ಎರಡನೇ ಮದುವೆಗೆ ಬ್ರೇಕ್: ಮಂಟಪದಲ್ಲೇ ಬಯಲಾಯ್ತು ವರನ ಮೊದಲ ಮದುವೆ ಗುಟ್ಟು!

ತುಮಕೂರು: ಬಿಳಿ ಪಂಚೆ, ಶರ್ಟು ಜೊತೆಗೆ ಮೈಸೂರು ಪೇಟ ತೊಟ್ಟು ಹಸೆಮಣೆ ಏರಿದ್ದ ಮದುಮಗ ಇನ್ನೇನು ತಾಳಿ ಕಟ್ಟಬೇಕು ಅನ್ನೋ ಟೈಮ್ಗೆ ಮದುವೆ ಮಂಟಪಕ್ಕೆ ಬಿರುಗಾಳಿಯಂತೆ ಮೊದಲ ಪತ್ನಿ (First Wife) ಎಂಟ್ರಿ ಕೊಟ್ಟಿದ್ದಾಳೆ. ಹಸೆಮಣೆ ಏರಿದವನು ಅಲ್ಲೇ ಪತರುಗುಟ್ಟಿದ್ರೆ, ಹೆಣ್ಣಿನ ಮನೆಯವರಿಗೆ ದೊಡ್ಡ ಆಘಾತವೇ ಆಗಿದೆ.

ಮುಹೂರ್ತದ ಕೆಲವೇ ಕ್ಷಣಕ್ಕೆ ಮೊದಲೇ ಮದುವೆ ಮುರಿದು ಬಿದ್ದಿದೆ.
ಹಸೆಮಣೆಯಲ್ಲೇ ನಿಂತು ಹೊಯ್ತು ಮದುವೆ
ತುಮಕೂರಿನ ಕುಣಿಗಲ್ ತಾಲೂಕಿನ ಎಸ್ಎಲ್ಎನ್ ಕನ್ವೇಷನ್ ಹಾಲ್ನಲ್ಲಿ ನಡೀತಿದ್ದ ಮದುವೆ ತಾಳಿ ಕಟ್ಟೋ ಸಮಯದಲ್ಲಿ ನಿಂತು ಹೋಗಿರುವ ಸಿನಿಮೀಯ ಘಟನೆ ನಡೆದಿದೆ. ಮದುವೆಗೆ ಬಂದವರು ಮಂಟಪದಲ್ಲಿ ನಿಂತು ಹೋದ ಮದುವೆ ಕಂಡು ಶಾಕ್ ಆಗಿದ್ದಾರೆ. ಯಾರ ತಪ್ಪು ಅಂತ ಲೆಕ್ಕ ಹಾಕ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಹಸೆಮಣೆ ಏರಿದವನ ಮೊದಲ ಮದುವೆ ಗುಟ್ಟು.

ತಾಳಿ ಕಟ್ಟುವ ಸಮಯಕ್ಕೆ ಮೊದಲ ಹೆಂಡ್ತಿ ಎಂಟ್ರಿ
ಬೆಂಗಳೂರು ಮೂಲದ ಹರೀಶ್ ಪ್ರಸಾದ್, ಮಂಡ್ಯ ಮೂಲದ ಯುವತಿಯನ್ನ ಮದುವೆಯಾಗಲು ಮುಂದಾಗಿದ್ದ. ಎರಡೂ ಜೋಡಿ ಕೂಡ ನಗು-ನಗುತ್ತಾ ಮದುವೆ ಶಾಸ್ತ್ರ ಮಾಡ್ತಿದ್ರು. ಇನ್ನೇನು ತಾಳಿ ಕಟ್ಬೇಕು ಎನ್ನುವಷ್ಟರಲ್ಲಿ ಹರೀಶ್ ಪ್ರಸಾದ್ ಮೊದಲ ಹೆಂಡ್ತಿ, ಬಿರುಗಾಳಿಯಂತೆ ಕಲ್ಯಾಣ ಮಂಟಪಕ್ಕೆ ಎಂಟ್ರಿ ಕೊಟ್ಟಿದ್ದಾಳೆ.
ಯುವತಿಗೆ ಶಾಕ್, ನಿಂತು ಹೋಯ್ತು ಮದುವೆ!
ಹರೀಶ್ ಪ್ರಸಾದ್ ಎಂಬಾತ ಮೊದಲ ಪತ್ನಿ ಲೇಪಾಕ್ಷಿ ಎಂಬುವವರು ಕಲ್ಯಾಣ ಮಂಟಪಕ್ಕೆ ಬಂದು ನಡೆಯುತ್ತಿದ್ದ ಮದುವೆ ನಿಲ್ಲಿಸಿದ್ದಾರೆ. ಮೊದಲೇ ಮದುವೆ ಆಗಿರೋ ವಿಚಾರ ತಿಳಿಸದೆ ಹರೀಶ್ ಪ್ರಸಾದ್ ಎರಡನೇ ಮದುವೆ ಆಗ್ತಿದ್ದ ಎನ್ನುವ ಆರೋಪ ಕೇಳಿ ಬಂದಿದೆ.
ಮದುವೆ ಮಂಟಪದಲ್ಲಿ ಜಟಾಪಟಿ
ಗಂಡನ ಎರಡನೇ ಮದುವೆ ವಿಚಾರ ತಿಳಿದು ಮೊದಲ ಪತ್ನಿ ಲೇಪಾಕ್ಷಿಅವರು ಪೊಲೀಸರು, ವಕೀಲರು ಹಾಗೂ ಸಂಬಂಧಿಕರ ಜೊತೆ ಕುಣಿಗಲ್ನ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟಿದ್ದು, ಮದುವೆ ನಿಲ್ಲಿಸಿದ್ರು. ಈ ವೇಳೆ ಪೊಲೀಸರು ವರನಿಗೆ ಕಾನೂನು ಪಾಠ ಮಾಡಿದ್ದು, ಮಂಟಪದಲ್ಲಿ ಜಟಾಪಟಿ ಕೂಡ ನಡೆದಿದೆ.
ಮದುವೆ ಮುರಿದು ಬಿದ್ದ ಬಳಿಕ ಯುವತಿ ಕುಟುಂಬಸ್ಥರು ಕೂಡ ಬೇಸರ ಹೊರಹಾಕಿದ್ದಾರೆ. ಮದುಮಗ ಹರೀಶ್ ಪ್ರಸಾದ್ ನನ್ನು ಪೊಲೀಸರು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.