ಒಮಾನ್ ಹಠಾತ್ ಪ್ರವಾಹ: ಇಬ್ಬರು ಭಾರತೀಯರು ಸಾವು, ಕೇರಳದ ಮಹಿಳೆ ನಾಪತ್ತೆ; ಸಂಭ್ರಮದ ಈದ್ ಪ್ರವಾಸದಲ್ಲಿ ದುರಂತ

ಮಸ್ಕತ್: ಒಮಾನ್ನಲ್ಲಿ ಹಠಾತ್ ಪ್ರವಾಹ ಉಂಟಾಗಿ ಇಬ್ಬರು ಭಾರತೀಯರು ಸೇರಿ ನಾಲ್ವರ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಶನಿವಾರ (ಮಾ.21) ಒಮಾನ್ನಲ್ಲಿ ಧಾರಾಕಾರ ಮಳೆ ಸಂಭವಿಸಿದ್ದು, ಈ ವೇಳೆ ಪ್ರವಾಹ ಉಂಟಾಗಿದೆ. ಈ ಹಠಾತ್ ಪ್ರವಾಹದಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಪ್ರವಾಹದಲ್ಲಿ ಕೊಚ್ಚಿ ಹೋಗಿ ಕೇರಳ ಮೂಲದ ಇಬ್ಬರು ಮೃತಪಟ್ಟಿದ್ದು, ರಾಮ್ಲಾ ಎನ್ನುವ ಮತ್ತೊಬ್ಬ ಕೇರಳದ ಮಹಿಳೆ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಪ್ರವಾಹ ಉಂಟಾದ ವೇಳೆ ವಾಹನದಲ್ಲಿ ಕೇರಳದ ತ್ರಿಥಾಲದ ನಿವಾಸಿಗಳಾದ ಯೂಸುಫ್ ಮತ್ತು ಶಮ್ಲಾ ಪ್ರಯಾಣಿಸುತ್ತಿದ್ದರು. ವಾಹನದ ಜತೆಯೇ ಇಬ್ಬರು ಕೊಚ್ಚಿಕೊಂಡು ಪ್ರಾಣ ಕಳೆದುಕೊಂಡಿದ್ದಾರೆ.
ನಾಪತ್ತೆ ಆಗಿರುವ ರಾಮ್ಲಾ ಮೃತ ಯೂಸೂಫ್ ಅವರ ತಾಯಿಯಾಗಿದ್ದಾರೆ. ಮೃತ ಶಮ್ಲಾ ಒಮಾನ್ನ ಸಾಂಸ್ಕೃತಿಕ ಸಂಘಟನೆಯಾದ INCAS’ನ ನಾಯಕ ಲುಬಿಶಾದ್ ಅವರ ಪತ್ನಿ.

ಶಮ್ಲಾ – ಯೂಸೂಫ್ ಅವರ ಕುಟುಂಬ ಈದ್ ಹಬ್ಬವನ್ನು ಸಂಭ್ರಮಿಸುವ ನಿಟ್ಟಿನಲ್ಲಿ 9 ಮಂದಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಪೆಟ್ರೋಲ್ ಬಂಕ್ ಬಳಿ ಕಾರು ನಿಂತಿದ್ದ ವೇಳೆ ಏಕಾಏಕಿ ಪ್ರವಾಹ ಉಂಟಾಗಿದೆ. ಇದರಿಂದ ನಾಲ್ವರು ಮಕ್ಕಳು ಸೇರಿ 6 ಮಂದಿ ಹೇಗೋ ಅಪಾಯದಿಂದ ಪಾರಾಗಿದ್ದಾರೆ ಆದರೆ ದುರದೃಷ್ಟವಶಾತ್ ಯೂಸೂಫ್ – ಶಮ್ಲಾ ಕಾರಿನ ಜತೆಯೇ ಕೊಚ್ಚಿಕೊಂಡು ಹೋಗಿದ್ದಾರೆ.
ಕೇರಳಿಗರ ನಿಧನದ ವಿಚಾರವನ್ನು ಹಿರಿಯ ಕಾಂಗ್ರೆಸ್ ನಾಯಕ ವಿ.ಡಿ. ಸತೀಸನ್ ಅವರು ಅಧಿಕೃತಗೊಳಿಸಿದ್ದು, ಈ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಮಧ್ಯಸ್ಥಿಕೆ ವಹಿಸುವಂತೆ ಕೇಳಿಕೊಂಡಿದ್ದಾರೆ.
ಪ್ರವಾಹದಲ್ಲಿ ಪ್ರಾಣ ಕಳೆದುಕೊಂಡ ಕುಟುಂಬಕ್ಕೆ ನೆರವು ಹಾಗೂ ನಾಪತ್ತೆ ಆಗಿರುವ ಮಹಿಳೆಯ ಸುರಕ್ಷತೆಯನ್ನು ಖಚಿತಪಡಿಸಬೇಕೆಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಏಕಾಏಕಿ ಉಂಟಾದ ಪ್ರವಾಹದಲ್ಲಿ 40ಕ್ಕೂ ಅಧಿಕ ಮಂದಿಯನ್ನು ಒಮಾನ್ನ ರಕ್ಷಣಾ ಪಡೆಗಳು ಕಾರ್ಯಾಚರಣೆಯನ್ನು ನಡೆಸಿ ರಕ್ಷಣೆ ಮಾಡಿದೆ ಎಂದು ವರದಿ ತಿಳಿಸಿದೆ.
ಒಮಾನ್ನಾದ್ಯಂತ ಭಾರೀ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಮೊದಲೇ ನೀಡಲಾಗಿತ್ತು.