ದೆಹಲಿ ಕರ್ನಾಟಕ ಭವನದಲ್ಲಿ ಅಧಿಕಾರಿಗಳ ಬೀದಿ ಜಗಳ: ಬೂಟು ಕಳಚಿ ಹೊಡೆಯುವ ಬೆದರಿಕೆ ಆರೋಪ

ನವದೆಹಲಿ: ದೆಹಲಿ ಕರ್ನಾಟಕ ಭವನದಲ್ಲಿ ಬೀದಿ ಜಗಳ ಪ್ರಕರಣವೊಂದು ನಡೆದಿದೆ. ಸರ್ಕಾರದ ಅಧಿಕಾರಿಗಳ ನಡುವೆಯೇ ಬೀದಿ ಕಾಳಗ ಆಗಿದೆ. ಸಿಎಂ ಮತ್ತು ಡಿಸಿಎಂ ವಿಶೇಷ ಕರ್ತವ್ಯ ಅಧಿಕಾರಿಗಳು ಪರಸ್ಪರ ಕಿತ್ತಾಡಿಕೊಂಡಿದ್ದಾರೆ.

ಸಿಎಂ ವಿಶೇಷ ಕರ್ತವ್ಯ ಅಧಿಕಾರಿ ಸಿ.ಮೋಹನ್ ಕುಮಾರ್ ಅವರು ಅಧಿಕಾರದ ದರ್ಪ ತೋರಿದ್ದಾರೆಂಬ ಆರೋಪ ಕೇಳಿಬಂದಿದೆ. ಸಹಾಯಕ ನಿವಾಸಿ ಆಯುಕ್ತರೂ ಆಗಿರುವ ಮೋಹನ್ ಕುಮಾರ್, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ವಿಶೇಷ ಕರ್ತವ್ಯ ಅಧಿಕಾರಿಯಾಗಿರುವ ಹೆಚ್.ಆಂಜನೇಯ ಅವರಿಗೆ ಬೂಟು ಕಳಚಿಕೊಂಡು ಹೊಡೆಯುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಕರ್ನಾಟಕ ಭವನದಲ್ಲಿ ಇತರೆ ಸಿಬ್ಬಂದಿಗಳ ಎದುರಲ್ಲೇ ಬೆದರಿಕೆ ಹಾಕಿದ್ದಾರೆಂಬ ಮಾತು ಕೇಳಿಬಂದಿದೆ. ಬೆದರಿಕೆ ಹಾಕಿದ ಬಗ್ಗೆ ಡಿಸಿಎಂ ವಿಶೇಷ ಕರ್ತವ್ಯ ಅಧಿಕಾರಿ ಹೆಚ್.ಆಂಜನೇಯ ದೂರು ನೀಡಿದ್ದಾರೆ. ಕರ್ನಾಟಕ ಭವನ ನಿವಾಸಿ ಆಯುಕ್ತರು, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ಕೊಟ್ಟಿದ್ದಾರೆ.
ದೂರಿನ ಬಳಿಕ ಈ ಬಗ್ಗೆ ಪರಿಶೀಲನೆ ನಡೆಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೂಚನೆ ನೀಡಿದ್ದಾರೆ.