ಆಂತರಿಕ ತನಿಖೆ ಪ್ರಶ್ನಿಸಿದ್ದ ನ್ಯಾಯಮೂರ್ತಿಗೆ ಸುಪ್ರೀಂ ಶಾಕ್: ವರ್ಮಾ ಅರ್ಜಿ ವಜಾ

ನವದೆಹಲಿ: ತಮ್ಮ ವಿರುದ್ಧದ ಆತಂರಿಕ ತನಿಖೆ ವರದಿಯನ್ನು ಪ್ರಶ್ನಿಸಿ ನ್ಯಾಯಮೂರ್ತಿ ಯಶವಂತ್ ವರ್ಮಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ.

ನ್ಯಾ.ದೀಪಂಕರ್ ದತ್ತ ಮತ್ತು ಎ.ಜಿ.ಮಸಿಹ್ ಅವರ ಪೀಠವು ಆಂತರಿಕ ಸಮಿತಿಯ ರಚನೆ ಮತ್ತು ವಿಚಾರಣಾ ಕಾರ್ಯವಿಧಾನವು ಕಾನೂನುಬಾಹಿರವಲ್ಲ ಎಂದು ಅಭಿಪ್ರಾಯಪಟ್ಟಿದೆ. ನಗದು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಹುದ್ದೆಯಿಂದ ತೆಗೆದುಹಾಕುವಂತೆ ಶಿಫಾರಸು ಮಾಡಿದ ಭಾರತದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ನೇತೃತ್ವದ ಸಮಿತಿಯ ಶಿಫಾರಸನ್ನು ಪ್ರಶ್ನಿಸಿ ವರ್ಮಾ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಈ ಬಗ್ಗೆ ಇಂದು ತೀರ್ಪು ನೀಡಿದ ಕೋರ್ಟ್, ಈ ಪ್ರಕರಣದಲ್ಲಿ ಆಗಿನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿದ ಪತ್ರವು ಸಂವಿಧಾನಬಾಹಿರವಲ್ಲ ಎಂದು ಒಪ್ಪಿಕೊಂಡಿದೆ. ನ್ಯಾಯಾಲಯವು ಆಂತರಿಕ ತನಿಖಾ ಪ್ರಕ್ರಿಯೆಯನ್ನು ನಿಯಮಗಳ ಪ್ರಕಾರವೇ ಮಾಡಲಾಗಿದೆ ಎಂದು ಹೇಳಿದೆ.
ಮುಖ್ಯ ನ್ಯಾಯಾಧೀಶರಿಗೆ ಕೇವಲ ಹೆಸರಿಗೆ ಮಾತ್ರ ಹುದ್ದೆಯಲ್ಲ. ಅವರು ದೇಶ ಮತ್ತು ನ್ಯಾಯಾಂಗದ ಬಗ್ಗೆ ಜವಾಬ್ದಾರಿಗಳನ್ನು ಹೊಂದಿದ್ದಾರೆ. ಅವರು ಕೇವಲ ಅಂಚೆ ಕಚೇರಿಯಂತೆ ಕೆಲಸ ಮಾಡಲು ಸಾಧ್ಯವಿಲ್ಲ. ನ್ಯಾಯಮೂರ್ತಿ ವರ್ಮಾ ಅವರ ನಡವಳಿಕೆ ನ್ಯಾಯಾಂಗದ ಘನತೆಗೆ ಅನುಗುಣವಾಗಿಲ್ಲ. ಅವರ ವಿರುದ್ಧ ತೆಗೆದುಕೊಂಡ ತನಿಖೆ ಮತ್ತು ಕ್ರಮ ಸರಿಯಾಗಿದೆ ಎಂದು ಕೋರ್ಟ್ ಹೇಳಿದೆ
ಹಿಂದಿನ ವಿಚಾರಣೆಯ ಸಮಯದಲ್ಲಿ, ನ್ಯಾ. ವರ್ಮಾ ಅವರು ಆಂತರಿಕ ಸಮಿತಿಯ ರಚನೆಯು ಅಸಾಂವಿಧಾನಿಕ ಎಂದು ವಾದಿಸಿದ್ದರು. ಆರಂಭದಲ್ಲಿಯೇ ಅದನ್ನು ಏಕೆ ಆಕ್ಷೇಪಿಸಲಿಲ್ಲ ಎಂದು ನ್ಯಾಯಪೀಠ ಅವರಿಗೆ ಪ್ರಶ್ನಿಸಿತ್ತು. ಯಶವಂತ್ ವರ್ಮಾ ವಿರುದ್ಧದ ದೋಷಾರೋಪಣೆ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸಂಸತ್ತಿಗೆ ಈ ತೀರ್ಪು ಹಾದಿಯಾಗಿದೆ.
ನ್ಯಾ. ವರ್ಮಾ ಅವರ ದೆಹಲಿಯ ನಿವಾಸದಲ್ಲಿ ಸಂಭವಿಸಿದ ಅಗ್ನಿ ಅವಘಡದ ವೇಳೆ ಭಾರೀ ಪ್ರಮಾಣದ ನಗದು ಪತ್ತೆಯಾಗಿತ್ತು. ಈ ಘಟನೆ ನಂತರ ಅವರನ್ನು ದೆಹಲಿ ಹೈಕೋರ್ಟ್ನಿಂದ ಅಲಹಾಬಾದ್ ಹೈಕೋರ್ಟ್ಗೆ ವರ್ಗಾಯಿಸಲಾಯಿತು. ಭ್ರಷ್ಟಾಚಾರದ ಆರೋಪಗಳ ಹಿನ್ನಲೆಯಲ್ಲಿ ಆಗಿನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ತ್ರಿಸದಸ್ಯ ಸಮಿತಿಯನ್ನು ರಚಿಸಿದ್ದರು.