ಖ್ಯಾತ ಗಾಯಕಿ ಚಿತ್ರಾ ಅಯ್ಯರ್ ಸೋದರಿ ಒಮನ್ ಚಾರಣ ದುರಂತದಲ್ಲಿ ನಿಧನ: ತಂದೆ ನಿಧನರಾದ 25 ದಿನಕ್ಕೇ ಮಗಳ ಸಾವು!

ಖ್ಯಾತ ಗಾಯಕಿ ಚಿತ್ರಾ ಅಯ್ಯರ್ ಅವರ ಸೋದರಿ ಶಾರದಾ ಅಯ್ಯರ್ ಅವರು ಗಲ್ಪ್ ರಾಷ್ಟ್ರ ಒಮನ್ನಲ್ಲಿ ಟ್ರಕ್ಕಿಂಗ್ ವೇಳೆ ಸಂಭವಿಸಿದ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಒಮನ್ನ ಮಸ್ಕತ್ನಲ್ಲಿ ವಾಸಿಸುತ್ತಿದ್ದ ಭಾರತೀಯ ಮಹಿಳೆ ಶಾರದಾ ಅಯ್ಯರ್ ಅವರಿಗೆ 52 ವರ್ಷ ವಯಸ್ಸಾಗಿತ್ತು. ಸೋದರಿ ಶಾರದಾ ಅಯ್ಯರ್ ಅವರ ಸಾವಿಗೆ ಗಾಯಕಿ ಚಿತ್ರಾ ಅಯ್ಯರ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಒಮನ್ನ ಜೆಬೆಲ್ ಶಾಮ್ಸ್ ಪ್ರದೇಶದಲ್ಲಿ ಈ ದುರಂತ ನಡೆದಿದೆ.

ಮೂಲತಃ ಕೇರಳದ ತಝವಾದವರಾದ ಶಾರದಾ ಅವರು ದಿವಂಗತ ಕೃಷಿ ವಿಜ್ಞಾನಿ ಆರ್ ಡಿ ಐಯ್ಯರ್ ಹಾಗೂ ರೋಹಿಣಿ ಅಯ್ಯರ್ ಅವರ ಪುತ್ರಿ. ಮಲಯಾಳಂ ಹಿನ್ನೆಲೆ ಸಂಗೀತಗಾರ್ತಿ ಚಿತ್ರಾ ಅಯ್ಯರ್ ಅವರ ಸೋದರಿಯಾಗಿದ್ದಾರೆ. ಶಾರದಾ ಅವರು ಒಮನ್ ಏರ್ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಓಮನ್ನ ಅಲ್ ದಖಿಲಿಯಾ ಗವರ್ನರೇಟ್ನಲ್ಲಿರುವ ಜೆಬೆಲ್ ಶಮ್ಸ್ ಪ್ರದೇಶದ ಒರಟಾದ ವಾಡಿ ಗುಲ್ನ ಗುರುತಿಸಲಾದ ಹಾದಿಗಳಲ್ಲಿ ಗುಂಪಿನೊಂದಿಗೆ ಚಾರಣ ಮಾಡುತ್ತಿದ್ದಾಗ ದುರಂತ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಕೆಯ ಸಾವಿಗೆ ನಿಜವಾದ ಕಾರಣ ತಿಳಿದು ಬಂದಿಲ್ಲ. ಆದರೆ ಆ ಸ್ಥಳದ ಕಡಿದಾದ ಬಂಡೆಗಳು ಮತ್ತು ಸವಾಲಿನ ಭೂಪ್ರದೇಶವು ಚಾರಣಿಗರಿಗೆ ಬಹಳ ಅಪಾಯಕಾರಿ ಎಂದು ಗುರುತಿಸಲ್ಪಟ್ಟಿದೆ. ಅಯ್ಯರ್ ಅವರ ಮೃತದೇಹವನ್ನು ಒಮನ್ನಿಂದ ಕೇರಳಕ್ಕೆ ತರಲಾಗುತ್ತದೆ ಎಂದು ಚಿತ್ರಾ ಅಯ್ಯರ್ ಅವರು ಮಾಹಿತಿ ನೀಡಿದ್ದಾರೆ. ಜನವರಿ 7ರಂದು ಕೇರಳ ತಝವಾದಲ್ಲಿರುವ ಅವರ ಪೂರ್ವಜರ ಮನೆಯಲ್ಲಿ ಆಕೆಯ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.

ಶಾರದಾ ಅಯ್ಯರ್ ಅವರ ತಂದೆ ಡಿಸೆಂಬರ್ 11ರಂದು ಸಾವಿಗೀಡಾಗಿದ್ದರು. ಅವರ ಅಂತ್ಯಕ್ರಿಯೆಗಾಗಿ ಶಾರದಾ ಅವರು ಮಸ್ಕತ್ನಿಂದ ಕೇರಳಕ್ಕೆ ಬಂದವರು ಎಲ್ಲಾ ಕಾರ್ಯಗಳನ್ನು ಮುಗಿಸಿಕೊಂಡು ಡಿಸೆಂಬರ್ 24ರಂದು ಅವರು ಮತ್ತೆ ಮಸ್ಕತ್ಗೆ ತೆರಳಿದ್ದರು. ಆದರೆ ತಂದೆಯ ಸಾವಿಗೀಡಾಗಿ ಒಂದು ತಿಂಗಳು ಕಳೆಯುವ ಮೊದಲೇ ಮಗಳು ಕೂಡ ಇಹಲೋಕ ತ್ಯಜಿಸಿದ್ದು ವಿಚಿತ್ರ ಎನಿಸಿದೆ.
ತನ್ನ ಕಿರಿಯ ಸೋದರಿಯ ಸಾವಿನ ಬಗ್ಗೆ ಬಹಳ ಆಘಾತ ಹಾಗೂ ಭಾವುಕತೆಯೊಂದಿಗೆ ಗಾಯಕಿ ಚಿತ್ರಾ ಅಯ್ಯರ್ ಅವರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದು, ಓಡಿ ಹೋಗು, ಸಹೋದರಿಯಂತಹ ಕ್ರೂರಿ ಪುಟ್ಟ ಬಾನ್ಷೀ! ನೀನು ತುಂಬಾ ವೇಗವಾಗಿ ಓಡುತ್ತೀಯ ಆದರೆ ನಾನು… ಅಂತಿಮವಾಗಿ ನಿನ್ನ ಬೇಗ ಹಿಡಿಯುತ್ತೇನೆ ಎಂದು ನಾನು ಭರವಸೆ ನೀಡುತ್ತೇನೆ. ನಾನು ನಿನ್ನನ್ನು ಪ್ರೀತಿಸುತ್ತೇನೆ. ನಿನ್ನನ್ನು ಪ್ರೀತಿಸುತ್ತೇನೆ, ನೀನು ಪ್ರತ್ಯೇಕ ಮಾಡಲಾಗದ ದೈತ್ಯೆ, ನೀನು ಸುಂದರಿ. ನಾನು ಏನು ಮಾಡಲಿ? ಫೋನಿನ ಇನ್ನೊಂದು ತುದಿಯಲ್ಲಿ ನಿನ್ನ ಕಿರಿಕಿರಿ ಧ್ವನಿ ನಿರಂತರವಾಗಿ ಕೇಳದೆ ನಾನು ಹೇಗೆ ಬದುಕಲಿ? ಅಥವಾ ಮುಂದಿನ ಕೋಣೆಯಿಂದ ಕಿರುಚುವ ನಿನ್ನ ಸ್ವರವನ್ನು… ಕಿರಿಕಿರಿ ಉಂಟುಮಾಡುತ್ತಾ ನೀನಾಗಿರುತ್ತಿದ್ದ ನೀನು ಎಂದು ಅವರು ತಮ್ಮ ಕಿರಿಯ ಸೋದರಿಯ ಸಾವಿಗೆ ಆಘಾತ ವ್ಯಕ್ತಪಡಿಸಿದ್ದಾರೆ.