ಸಂಸದೆ ಮಿತಾಲಿ ಬಾಗ್ ಕಾರಿನ ಮೇಲೆ ಕಲ್ಲು ತೂರಾಟ; ಬಿಜೆಪಿ ವಿರುದ್ಧ ಟಿಎಂಸಿ ಸಂಸದೆ ಗಂಭೀರ ಆರೋಪ

ಕೋಲ್ಕತಾ,: ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಭಿಶೇಕ್ ಬ್ಯಾನರ್ಜಿಯ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಲು ಹೋಗುತ್ತಿದ್ದಾಗ ಹೂಗ್ಲಿ ಜಿಲ್ಲೆಯ ಗೋಘಟ್ನಲ್ಲಿ ಬಿಜೆಪಿ ಬೆಂಬಲಿಗರು ತನ್ನ ಕಾರನ್ನು ಧ್ವಂಸಗೊಳಿಸಿದ್ದಾರೆ ಎಂದು ಅರಾಮ್ಹಾಗ್ ಕ್ಷೇತ್ರದ ಟಿಎಂಸಿಸಂಸದೆ ಮಿತಾಲಿ ಬಾಗ್ ಸೋಮವಾರ ಆರೋಪಿಸಿದ್ದಾರೆ.
ಘಟನೆಯ ಬಗ್ಗೆ ವರದಿ ಕೇಳಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ಹೇಳಿದರು. ಆ ಸ್ಥಳದಲ್ಲಿ ಕೇಂದ್ರೀಯ ಪಡೆಗಳನ್ನು ನಿಯೋಜಿಸಲಾಗಿದೆ ಎಂಬುದಾಗಿಯೂ ಅವರು ತಿಳಿಸಿದರು.
ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಚುನಾವಣಾ ಕಚೇರಿ ಬಳಿ ಬಿಜೆಪಿ ಬೆಂಬಲಿತ ದುಷ್ಕರ್ಮಿಗಳು ತನ್ನ ಕಾರಿನತ್ತ ಕಲ್ಲುಗಳನ್ನು ಎಸೆದು ಗಾಜುಗಳನ್ನು ಪುಡಿ ಮಾಡಿದರು ಎಂದು ಫೇಸ್ಟುಕ್ ಲೈವ್ ವೀಡಿಯೊದಲ್ಲಿ ಮಿತಾಲಿ ಬಾಗ್ ಹೇಳಿದ್ದಾರೆ.
ಅಭಿಶೇಕ್ ಬ್ಯಾನರ್ಜಿಯ ಚುನಾವಣಾ ಪ್ರಚಾರ ಸಭೆಗೆ ಹೋಗುತ್ತಿದ್ದಾಗ, ಬಿಜೆಪಿ ಅಭ್ಯರ್ಥಿ ಪ್ರಶಾಂತ ದಿಗರ್ ಕಚೇರಿಯ ಎದುರು ಕುಳಿತಿದ್ದ ಕೆಲವು ಬಿಜೆಪಿ ಕಾರ್ಯಕರ್ತರು ಲಾಠಿ ಜಳಪಿಸುತ್ತಾ ದಾರಿಗಡ್ಡಗಟ್ಟಿದರು ಹಾಗೂ ನಮ್ಮ ವಾಹನದತ್ತ ಕಲ್ಲುಗಳನ್ನು ಎಸೆದರು ಎಂದು ದಲಿತ ಸಮುದಾಯದ ಅರಮ್ಯಾಗ್ ಸಂಸದೆ ಆರೋಪಿಸಿದರು.
ಇದರ ಹೊಣೆಯನ್ನು ಚುನಾವಣಾ ಆಯೋಗವೇ ಹೊರಬೇಕು ಎಂದು ಹೇಳಿದ ಅವರು, ಬಿಜೆಪಿಯು ಟಿಎಂಸಿ ಕಾರ್ಯಕರ್ತರ ಮೇಲೆ ಅಪ್ರಚೋದಿತ ದಾಳಿಗಳನ್ನು ನಡೆಸುತ್ತಿದೆ ಎಂದು ಆರೋಪಿಸಿದರು.
ಆರೋಪಗಳನ್ನು ತಿರಸ್ಕರಿಸಿರುವ ಬಿಜೆಪಿ, ಈ ಸಂಸದೆ “ನಾಟಕ” ಮಾಡುತ್ತಿದ್ದಾರೆ ಎಂದು ಹೇಳಿದೆ. ವಾಸ್ತವವಾಗಿ, ಬಿಜೆಪಿ ಬೆಂಬಲಿಗರ ಮೇಲೆ ಟಿಎಂಸಿ ಕಾರ್ಯಕರ್ತರೇ ದಾಳಿ ಮಾಡಿದ್ದಾರೆ ಎಂದು ಆರೋಪಿಸಿದೆ.
