‘ಹೋಗಿ ದೇವರನ್ನೇ ಏನಾದರೂ ಮಾಡಲು ಹೇಳಿ’: ವಿಷ್ಣು ಮೂರ್ತಿ ದುರಸ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಮಧ್ಯಪ್ರದೇಶದಲ್ಲಿ (Madhya Pradesh) ಹಾನಿಗೊಳಗಾದ ವಿಷ್ಣು ಮೂರ್ತಿಯ (Lord Vishnu) ಪುನಃಸ್ಥಾಪನೆಗಾಗಿ ಸುಪ್ರೀಂ ಕೋರ್ಟ್ (Supreme Court) ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆ ನಡೆಸುವಾಗ ಹೇಳಿಕೆಯೊಂದನ್ನು ನೀಡಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಸೆಪ್ಟೆಂಬರ್ 16, 2025 ರಂದು, ಭಾರತದ ಸುಪ್ರೀಂ ಕೋರ್ಟ್ ಮಧ್ಯಪ್ರದೇಶದ ಖಜುರಾಹೊದಲ್ಲಿರುವ ಜವಾರಿ ದೇವಾಲಯದಲ್ಲಿ ಏಳು ಅಡಿ ಎತ್ತರದ ವಿರೂಪಗೊಂಡ ವಿಷ್ಣುವಿನ ವಿಗ್ರಹವನ್ನು ಪುನಃಸ್ಥಾಪಿಸಲು ಕೋರಿ ಸಲ್ಲಿಸಲಾದ ಅರ್ಜಿಯನ್ನು ವಜಾಗೊಳಿಸಿತು .
ದೇವಸ್ಥಾನದ ಪುನಃಸ್ಥಾಪನೆಗಾಗಿ ಅರ್ಜಿದಾರರಾದ ರಾಕೇಶ್ ದಲಾಲ್ ಎಂಬುವವರು ವಿಗ್ರಹವನ್ನು ಪುನಃಸ್ಥಾಪಿಸುವುದು ಕೇವಲ ಪುರಾತತ್ತ್ವ ಶಾಸ್ತ್ರಕ್ಕೆ ಸಂಬಂಧಿಸಿದ್ದಲ್ಲ, ಬದಲಾಗಿ ನಂಬಿಕೆ, ಘನತೆ ಮತ್ತು ಹಿಂದೂಗಳು ತಮ್ಮ ದೇವತೆಗಳನ್ನು ಸಂಪೂರ್ಣವಾಗಿ ಪೂಜಿಸುವ ಮೂಲಭೂತ ಹಕ್ಕಿಗೆ ಸಂಬಂಧಿಸಿದೆ ಎಂದು ವಾದಿಸಿದರು.
ಅಲ್ಲದೇ, ಹಿರಿಯ ವಕೀಲ ಸಂಜಯ್ ಎಂ ನುಲಿ ಪ್ರತಿನಿಧಿಸಿದ ಅವರು, ವಿಗ್ರಹವನ್ನು ದುರಸ್ತಿ ಮಾಡಲು ಮತ್ತು ದೇವಾಲಯದ ಪಾವಿತ್ರ್ಯವನ್ನು ಪುನರುಜ್ಜೀವನಗೊಳಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ಮತ್ತು ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ನ್ಯಾಯಾಲಯವನ್ನು ಕೋರಿದರು.
ಇದಕ್ಕೆ ಉತ್ತರಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಪೀಠವು, ಇದು ಸಂಪೂರ್ಣವಾಗಿ ಪ್ರಚಾರ ಹಿತಾಸಕ್ತಿ ಮೊಕದ್ದಮೆ. ಹೋಗಿ ದೇವರನ್ನೇ ಏನಾದರೂ ಮಾಡಲು ಹೇಳಿ. ನೀವು ವಿಷ್ಣುವಿನ ಕಟ್ಟಾ ಭಕ್ತ ಎಂದು ಹೇಳುತ್ತೀರಿ. ಆದ್ದರಿಂದ ಈಗಲೇ ಹೋಗಿ ಪ್ರಾರ್ಥಿಸಿ ಎಂದು ಹೇಳಿದ್ದಾರೆ.
ಪುನಃಸ್ಥಾಪನೆ ಕಾರ್ಯವನ್ನು ಕೈಗೊಳ್ಳಲು ಸರ್ಕಾರ ನಿರಂತರವಾಗಿ ನಿರಾಕರಿಸುತ್ತಿರುವುದು ಭಕ್ತರ ಪೂಜಾ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ದಲಾಲ್ ಹೇಳಿದ್ದಾರೆ. ದಯವಿಟ್ಟು ಮೂರ್ತಿ ಪುನಃಸ್ಥಾಪನೆ ಮಾಡಿಸಲು ಸರ್ಕಾರಕ್ಕೆ ಅದೇಶಿಸಿ ಎಂದು ಅರ್ಜಿದಾರರು ಮನವಿ ಮಾಡಿದರು.
ಈ ವಿಷಯ ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಒಂದು ವೇಳೆ ನೀವು ಶೈವ ಧರ್ಮವನ್ನು ವಿರೋಧಿಸದಿದ್ದರೆ, ನೀವು ಅಲ್ಲಿಗೆ ಹೋಗಿ ಪೂಜೆ ಸಲ್ಲಿಸಬಹುದು. ಖಜುರಾಹೊದಲ್ಲಿರುವ ಅತಿ ದೊಡ್ಡ ಶಿವಲಿಂಗಗಳಲ್ಲಿ ಒಂದಾದ ಒಂದು ದೊಡ್ಡ ಶಿವಲಿಂಗವಿದೆ, ಅಲ್ಲಿ ಹೋಗಿ ಪೂಜೆ ಸಲ್ಲಿಸಿ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿದೆ.
ಸದ್ಯ ನ್ಯಾಯಾಧೀಶರ ಈ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಸಿಜೆಐ ಗವಾಯಿ ಅವರಿಗೆ ಪತ್ರ ಬರೆದು, ವಿಷ್ಣು ಮತ್ತು ಸನಾತನ ಧರ್ಮದ ವಿರುದ್ಧದ ಹೇಳಿಕೆಯನ್ನು ಹಿಂಪಡೆಯುವಂತೆ ಕೋರಿದ್ದಾರೆ.