ಪೆಟ್ರೋಲ್ ಬಂಕ್ ಶೌಚಾಲಯಗಳು ಸಾರ್ವಜನಿಕ ಬಳಕೆಗೆ ಅಲ್ಲ: ಕೇರಳ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ತಡೆ
ತಿರುವನಂತಪುರಂ:ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯ ನಿರ್ಮಾಣ ಹಾಗೂ ಅದರ ನಿರ್ವಹಣೆ ಸರ್ಕಾರದ ಜವಾಬ್ದಾರಿ. ಆದರೆ ಪೆಟ್ರೋಲ್ ಬಂಕ್ಗಳಲ್ಲಿರುವ ಶೌಚಾಲಯಗಳನ್ನು ಸಾರ್ವಜನಿಕ ಶೌಚಾಲಯವನ್ನಾಗಿ ಪರಿವರ್ತಿಸುವುದು ಇದಕ್ಕೆ ಪರಿಹಾರವಲ್ಲ. ಪೆಟ್ರೋಲ್ ಬಂಕ್ ಶೌಚಾಲಯವನ್ನು ಸಾರ್ವಜನಿಕ ಶೌಚಾಲಯವನ್ನಾಗಿ ಪರಿವರ್ತಿಸಲು ಹೊರಟ ಕೇರಳ ಸರ್ಕಾರಕ್ಕೆ ಕೇರಳ ಹೈಕೋರ್ಟ್ ಛಾಟಿ ಬೀಸಿದೆ. ಸರ್ಕಾರದ ಈ ನಿರ್ಧಾಕ್ಕೆ ಹೈಕೋರ್ಟ್ ತಡೆ ನೀಡಿದೆ.
ಅರ್ಜಿ ವಿಚಾರಣೆ ನಡೆಸಿ ಮಧ್ಯಂತರ ಆದೇಶ ನೀಡಿದ ಹೈಕೋರ್ಟ್
ಪೆಟ್ರೋಲಿಯಂ ಟ್ರೇಡರ್ಸ್ ವೆಲ್ಫೇರ್, ಲೀಗಲ್ ಸರ್ವೀಸ್ ಸೊಸೈಟಿ ಹಾಗೂ ಐವರು ಇತರರು ಸೇರಿ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ವಿಚಾರಣೆ ಮಾಡಿದೆ. ಈ ವೇಳೆ ಪೆಟ್ರೋಲ್ ಬಂಕ್ಗಳಲ್ಲಿರುವ ಶೌಚಾಲಾಯಗಳನ್ನು ಸಾರ್ವಜನಿಕ ಶೌಚಾಲಯವನ್ನಾಗಿ ಪರಿವರ್ತಿಸುವ ನಿರ್ಧಾರಕ್ಕೆ ಕೋರ್ಟ್ ಮದ್ಯಂತರ ತಡೆ ನೀಡಿದೆ. ರಿಟ್ ಪಿಟೀಶನ್ ವಿಚಾರಣೆ ವೇಳೆ ಕೇರಳ ಹೈಕೋರ್ಟ್ ಕೆಲ ಮಹತ್ವದ ಅಂಶಗಳ ಕುರಿತು ಬೆಳಕು ಚೆಲ್ಲಿದೆ.
ಕೇರಳ ಸರ್ಕಾರ ಹಾಗೂ ತಿರುವಂತಪುರಂ ಮುನ್ಸಿಪಲ್ ಕಾರ್ಪೋರೇಶನ್ ಈ ಕುರಿತು ಪೆಟ್ರೋಲ್ ಬಂಕ್ ಮೇಲೆ ಯಾವುದೇ ಅಧಿಕಾರ ಚಲಾಸುವಂತಿಲ್ಲ. ಯಾವುದೇ ಕಾರಣಕ್ಕೆ ಸರ್ಕಾರ ಹಾಗೂ ಕಾರ್ಪೋರೇಶನ್ ಸಾರ್ವಜನಿಕ ಶೌಚಾಲಯವನ್ನಾಗಿ ಪರಿವರ್ತಿಸುವ ಸೂಚನೆ ನೀಡಬಾರದು ಎಂದು ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಸೂಚಿಸಿದೆ. ಈಗಾಗಲೇ ತಿರುವಂತಪುರಂ ಮುನ್ಸಿಪಲ್ ಕಾರ್ಪೋರೇಶನ್ಗೆ ಇದೇ ವಿಚಾರವಾಗಿ ನೋಟಿಸ್ ಕೂಡ ನೀಡಿತ್ತು. ಸ್ವಚ್ಚ ಭಾರತ್ ಯೋಜನೆಯಡಿ ಮಾರ್ಗಸೂಚಿ ರೂಪಿಸುವಂತೆ ಸೂಚನೆ ನೀಡಿತ್ತು.
ಯಾವುದೇ ಖರ್ಚಿಲ್ಲದೆ ಯೋಜನೆ ರೂಪಿಸಿದ ಸರ್ಕಾರಕ್ಕೆ ಹಿನ್ನಡೆ
ತಿರುವಂತಪುರಂ ನಗರದಲ್ಲಿ ಸಾರ್ವಜನಿಕ ಶೌಚಾಲಯಗಳ ಕೊರತೆಯಿಂದ ಸರ್ಕಾರ ಹಾಗೂ ಕಾರ್ಪೋರೇಶನ್ಗೆ ಈಗಾಗಲೇ ಹಲವು ದೂರುಗಳು ಸಲ್ಲಿಕೆಯಾಗಿದೆ. ಆದರೆ ಸಾರ್ವಜನಿಕ ಶೌಚಾಲಯ ಹೊಸದಾಗಿ ನಿರ್ಮಾಣ ಹಾಗೂ ಸಂಖ್ಯೆ ಹೆಚ್ಚಿಸವ ಕುರಿತು ಸರ್ಕಾರ ಹಾಗೂ ಕಾರ್ಪೋರೇಶನ್ ನಿರಾಸಕ್ತಿ ಹೊಂದಿದೆ. ಇದರ ನಡುವೆ ಪೆಟ್ರೋಲ್ ಬಂಕ್ಗಳಲ್ಲಿರುವ ಶೌಚಾಲಯಗಳನ್ನು ಸಾರ್ವಜನಿಕರು ಬಳಕೆ ಮಾಡುವಂತೆ ಆದೇಶ ನೀಡಲು ಸರ್ಕಾರ ಹಾಗೂ ಕಾರ್ಪೋರೇಶನ್ ರೂಪುರೇಶೆ ಸಿದ್ಧಪಡಿಸಿತ್ತು. ಇದರಿಂದ ಸರ್ಕಾರದ ಮೇಲಿನ ಹೊರೆಯೂ ತಪ್ಪುತ್ತದೆ. ಜೊತೆಗೆ ಇದರ ನಿರ್ವಹಣೆ ಪೆಟ್ರೋಲ್ ಬಂಕ್ ಮಾಲೀಕರು ಮಾಡುತ್ತಿರುವುದರಿಂದ ಸರ್ಕಾರಕ್ಕೆ ಯಾವುದೇ ನಷ್ಟವಿಲ್ಲ. ಸಾರ್ವಜನಿಕರ ದೂರಿಗೆ ಸ್ಪಂದಿಸಿದಂತೆ ಆಗಲಿದೆ, ಸಾರ್ವಜನಿಕ ಶೌಚಾಲಯ ಕೊರತೆ ಸಮಸ್ಯೆಯೂ ನೀಗಲಿದೆ. ಕೇವಲ ಒಂದು ಆದೇಶದಿಂದ ಯಾವುದೇ ಖರ್ಚಿಲ್ಲದೆ ಸಮಸ್ಯೆ ಪರಿಹಾರವಾಗಲಿದೆ ಎಂದು ಕೇರಳ ಸರ್ಕಾರ ಹಾಗೂ ತಿರುವಂತಪುರಂ ಕಾರ್ಪೋರೇಶನ್ ನಿರ್ಧರಿಸಿತ್ತು.
ಅರ್ಜಿ ವಿಚಾರಣೆ ವೇಳೆ ಈ ಕುರಿತು ಕೋರ್ಟ್ ಕೆಲ ಅಂಶಗಳನ್ನು ಹೇಳಿದೆ. ಪೆಟ್ರೋಲ್ ಬಂಕ್ಗಳ ಶೌಚಾಲಯ ಸಾರ್ವಜನಿಕರಿಗೆ ಮುಕ್ತ ಮಾಡಿದರೆ, ಎಲ್ಲರೂ ಪೆಟ್ರೋಲ್ ಬಂಕ್ಗೆ ತೆರಳುತ್ತಾರೆ. ಇದರಿಂದ ಪೆಟ್ರೋಲ್ ವಿತರಣೆ, ಮಾರಾಟ ಸೇವೆಯಲ್ಲಿ ವ್ಯತ್ಯಯವಾಗಲಿದೆ. ಜೊತೆಗೆ ಪೆಟ್ರೋಲ್ ಬಂಕ್ಗೆ ಬರವು ಗ್ರಾಹಕ ತುರ್ತು ಅಗತ್ಯಕ್ಕೆ ಅಡ್ಡಿಯಾಗಲಿದೆ. ಪೆಟ್ರೋಲ್ ಬಂಕ್ನಲ್ಲಿರುವ ಶೌಚಾಲಯಗಳು ಗ್ರಾಹಕರು, ಬಂಕ್ನ ಸಿಬ್ಬಂದಿಗಳ ಬಳಕೆಗಾಗಿ. ಈ ಪೈಕಿ ಗ್ರಾಹಕರು ತುರ್ತು ಸಂದರ್ಭದಲ್ಲೇ ಶೌಚಾಲಯವನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಏಕಾಏಕಿ ಪೆಟ್ರೋಲ್ ಬಂಕ್ಗೆ ಪ್ರವಾಸಿಗರು ಆಗಮಿಸಿ, ಸಾರ್ವಜನಿಕರು ಆಗಮಿಸಿ ಶೌಚಾಲಯ ನೀಡಲು ಹೇಳಿದರೆ ಸಮಸ್ಯೆ ಗಂಭೀರವಾಗಲಿದೆ ಎಂದು ಕೋರ್ಟ್ ಹೇಳಿದೆ.
ಪೆಟ್ರೋಲ್ ಬಂಕ್ಗಳಲ್ಲಿನ ಶೌಚಾಲಯಗಳನ್ನು ಅಲ್ಲಿನ ಸಿಬ್ಬಂದಿಗಳೇ ನಿರ್ವಹಣೆ ಮಾಡುತ್ತಾರೆ. ಇದಕ್ಕಾಗಿ ಪ್ರತ್ಯೇಕ ಸಿಬ್ಬಂದಿಗಳಿಲ್ಲ. ಕೆಲವೇ ಕೆಲವು ಮಂದಿ ಬಳಕೆಗೆ ಮಾತ್ರ ಈ ಶೌಚಾಲಯ ನಿರ್ವಹಣೆ ಮಾಡಲಾಗುತ್ತದೆ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದರೆ ಸಮಸ್ಯೆಯಾಗಲಿದೆ ಎಂದು ಅರ್ಜಿದಾರರು ಉಲ್ಲೇಖಿಸಿದ್ದರು.