ಒಂದು ಕುಟುಂಬ, ಎರಡು ಆತ್ಮಹತ್ಯೆಗಳು: ಉದ್ಯಮಿ ದಿನೇಶ್ ವಿರುದ್ಧ ಗಂಭೀರ ಆರೋಪ

ನೆಲಮಂಗಲ: ಎರಡು ಪ್ರತ್ಯೇಕ ಸ್ಥಳಗಳಲ್ಲಿ ಒಂದೇ ಕುಟುಂಬದ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಯುವ ವಕೀಲೆ ರಮ್ಯಾ (27) ಹಾಗೂ ಈಕೆಯ ತಮ್ಮ ಪುನೀತ್(22) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧ ಉದ್ಯಮಿ ದಿನೇಶ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಾಯಿಯನ್ನು ಕಳೆದುಕೊಂಡಿದ್ದ ರಮ್ಯಾ ತನ್ನ ಅಣ್ಣ, ತಮ್ಮನ ಜೊತೆಗೆ ಬೆನಕಾ ಲೇಔಟ್ನ ನ್ಯೂಗಾರ್ಡನ್ ಸಿಟಿಯ ಮನೆಯಲ್ಲಿ ವಾಸವಿದ್ದರು. ಜೊತೆಗೆ ಕೆಲವು ದಿನ ಕಾಲ ಶ್ರೀನಿವಾಸಪುರದ ಅವರ ಸ್ವಂತ ಜಮೀನಿನಲ್ಲಿದ್ದ ಶೆಡ್ನಲ್ಲಿ ವಾಸವಾಗಿದ್ದರು.
ಕಾನೂನು ಪದವಿ ಪೂರ್ಣಗೊಳಿಸಿರುವ ರಮ್ಯಾ ನ್ಯಾಯಾಧೀಶೆಯಾಗಲು ಪರೀಕ್ಷೆಗೆ ತಯಾರಿಯಾಗುತ್ತಿದ್ದಳು. ಈ ನಡುವೆ ಗುರುವಾರ ಸಂಜೆ ಶ್ರೀನಿವಾಸಪುರ ಶೆಡ್ನಲ್ಲಿ ರಮ್ಯಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನು ನೋಡಿದ ಈಕೆಯ ಸಹೋದರ ಪುನೀತ್ (ರಮ್ಯಾ ಪೋಷಕರ ಸಾಕು ಮಗ) ರಮ್ಯಾ ಮೃತದೇಹವನ್ನು ಕೆಳಗೆ ಇಳಿಸಿ ಟೇಬಲ್ ಮೇಲೆ ಮಲಗಿಸಿದ್ದಾನೆ. ಬಳಿಕ, “ತನ್ನ ಅಕ್ಕನ ಸಾವಿಗೆ ಉದ್ಯಮಿ ದಿನೇಶ್ ಎಂಬುವರೇ ಕಾರಣ’ ಎಂದು ರಮ್ಯಾಳ ಸೋದರ ಮಾವನಿಗೆ ವಾಟ್ಸ್ಆಫ್ ಮೂಲಕ ವಾಯ್ಸಕಾಲ್ ಮಾಡಿದ್ದಾರೆ. ನಂತರ ಬೆನಕಾ ಲೇಔಟ್ನ ನ್ಯೂಗಾರ್ಡನ್ ಸಿಟಿಯ ಮನೆಯಲ್ಲಿ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವಾಯ್ಸಕಾಲ್ ಕೇಳಿದ ಮಾವ ಸ್ಥಳೀಯರಿಗೆ ಕರೆ ಮಾಡಿ ತಿಳಿಸಿದ್ದಾರೆ. ನಂತರ ಮನೆಗೆ ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಕೊಲೆ ಶಂಕೆ ದೂರು: ರಮ್ಯಾ ಆತ್ಮಹತ್ಯೆ ಮಾಡಿಕೊಂಡಿಲ್ಲ. ಕೊಲೆ ಮಾಡಿದ್ದಾರೆ. ನೇಣು ಬಿಗಿದುಕೊಂಡಿರುವ ಸ್ಥಿತಿಯನ್ನು ನೋಡಿದರೆ ಸಾಕಷ್ಟು ಅನುಮಾನ ಬರುತ್ತದೆ. ಇದು ಆತ್ಮಹತ್ಯೆಯಲ್ಲ. ಕೊಲೆಗೈದಿರುವ ಶಂಕೆ ಇದೆ ಎಂದು ರಮ್ಯಾ ಸಂಬಂಧಿಕರು ದೂರು ನೀಡಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಬೆಂ.ಗ್ರಾಮಾಂ ತರ ಎಸ್ಪಿ ಸಿ.ಕೆ.ಬಾಬ, ಖಾಸಗಿ ಜಾಗದ ಶೆಡ್ನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಇವರ ಕುಟುಂಬದಲ್ಲೇ ಇದ್ದ ಪುನೀತ್ ಎಂಬ ಯುವಕ, ರಮ್ಯಾ ಮೃತ ದೇಹ ಕೆಳಗೆ ಇಳಿಸಿ, ಅನಂತರ ಬೆನಕಾ ಲೇಔಟ್ ಬಳಿ ಅವರ ಮನೆ ರೂಮ್ನಲ್ಲಿ ನೇಣುಬಿಗಿದುಕೊಂಡಿದ್ದಾನೆ. ಮೃತರ ಕಡೆಯವರು ಕೊಲೆ ಮಾಡಿ ನೇಣು ಬಿಗಿದು ಆತ್ಮಹತ್ಯೆ ಎಂದು ಬಿಂಬಿಸಿದ್ದಾರೆ ಎಂದು ದೂರು ನೀಡಿದ್ದು ತನಿಖೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.