ಹುಟ್ಟಿದ ಒಂದೇ ದಿನಕ್ಕೆ ಅನಾಥವಾಗಿ ಪ್ರಾಣಬಿಟ್ಟ ಕಂದಮ್ಮ

ತುಮಕೂರು: ಮಗುವೊಂದು (baby) ಜನನವಾಗಿ ಕೇವಲ ಒಂದು ದಿನ ಕಳೆದಿತ್ತು. ಪಿಳಿಪಿಳಿ ಅಂತ ಬಿಡುತ್ತಿದ್ದ ಪುಟ್ಟ ಕಣ್ಣು ಅಮ್ಮನನ್ನು ಹುಡುಕುತ್ತಿತ್ತು. ತಾಯಿಯ ಅಕ್ಕರೆ ಬಯಸಿ ಅಳುತ್ತಿದ್ದ ಆ ಮಗುವಿನ ಬದುಕಿಗೆ ತಮ್ಮವರೇ ಶತ್ರುಗಳಾಗಿದ್ದಾರೆ. ತಿಳಿದೋ ಅಥವ ತಿಳಿಯದೆಯೋ ಆದ ತಪ್ಪಿಗೆ ಪುಟ್ಟ ಕಂದ ಕಣ್ಬಿಟ್ಟು ಪ್ರಪಂಚ ನೊಡುವ ಮುಂಚೆಯೇ ಶಾಶ್ವತವಾಗಿ ಕಣ್ಮುಚ್ಚಿದೆ. ಈ ಕರುಳು ಹಿಂಡುವ ಘಟನೆಗೆ ತುಮಕೂರು ಜಿಲ್ಲೆ ಸಾಕ್ಷಿಯಾಗಿದೆ.

ನಡೆದದ್ದೇನು?
ಮಗುವಿಗೆ ಜನ್ಮ ನೀಡಿದ ತಾಯಿ ಆ ಪುಟ್ಟ ಕಂದನ ಜೊತೆ ಹಾರೈಕೆಯಲ್ಲಿ ಇರಬೇಕು. ಆದರೇ ಇಲ್ಲಿ ಜನ್ಮ ನೀಡಿದ ತಾಯಿ ಮಗು ಜನಿಸಿದ ಮರು ದಿನವೇ ತನ್ನ ಸಹೋದರಿ ಮನೆಯಲ್ಲಿ ಬಿಟ್ಟು ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದಾಳೆ. ಈ ನಡುವೆ ಕಾಣಿಸಿಕೊಂಡ ಸಮಸ್ಯೆಯಿಂದ ಮಗು ಸಾವನ್ನಪ್ಪಿದೆ. ತುಮಕೂರು ನಗರದಲ್ಲಿ ಈ ಘಟನೆ ನಡೆದಿದೆ. ಮಕ್ಕಳ ರಕ್ಷಣಾ ಘಟಕ ಪೊಲೀಸರಿಗೆ ದೂರು ನೀಡಲಾಗಿದ್ದು, ದೂರು ಹಿನ್ನಲೆ ತುಮಕೂರು ಮಹಿಳಾ ಠಾಣೆಯಲ್ಲಿ ಮೃತ ನವಶಿಶುವಿನ ತಾಯಿ, ತಂದೆ ಸೇರಿದಂತೆ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ತುಮಕೂರು ನಗರದ ಓರ್ವ ದಂಪತಿಗೆ ಜನವರಿ 28ರಂದು ಹೆಣ್ಣು ಮಗು ಜನಿಸಿತ್ತು. 40 ವರ್ಷ ದಾಟಿದ ಮಹಿಳೆಗೆ ಈಗಾಗಲೇ ಇಬ್ಬರು ಮಕ್ಕಳಿದ್ದು, ಓರ್ವ ಮಗಳಿಗೆ ಮದುವೆ ಸಹ ನಿಶ್ಚಿಯವಾಗಿತ್ತು. ಆದರೇ ಈ ನಡುವೆ ಗರ್ಭಧರಿಸಿದ ಆಕೆ ಮಗಳ ನಿಶ್ಚಿತಾರ್ಥದ ಹಿಂದಿನ ದಿನವೇ ಹೆಣ್ಣು ಮಗುವಿಗೆ ಜನ್ಮ ನೋಡಿದ್ದಳು. ಅದಾಗಲೇ ಮನೆಯಲ್ಲಿ ಮೊದಲ ಮಗಳ ನಿಶ್ಚಿತಾರ್ಥ ಹಾಗೂ ಕಾರ್ಯಕ್ರಮಗಳ ಸಿದ್ಧತೆ ನಡೆಯುತ್ತಿತ್ತು. ಮಗು ಜನಿಸಿದ ಮರುದಿನವೇ ಮೊದಲ ಮಗಳ ನಿಶ್ಚಿತಾರ್ಥ ನಿಗದಿಯಾಗಿದ್ದ ಹಿನ್ನೆಲೆಯಲ್ಲಿ, ನವಜಾತ ಶಿಶುವನ್ನು ತನ್ನ ಸಹೋದರಿಯ ಮನೆಯಲ್ಲಿ ಬಿಟ್ಟು ತಾಯಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಳು.
ತಾಯಿ ಕಾರ್ಯಕ್ರಮದಲ್ಲಿ ತೊಡಗಿದ್ದ ವೇಳೆ, ಚಿಕ್ಕಮ್ಮನ ಮನೆಯಲ್ಲಿ ಇದ್ದ ನವಜಾತ ಶಿಶುವಿಗೆ ಆರೋಗ್ಯದಲ್ಲಿ ಏರುಪೇರಾಗಿದೆ. ಮಗುವಿನ ಸ್ಥಿತಿ ಗಂಭೀರವಾಗುತ್ತಿದ್ದಂತೆ ಸಂಬಂಧಿಕರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ನವಜಾತ ಹೆಣ್ಣು ಮಗು ಮೃತಪಟ್ಟಿದೆ.

ಮಗು ಸಾವಿನ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನೆಲೆ ಮಕ್ಕಳ ರಕ್ಷಣಾ ಘಟಕಕ್ಕೆ ಆಸ್ಪತ್ರೆ ಸಿಬ್ಬಂದಿ ಮಾಹಿತಿ ನೀಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ತುಮಕೂರು ಮಹಿಳಾ ಠಾಣೆಗೆ ದೂರು ನೀಡಿ
ತನಿಖೆ ವೇಳೆ ನವಜಾತ ಶಿಶುವನ್ನು ನಿರ್ಲಕ್ಷ್ಯ ಮಾಡಿ ಬಿಟ್ಟು ಹೋಗಿದ್ದ ತಾಯಿಯ ಕೃತ್ಯ ಬೆಳಕಿಗೆ ಬಂದಿದೆ. ಮಗುವಿನ ಆರೈಕೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸದೇ ಇರುವುದು ಹಾಗೂ ಆರೋಗ್ಯ ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾದ ಅಂಶಗಳ ಬಗ್ಗೆ ಪೊಲೀಸರು ಪರಿಶೀಲನೆ ಮಾಡಿದ್ದಾರೆ.