ಪರುಶುರಾಮ ಪ್ರತಿಮೆ ಮರುಸ್ಥಾಪನೆ ಪಿಐಎಲ್: ಅರ್ಜಿದಾರ ಉದಯ ಶೆಟ್ಟಿಗೆ ಹೈಕೋರ್ಟ್ 5 ಲಕ್ಷ ಠೇವಣಿ ಆದೇಶ

ಬೆಂಗಳೂರು: ಕಾರ್ಕಳದ ಬೈಲೂರಿನಲ್ಲಿರುವ ಉಮಿಕಲ್ ಬೆಟ್ಟದಲ್ಲಿ ಪರಶುರಾಮ ಥೀಮ್ ಪಾರ್ಕ್ ನಲ್ಲಿ ಪರುಶುರಾಮ ಮೂರ್ತಿಯನ್ನು ಮರು ಸ್ಥಾಪಿಸಲು ಹೈಕೋರ್ಟ್ ಗೆ ಪಿಐಎಲ್ ಹಾಕಿದ್ದ ಉದಯ ಶೆಟ್ಟಿ ಮುನಿಯಾಲು ಅವರಿಗೆ ಹೈಕೋರ್ಟ್ ಪ್ರತಿಮೆ ಸ್ಥಾಪನೆಗೆ ಕಾಣಿಕೆಯಾಗಿ 5 ಲಕ್ಷ ಠೇವಣಿ ಇಡುವಂತೆ ಆದೇಶ ಹೊರಡಿಸಿದೆ.

ಕಾರ್ಕಳದ ಪರುಶುರಾಮ ಥೀಮ್ ಪಾಕ್ ನಲ್ಲಿ ಹೊಸ ಟೆಂಡರ್ ಕರೆಯುವ ಮೂಲಕತ ಪರುಶುರಾಮ ಮೂರ್ತಿಯನ್ನು ಮರು ಸ್ಥಾಪಿಸಬೇಕು ಎಂದು ಸರಕಾರ ಹಾಗೂ ಜಿಲ್ಲಾಡಳಿತಕ್ಕೆ ನಿರ್ದೇಶಿಸುವಂತೆ ಕೋರಿ ಕೆಪಿಸಿಸಿ ಸದಸ್ಯರೂ ಆಗಿರುವ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರದಿಂದ ಸ್ಪರ್ಧಿಸಿದ್ದ ಉಡುಪಿಯ ಉದಯ ಶೆಟ್ಟಿ ಮುನಿಯಾಲು ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾ. ವಿಭು ಬಖ್ರು ಹಾಗೂ ನ್ಯಾ. ಸಿ.ಎಂ. ಜೋಷಿ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು.
ಹಿಂದೂ ನಂಬಿಕೆಯ ಪ್ರಕಾರ ಪರಶುರಾಮನನ್ನು ತುಳುನಾಡು ಹಾಗೂ ಕರಾವಳಿ ಪ್ರದೇಶದ ಸೃಷ್ಟಿಕರ್ತ ಎನ್ನಲಾಗಿದ್ದು, ಭಗವಾನ್ ಪರಶುರಾಮನ ಬಗ್ಗೆ ಕರಾವಳಿ ಕರ್ನಾಟಕದ ಲಕ್ಷಾಂತರ ಹಿಂದೂಗಳಿಗೆ ಅಪಾರ ಭಕ್ತಿ ಇದೆ. ಪ್ರತಿಮೆ ನಿರ್ಮಾಣ ಆಗದಿದ್ದರೆ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಲಿದೆ. ಆದ್ದರಿಂದ ಪರಶುರಾಮ ಪ್ರತಿಮೆಯನ್ನು ಮರುನಿರ್ಮಿಸಲು ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಈ ಅಂಶವನ್ನು ಗಮನಿಸಿದ ನ್ಯಾಯಪೀಠ, ಭಾವನೆಗಳಿಗೆ ಧಕ್ಕೆ ಆಗಲಿದೆ ಎಂದು ನೀವು ಹೇಳಿದ್ದೀರಿ, ನಿಮ್ಮ ಭಾವನೆ ಸಾಬೀತುಪಡಿಸಲು ಮತ್ತು ಪ್ರತಿಮೆ ಮರುಸ್ಥಾಪನೆಗೆ ನಿಮ್ಮ ಕಾಣಿಕೆಯೂ ಇರಬೇಕಲ್ಲವೇ? ಅದಕ್ಕಾಗಿ 5 ಲಕ್ಷ ರೂ. ಠೇವಣಿ ಇಡಲು ಸಾಧ್ಯವೇ ಎಂದು ಅರ್ಜಿದಾರರ ಪರ ವಕೀಲರನ್ನು ಕೇಳಿತು. ಅದಕ್ಕೆ ಅರ್ಜಿದಾರರ ಪರ ವಕೀಲರು ಒಪ್ಪಿಕೊಂಡರು. ಅವರ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಪೀಠ, ಈ ಹೇಳಿಕೆಗೆ ಅರ್ಜಿದಾರರು ಬದ್ಧವಾಗಿರಬೇಕು. ಎರಡು ವಾರಗಳಲ್ಲಿ 5 ಲಕ್ಷ ರೂ.ಗಳನ್ನು ಹೈಕೋರ್ಟ್ನ ರಿಜಿಸ್ಟ್ರಾರ್ ಬಳಿ ಠೇವಣಿ ಇಡಬೇಕು. ಅದಾದ ಬಳಿಕ ಅರ್ಜಿಯನ್ನು ಪರಿಗಣಿಸಲಾಗುವುದು. ಅಲ್ಲದೇ 5 ಲಕ್ಷ ರೂಗಳನ್ನು ಅರ್ಜಿದಾರರು ತಮ್ಮ ವೈಯುಕ್ತಿಕ ಖಾತೆಯಿಂದ ಠೇವಣಿ ಇಡಬೇಕು ಎಂದು ನಿರ್ದೇಶನ ನೀಡಿ ವಿಚಾರಣೆಯನ್ನು ಸೆಪ್ಟೆಂಬರ್ 9ಕ್ಕೆ ಮುಂದೂಡಿತು.