧರಿಸಿದ್ದರೇ ಅಥವಾ ಅತಿವೇಗದಲ್ಲಿ ಕಾರು ಚಲಾಯಿಸಿದ್ದರೇ ಎಂಬುದು ಆರ್ಟಿಒ ಅಧಿಕಾರಿಗಳ ವರದಿಯಿಂದ ತಿಳಿಯಲಿದೆ ಎಂದು ಹೇಳಿದ್ದಾರೆ.
ಎಕ್ಸ್ಪ್ರೆಸ್ ಹೆದ್ದಾರಿಯನ್ನು ನಿರ್ವಹಿಸುವ ಐಆರ್ಬಿ ಇನ್ಫ್ರಾಸ್ಟ್ರಕ್ಟರ್ಗೆ ಸೇರಿದ ಸಿಸಿಟಿವಿ ದೃಶ್ಯಾವಳಿಯನ್ನು ಕೇಳಲಾಗಿದೆ. ಆದರೆ ಈ ಘಟನೆ ಸಂಭವಿಸಿದ ಸ್ಥಳದ ಸಮೀಪದ ಸಿಸಿಟಿವಿ ಕ್ಯಾಮೆರಾ ನಿಷ್ಕ್ರಿಯವಾಗಿತ್ತು ಎಂದು ಪನ್ವೇಲ್ ಠಾಣೆಯ ಇನ್ಸ್ಪೆಕ್ಟರ್ ಆನಂದ್ ಕಾಂಬ್ಳೆ ತಿಳಿಸಿದ್ದಾರೆ.
ಮೃತ ವಿದ್ಯಾರ್ಥಿಗಳ ಪೈಕಿ ಇಬ್ಬರು ಮಹಾರಾಷ್ಟ್ರದವರು. ಮೂರನೇ ವರ್ಷದ ಏರೋಸ್ಪೇಸ್ ಎಂಜಿನಿಯರಿಂಗ್ ವಿದ್ಯಾರ್ಥಿ ಓಂಕುಮಾರ್ ಬೋರ್ಸೆ (23) ನಾಸಿಕ್ನವರಾಗಿದ್ದು, ಲೇ ದೇಶಭ್ರತರ್ (20) ನಾಗುರದವರು. ಮೂರನೇ ವಿದ್ಯಾರ್ಥಿ ಶ್ರೇಯಾಂಸ್ ಶರ್ಮಾ (22) ಜೈಪುರದವರಾಗಿದ್ದು, ಮೆಕ್ಯಾನಿಕಲ್ ಎಂಜಿನಿಯರಿಂಗ್ ನಾಲ್ಕನೇ ವರ್ಷದ ವಿದ್ಯಾರ್ಥಿ.
