ಒಡಿಶಾ ವಿಸ್ಮಯ: ‘ಸತ್ತವರು’ ಎದ್ದು ಕೂತಿದ್ದರಿಂದ ಅಚ್ಚರಿ, ವೈದ್ಯರ ಮೇಲೆ ಆಕ್ರೋಶ

ಭುವನೇಶ್ವರ್: ಮೃತಪಟ್ಟರೆಂದು ಅಂತ್ಯಕ್ರಿಯೆಗೆ ಸಿದ್ದತೆ ನಡೆಸುತ್ತಿರುವ ವೇಳೆ ಮಹಿಳೆಯೊಬ್ಬರು ಎದ್ದು ಕೂತಿರುವ ಘಟನೆ ಒಡಿಶಾದ ಪುರಿಯಲ್ಲಿ ನಡೆದಿರುವುದು ವರದಿಯಾಗಿದೆ.

ಸೋಮವಾರ (ಸೆ.15) ಆಂಧ್ರ ಮೂಲದ 86 ವರ್ಷದ ಪಿ.ಲಕ್ಷ್ಮೀ ಅವರು ಗಂಜಾಂನಲ್ಲಿರುವ ಅಳಿಯನ ಮನೆಗೆ ಭೇಟಿ ನೀಡಿದ್ದರು.
ಈ ವೇಳೆ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಲ್ಲಿನ ವೈದ್ಯರು ಪರೀಕ್ಷೆ ಮಾಡಿದ್ದು, ಲಕ್ಷ್ಮೀ ಅವರು ಮೃತಪಟ್ಟಿದ್ದಾರೆಂದು ಘೋಷಿಸಿದ್ದಾರೆ.
ಲಕ್ಷ್ಮೀ ಅವರು ನಿಧನ ಹೊಂದಿದ್ದಾರೆಂದು ವೈದ್ಯರು ಹೇಳಿದ ಬಳಿಕ, ಅವರ ಕುಟುಂಬಸ್ಥರು ಅಂತ್ಯ ಕ್ರಿಯೆಗೆ ಅವರ ಪಾರ್ಥಿವ ಶರೀರವನ್ನು ಪುರಿಗೆ ತೆಗೆದುಕೊಂಡು ಹೋಗಿದ್ದಾರೆ.
ಇನ್ನೇನು ಸ್ಮಶಾನದಲ್ಲಿ ಅಂತಿಮ ವಿಧಿ ವಿಧಾನಗಳು ನಡೆಯಬೇಕು, ಅಷ್ಟರಲ್ಲೇ ಅಲ್ಲಿನ ಸಿಬ್ಬಂದಿಯೊಬ್ಬರು ಲಕ್ಷ್ಮೀ ಅವರು ಉಸಿರಾಡುತ್ತಿರುವುದನ್ನು ಗಮನಿಸಿದ್ದಾರೆ. ಹತ್ತಿರ ಹೋಗಿ ಎಲ್ಲರೂ ನೋಡಿದಾಗ ಲಕ್ಷ್ಮೀ ಉಸಿರಾಡುತ್ತಿದ್ದರುವುದು ಧೃಡವಾಗಿದೆ.
ಇದಾದ ಬಳಿಕ ಕೂಡಲೇ ಕುಟುಂಬಸ್ಥರು ಮಹಿಳೆಯನ್ನು ಪುರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ವೈದ್ಯರು ಮಹಿಳೆ ಜೀವಂತವಾಗಿದ್ದಾರೆ ಎನ್ನುವುದನ್ನು ದೃಢಪಡಿಸಿದ್ದಾರೆ. ನಂತರ ತುರ್ತು ಚಿಕಿತ್ಸೆಯನ್ನು ಪ್ರಾರಂಭಿಸಿದ್ದಾರೆ.
“ಮಹಿಳೆಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರ ಹೃದಯ ಮತ್ತು ಮೂತ್ರಪಿಂಡಗಳು ಕಾರ್ಯನಿರ್ವಹಿಸುತ್ತಿದ್ದವು, ಆದರೆ ಅವರ ಮೆದುಳು ಸರಿಯಾಗಿ ಪ್ರತಿಕ್ರಿಯಿಸುತ್ತಿರಲಿಲ್ಲ” ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
ಸ್ಮಶಾನದ ವ್ಯವಸ್ಥಾಪಕ ಬ್ರಜ ಕಿಶೋರ್ ಸಾಹು ಅಂತ್ಯಕ್ರಿಯೆಗೆ ಕರೆತಂದ ಮಹಿಳೆ ದಾಖಲೆಗಳನ್ನು ಕೇಳಿದ್ದರು. ಕುಟುಂಬಸ್ಥರು ದಾಖಲೆಗಳನ್ನು ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಗೆ ತಡವಾಗಿತ್ತು. ಇದೇ ವೇಳೆ ಅಲ್ಲಿನ ಸಿಬ್ಬಂದಿ ಮಹಿಳೆ ಉಸಿರಾಡುತ್ತಿರುವುದು ಕಂಡು ಬಂದಿದೆ ಎಂದು ವರದಿ ತಿಳಿಸಿದೆ.