ಮಾರ್ಗಸೂಚಿ ಉಲ್ಲಂಘಿಸಿ ಇಫ್ತಾರ್ ಕೂಟದಲ್ಲಿ ಭಾಗಿ: ಪಶ್ಚಿಮ ಬಂಗಾಳದಲ್ಲಿ 7 ಅರೆಸೇನಾ ಪಡೆ ಸಿಬ್ಬಂದಿಗಳ ವಿರುದ್ಧ ಇಸಿ ಶಿಸ್ತುಕ್ರಮ

ಹೊಸದಿಲ್ಲಿ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಚುನಾವಣಾ ಕತ್ಯವ್ಯಕ್ಕೆ ನಿಯೋಜಿತ ಏಳು ಅರೆಸೇನಾ ಪಡೆ ಸಿಬ್ಬಂದಿಗಳು ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಅವರ ವಿರುದ್ಧ ಚುನಾವಣಾ ಆಯೋಗವು (ಇಸಿ) ಶಿಸ್ತುಕ್ರಮವನ್ನು ಜರುಗಿಸಿದೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.
ಇಬ್ಬರು ಸಿಬ್ಬಂದಿಗಳನ್ನು ಕೇಂದ್ರೀಯ ಪಡೆಗಳ ಕಸ್ಟಡಿಯಲ್ಲಿ ಇರಿಸಲಾಗಿದ್ದು, ಉಳಿದ ಐವರನ್ನು ರಾಜ್ಯದಿಂದ ಹೊರಗೆ ವರ್ಗಾಯಿಸಲಾಗಿದೆ ಎಂದರು.
ಒಂದು ವಾರದ ಹಿಂದೆ ರಮಝಾನ್ ಮಾಸದಲ್ಲಿ ಮುರ್ಷಿದಾಬಾದ್ನ ನಿಮಿಟ್ಟಾದಲ್ಲಿ ನಡೆದಿದ್ದ ಇಫ್ತಾರ್ ಕೂಟದಲ್ಲಿ ಈ ಸಿಬ್ಬಂದಿಗಳು ಭಾಗವಹಿಸಿದ್ದರು ಎಂದು ಅಧಿಕಾರಿ ತಿಳಿಸಿದರು.

ಚುನಾವಣಾ ಆಯೋಗವು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ. ಚುನಾವಣಾ ಕರ್ತವ್ಯಕ್ಕೆ ನಿಯೋಜಿತ ಸಿಬ್ಬಂದಿಗಳು ಸಾಮಾಜಿಕ ಸಮಾರಂಭಗಳಲ್ಲಿ ಭಾಗವಹಿಸಲು ಅಥವಾ ಸ್ಥಳೀಯ ವ್ಯಕ್ತಿಗಳಿಂದ ಯಾವುದೇ ಆತಿಥ್ಯವನ್ನು ಸ್ವೀಕರಿಸಲು ಅನುಮತಿಯಿಲ್ಲ ಎಂದು ಚುನಾವಣಾ ಆಯೋಗದ ಅಧಿಕಾರಿಯೋರ್ವರು ತಿಳಿಸಿದರು.
ಸ್ಥಳೀಯ ಪಂಚಾಯತ್ ಪ್ರಧಾನರ ಪತಿ ಇಫ್ತಾರ್ ಕೂಟವನ್ನು ಆಯೋಜಿಸಿದ್ದರು ಎನ್ನಲಾಗಿದೆ. ಕೂಟದ ಛಾಯಾಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಚುನಾವಣಾ ಆಯೋಗದ ಗಮನ ಸೆಳೆದಿವೆ.
ಆದರೆ ಆರೋಪಗಳನ್ನು ನಿರಾಕರಿಸಿರುವ ಸಿಬ್ಬಂದಿಗಳು, ಇಫ್ತಾರ್ ಕೂಟವನ್ನು ಬಿಎಸ್ಎಫ್ ಶಿಬಿರದಲ್ಲಿ ಆಯೋಜಿಸಲಾಗಿತ್ತು ಮತ್ತು ಸ್ಥಳೀಯ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗಿತ್ತು ಎಂದು ಪ್ರತಿಪಾದಿಸಿದ್ದಾರೆ.
‘ಈ ವಿಷಯ ನಮ್ಮ ಗಮನಕ್ಕೆ ಬಂದ ಬಳಿಕ ಇಲಾಖಾ ವಿಚಾರಣೆಯನ್ನು ಆರಂಭಿಸಲಾಗಿದೆ. ಲಭ್ಯ ಮಾಹಿತಿಗಳ ಆಧಾರದಲ್ಲಿ ಅರೆಸೇನಾ ಪಡೆ ನಿಯಮಗಳಿಗೆ ಅನುಗುಣವಾಗಿ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದರು.
ಚುನಾವಣಾ ಕರ್ತವ್ಯಗಳಿಗೆ ನಿಯೋಜಿತ ಕೇಂದ್ರೀಯ ಪಡೆಗಳು ಕಟ್ಟುನಿಟ್ಟಾದ ತಟಸ್ಥತೆಯನ್ನು ಕಾಯ್ದುಕೊಳ್ಳಬೇಕು ಮತ್ತು ಸ್ಥಳೀಯರಿಂದ ಅಂತರ ಕಾಯ್ದುಕೊಳ್ಳಬೇಕು ಎಂದು ಚುನಾವಣಾ ಆಯೋಗವು ಹೇಳಿದೆ.
294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಎ.23 ಮತ್ತು ಎ.29ರಂದು ಎರಡು ಹಂತಗಳಲ್ಲಿ ನಡೆಯಲಿದ್ದುಮೇ 4ರಂದು ಮತಗಳ ಎಣಿಕೆ ನಡೆಯಲಿದೆ.