ಸಿಂಧನೂರು: ಲಾರಿ-ಹಾಲಿನ ಟ್ಯಾಂಕರ್ ಮುಖಾಮುಖಿ ಡಿಕ್ಕಿ; ಲಾರಿ ಚಾಲಕ ಸ್ಥಳದಲ್ಲೇ ಸಾ*ವು

ಸಿಂಧನೂರು : ತಾಲ್ಲೂಕಿನ ಹಂಚಿನಾಳ ಕ್ಯಾಂಪ್ ಬಳಿ ಮಂಗಳವಾರ ಬೆಳಗ್ಗೆ ಲಾರಿ ಮತ್ತು ಹಾಲಿನ ಟ್ಯಾಂಕರ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ್ದು, ಲಾರಿ ಚಾಲಕ ಸಾವನ್ನಪ್ಪಿದರೆ, ಹಾಲಿನ ಟ್ಯಾಂಕರ್ ಚಾಲಕನ ಸ್ಥಿತಿ ಗಂಭೀರವಾಗಿದ್ದು, ಹಲವರಿಗೆ ಗಾಯಗಳಾಗಿವೆ.
ಗೊಬ್ಬರ ತುಂಬಿದ ಲಾರಿಯ ಚಾಲಕ ರಾಯಚೂರಿನ ಸಿಯಾತಲಾಬ್ ನ ನಿವಾಸಿ ಶೇಖ್ ಅಬ್ದುಲ್ಲಾ (23) ಮೃತ ವ್ಯಕ್ತಿ. ಹಾಲಿನ ಟ್ಯಾಂಕರ್ ಚಾಲಕ ಶ್ರೀಕಾಂತ ಎನ್ನುವವನ ಸ್ಥಿತಿ ಗಂಭೀರವಾಗಿದ್ದು, ಇಸಾಕ್ ಹಾಗೂ ರಾಜಾಸಾಬ್ ಎಂಬವರಿಗೆ ಗಾಯಗಳಾಗಿವೆ.

ಗೊಬ್ಬರ ತುಂಬಿದ ಲಾರಿ ಸಿಂಧನೂರಿನಿಂದ ಕಾರಟಗಿ ಕಡೆಗೆ ಹೊರಟಿದ್ದು, ಹಾಲಿನ ಟ್ಯಾಂಕರ್ ಕಾರಟಗಿಯಿಂದ ಸಿಂಧನೂರಿನ ಕಡೆಗೆ ಬರುವಾಗ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಇದೇ ಸಂದರ್ಭದಲ್ಲಿ ಹಿಂಬದಿಯಿಂದ ಬಂದ ಬೈಕ್, ಲಾರಿಗೆ ಢಿಕ್ಕಿ ಹೊಡೆದಿದ್ದು, ಬೈಕ್ ನಲ್ಲಿದ್ದ ಕಾರಟಗಿ ತಾಲ್ಲೂಕಿನ ಗುಂಡೂರು ಗ್ರಾಮದ ಆಂಜನೇಯ, ವಿರೂಪಾಕ್ಷಿ ಮತ್ತು ಕರಿಬಸಪ್ಪ ಎಂಬವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ.
ಘಟನೆಯ ತೀವ್ರತೆಗೆ ಲಾರಿ, ಹಾಲಿನ ಟ್ಯಾಂಕ್ ಮತ್ತು ಬೈಕ್ ನಜ್ಜುಗುಜ್ಜಾಗಿದ್ದು, ಗಾಯಾಳುಗಳನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಹಿನ್ನಲೆ ಕೆಲ ಕಾಲ ಸಂಚಾರಿ ಸಮಸ್ಯೆ ಎದುರಾಯಿತು.
ಡಿವೈಎಸ್ಪಿ ಚಂದ್ರಶೇಖರ್, ಗ್ರಾಮೀಣ ಸಿಪಿಐ ವಿನಾಯಕ, ಪಿಎಸ್ಐ ಮೌನೇಶ್ ಅವರು ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ