ರಿಯಲ್ ಎಸ್ಟೇಟ್ ಉದ್ಯಮಿಗಳ ಅಟ್ಟಹಾಸಕ್ಕೆ ಸ್ಯಾಫ್ರನ್ ಫ್ರಂಟ್ ಬ್ರೇಕ್: ದುರ್ಗಾನಗರದ ಚರಂಡಿ ಕಾಮಗಾರಿ ಮತ್ತೆ ಆರಂಭ!

ಮಂಗಳೂರು: ಮಂಗಳೂರು ಉತ್ತರ ಕ್ಷೇತ್ರದ ದುರ್ಗಾನಗರ ವಾರ್ಡ್ ನಂಬರ್ 8ರಲ್ಲಿ ಕಳೆದ ಹಲವಾರು ವರ್ಷಗಳಿಂದ ಜನರನ್ನು ಹೈರಾಣಾಗಿಸುತ್ತಿದ್ದ ಕೃತಕ ನೆರೆಯ ಸಮಸ್ಯೆಗೆ ಕೊನೆಗೂ ಶಾಶ್ವತ ಪರಿಹಾರ ಸಿಗುವ ಲಕ್ಷಣಗಳು ಕಾಣುತ್ತಿವೆ. ರಿಯಲ್ ಎಸ್ಟೇಟ್ ಉದ್ಯಮಿಗಳು ಅವೈಜ್ಞಾನಿಕವಾಗಿ ಚರಂಡಿಗೆ ಮಣ್ಣು ತುಂಬಿಸಿದ ಪರಿಣಾಮ ಸೃಷ್ಟಿಯಾಗುತ್ತಿದ್ದ ಈ ಸಮಸ್ಯೆಯ ವಿರುದ್ಧ ದುರ್ಗಾನಗರ ರೆಸಿಡೆಂಟ್ಸ್ ಅಸೋಸಿಯೇಷನ್ ಮತ್ತು ಸ್ಯಾಫ್ರನ್ ಫ್ರಂಟ್ ನಿರಂತರ ಹೋರಾಟ ನಡೆಸುತ್ತಾ ಬಂದಿವೆ.

ಜಿಲ್ಲಾಡಳಿತವು ಸ್ಥಳದಲ್ಲಿ ಕಾಮಗಾರಿ ಆರಂಭಿಸಿದ ಬೆನ್ನಲ್ಲೇ, ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತೆ ತಮ್ಮ ಕೃತ್ಯವನ್ನು ಮುಂದುವರಿಸಿ ಕಾಮಗಾರಿಯನ್ನು ತಡೆಯಲು ಸಂಚು ರೂಪಿಸಿದ್ದರು. ಈ ಬೆಳವಣಿಗೆಯಿಂದ ಕುಪಿತಗೊಂಡ ದುರ್ಗಾನಗರ ರೆಸಿಡೆಂಟ್ಸ್ ಅಸೋಸಿಯೇಷನ್ ಮತ್ತು ಸ್ಯಾಫ್ರನ್ ಫ್ರಂಟ್ ಕಾರ್ಯಕರ್ತರು, ಉದ್ಯಮಿಗಳ ಅಡ್ಡಿಯ ವಿರುದ್ಧ ಕಠಿಣ ಕಾನೂನಾತ್ಮಕ ಕ್ರಮಕ್ಕೆ ಮುಂದಾಗಿದ್ದರು. ಯಾವುದೇ ಸಂದರ್ಭ ಬಂದರೂ ವಾರ್ಡ್ನ ಹಿತದೃಷ್ಟಿಯಿಂದ ರಾಜಿ ಮಾಡಿಕೊಳ್ಳುವುದಿಲ್ಲ ಎಂಬ ಸಂಘಟನೆಯ ದೃಢ ನಿಲುವಿನ ಪರಿಣಾಮವಾಗಿ, ಇಂದು ಚರಂಡಿ ಅಭಿವೃದ್ಧಿ ಕಾಮಗಾರಿ ಅಧಿಕೃತವಾಗಿ ಪುನರಾರಂಭಗೊಂಡಿದೆ.
ಈ ಯಶಸ್ಸಿನ ಕುರಿತು ಮಾತನಾಡಿದ ಸ್ಯಾಫ್ರನ್ ಫ್ರಂಟ್ ಮುಖ್ಯಸ್ಥರಾದ ರಾಜೇಶ್ ಪವಿತ್ರನ್, ಇದು ಜನಸಾಮಾನ್ಯರ ಸಂಘಟಿತ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಬಣ್ಣಿಸಿದ್ದಾರೆ. ಇದೇ ವೇಳೆ ಉದ್ಯಮಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಅವರು, ಒಂದು ವೇಳೆ ರಿಯಲ್ ಎಸ್ಟೇಟ್ ಶಕ್ತಿಗಳು ಮತ್ತೆ ಅಭಿವೃದ್ಧಿ ಕೆಲಸಕ್ಕೆ ಅಡ್ಡಿಪಡಿಸಿದರೆ ಅಥವಾ ಚರಂಡಿ ಮುಚ್ಚುವ ಪ್ರಯತ್ನ ಮಾಡಿದರೆ ಸ್ಯಾಫ್ರನ್ ಫ್ರಂಟ್ ಸುಮ್ಮನೆ ಕೂರುವುದಿಲ್ಲ. ಅಂತಹ ಶಕ್ತಿಗಳ ವಿರುದ್ಧ ಕಠಿಣವಾದ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಗುಡುಗಿದ್ದಾರೆ.
ಸ್ಥಳೀಯ ಜನಪ್ರತಿನಿಧಿಗಳ ದಿವ್ಯ ಮೌನದ ನಡುವೆಯೂ ಸಾರ್ವಜನಿಕರ ಧ್ವನಿಯಾಗಿ ನಿಂತು ಜಿಲ್ಲಾಡಳಿತದ ಮೇಲೆ ಒತ್ತಡ ಹೇರಿದ ಕಾರಣ ಇವತ್ತು ಕೆಲಸ ಪುನಃ ಆರಂಭಗೊಂಡಿದೆ. ವಾರ್ಡ್ನ ಹಿತದೃಷ್ಟಿಯಿಂದ ಸ್ಯಾಫ್ರನ್ ಫ್ರಂಟ್ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸದ್ಯ ಕಾಮಗಾರಿ ಮತ್ತೆ ಆರಂಭವಾಗಿರುವುದು ದುರ್ಗಾನಗರದ ನಿವಾಸಿಗಳಲ್ಲಿ ಹೊಸ ಭರವಸೆ ಮೂಡಿಸಿದೆ.