ದೆಹಲಿಯಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವ ಕೃತ್ಯ: ಜಿಮ್ ಮಾಲೀಕನ ಮೇಲೆ ಹಲ್ಲೆ, ಪತ್ನಿಗಷ್ಟೇ ಅಲ್ಲದೆ ಮಗನನ್ನು ಬೆತ್ತಲೆಗೊಳಿಸಿ ಅಮಾನವೀಯ ಹಿಂಸೆ!

ನವದೆಹಲಿ: ದೇಶದ ರಾಜಧಾನಿ ದೆಹಲಿಯ ಲಕ್ಷ್ಮಿನಗರದಲ್ಲಿ ಮನುಷ್ಯತ್ವವೇ ಮರೆತಂತಿರುವ ಘೋರ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಜನವರಿ 2 ರಂದು ನಡೆದ ಈ ಅಟ್ಟಹಾಸದ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿದ್ದು, ಇಡೀ ಸಮಾಜವೇ ಆಘಾತಕ್ಕೊಳಗಾಗಿದೆ. ಜಿಮ್ ಮಾಲೀಕ ರಾಜೇಶ್ ಗರ್ಗ್ ಎಂಬುವವರ ಮೇಲೆ ಹಣಕಾಸಿನ ವಿಚಾರವಾಗಿ ಜಿಮ್ ಉಸ್ತುವಾರಿ ಸತೀಶ್ ಯಾದವ್ ಮತ್ತು ಆತನ ತಂಡ ಭೀಕರವಾಗಿ ಹಲ್ಲೆ ನಡೆಸಿದೆ. ಅಷ್ಟಕ್ಕೇ ನಿಲ್ಲದ ಕಾಮುಕರು ರಾಜೇಶ್ ಅವರ ಪತ್ನಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ.


ಅತಿ ಘೋರವೆಂದರೆ, ತಂದೆ-ತಾಯಿಯನ್ನು ರಕ್ಷಿಸಲು ಬಂದ ಮಗನನ್ನು ಹಿಡಿದು ಎಳೆದಾಡಿದ ದುಷ್ಕರ್ಮಿಗಳು, ಆತನನ್ನು ಬೀದಿಯಲ್ಲೇ ವಿವಸ್ತ್ರಗೊಳಿಸಿ ಎಲ್ಲರ ಮುಂದೆ ಅಮಾನವೀಯವಾಗಿ ಚಿತ್ರಹಿಂಸೆ ನೀಡಿದ್ದಾರೆ.

ಈ ಘಟನೆಗೆ ಜಿಮ್ ವ್ಯವಹಾರದ ವಂಚನೆ ಮತ್ತು ಹಳೇ ದ್ವೇಷವೇ ಕಾರಣ ಎಂದು ಹೇಳಲಾಗಿದೆ. ಘಟನೆಯ ದಿನ ರಾಜೇಶ್ ಮತ್ತು ಅವರ ಪತ್ನಿ ನೀರಿನ ಸೋರಿಕೆ ವೀಕ್ಷಿಸಲು ನೆಲಮಾಳಿಗೆಗೆ ಹೋದಾಗ ಈ ದಾಳಿ ನಡೆದಿದೆ. ಈ ಸಂಬಂಧ ದೂರು ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು ಮುಖ್ಯ ಆರೋಪಿ ಸತೀಶ್ ಯಾದವ್ನನ್ನು ಬಂಧಿಸಿದ್ದಾರೆ. ಆದರೆ, ಕೃತ್ಯದಲ್ಲಿ ಭಾಗಿಯಾದ ವಿಕಾಸ್ ಯಾದವ್, ಶುಭಂ ಮತ್ತು ಓಂಕಾರ್ ಎಂಬುವವರು ತಲೆಮರೆಸಿಕೊಂಡಿದ್ದು, ಪೊಲೀಸರು ಅವರಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ದೆಹಲಿಯ ಜನನಿಬಿಡ ಪ್ರದೇಶದಲ್ಲೇ ಮಗನನ್ನು ಬೆತ್ತಲೆಗೊಳಿಸಿ ಹಲ್ಲೆ ನಡೆಸಿರುವುದು ಭದ್ರತಾ ವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
