ಪುಂಜಾಲಕಟ್ಟೆ ಪಿಲಾತಬೆಟ್ಟು ಗಣೇಶೋತ್ಸವ: ನಿಯಮ ಉಲ್ಲಂಘಿಸಿ ಧ್ವನಿವರ್ಧಕ ಬಳಕೆ, ಪೊಲೀಸ್ ಕಾರ್ಯಕ್ಕೆ ಅಡ್ಡಿ – ಸ್ಪೀಕರ್ ಜಪ್ತಿ

ಪುಂಜಾಲಕಟ್ಟೆ: ಪೂಂಜಾಲುಕಟ್ಟೆಯ ಪಿಲಾತಬೆಟ್ಟು ಸಾರ್ವಜನಿಕ ಗಣೇಶೋತ್ಸವದಲ್ಲಿ ನಿಯಮ ಮೀರಿ ಧ್ವನಿವರ್ದಕ ಬಳಿಸಿದ್ದಕ್ಕೆ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಕುರಿತಂತೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಇಂದು ಮತ್ತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಪೀಕರ್ ಗಳನ್ನು ಸೀಝ್ ಮಾಡಿದ್ದಾರೆ.

ಪಿಲಾತಬೆಟ್ಟು ಗ್ರಾಮದ ಬಂಗ್ಲೆ ಮೈದಾನದ ಬಳಿ ಬುಧವಾರ ನಡೆದಿದ್ದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮದಲ್ಲಿ ರಾತ್ರಿ ಸುಮಾರು 10.45 ಗಂಟೆಗೆ ಧ್ವನಿವರ್ಧಕವನ್ನು ಅಳವಡಿಸಿ ಕಾರ್ಯಕ್ರಮ ನಡೆಸುತ್ತಿದ್ದ ಸಮಿತಿಯವರಿಗೆ, ಪುಂಜಾಲಕಟ್ಟೆ ಠಾಣೆಯ ಪಿಎಸ್ಐ ಅವರು ಜಾರಿಯಲ್ಲಿರುವ ಕಾನೂನು ಹಾಗೂ ಠಾಣೆಯಿಂದ ನೀಡಲಾಗಿದ್ದ ನೋಟಿಸ್ ಕುರಿತು ತಿಳಿಸಿ ಧ್ವನಿವರ್ಧಕ ನಿಲ್ಲಿಸುವಂತೆ ಸೂಚಿಸಿದ್ದರು.
ಅದರಂತೆ ಆಯೋಜಕರು ತಾತ್ಕಾಲಿಕವಾಗಿ ಧ್ವನಿವರ್ಧಕವನ್ನು ನಿಲ್ಲಿಸಿದ್ದರು. ಆದರೆ ಬಳಿಕ ರಾತ್ರಿ 11.50ರ ಸುಮಾರಿಗೆ ಪೊಲೀಸರು ಸ್ಥಳಕ್ಕೆ ಮರುಬಂದಾಗ, ಮತ್ತೆ ಧ್ವನಿವರ್ಧಕ ಬಳಸಿ ಕಾರ್ಯಕ್ರಮ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ವಿಚಾರಣೆ ವೇಳೆ ಸಮಿತಿ ಅಧ್ಯಕ್ಷ ಕೌಶಿಕ್ ಶೆಟ್ಟಿ, ಪದಾಧಿಕಾರಿಗಳು, ನಾಟಕ ಆಯೋಜಕರು ಹಾಗೂ ಸುಮಾರು 10–15 ಮಂದಿ ಸೇರಿ ಪೊಲೀಸರೊಂದಿಗೆ ವಾಗ್ವಾದ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಎದುರಿಸಿದ್ದಾರೆ.
ಈ ಹಿನ್ನೆಲೆ, ಆಯೋಜಕರು ನೀಡಲಾಗಿದ್ದ ಸೂಚನೆ ಪತ್ರದ ಷರತ್ತುಗಳನ್ನು ಉಲ್ಲಂಘಿಸಿರುವುದಾಗಿ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.
ಇಂದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾರ್ಯಕ್ರಮದಲ್ಲಿ ಬಳಸಿದ್ದ ಸ್ಪೀಕರ್ ಗಳನ್ನು ಸೀಝ್ ಮಾಡಿ ಕೊಂಡೊಯ್ದಿದ್ದಾರೆ. ಈ ವೇಳೆ ವಿಡಿಯೋ ಮಾಡಿದವರ ಮೇಲೂ ಕೇಸು ದಾಖಲಿಸುವ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.