ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಕಾಂಗ್ರೆಸ್ ಸರ್ಕಾರದ ವಿರುದ್ಧ ‘ಹಗಲು ದರೋಡೆ’ ಆರೋಪ!

ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ (National Herald Case) ಕೋಟಿ ಕೋಟಿ ಜಾಹೀರಾತು ಕೊಡುವ ಮೂಲಕ ಕರ್ನಾಟಕದ ಖಜಾನೆಯನ್ನ ಕಾಂಗ್ರೆಸ್ (Congress) ಖಜಾನೆ ಮಾಡೋಕೆ ರಾಜ್ಯ ಸರ್ಕಾರ ಹೊರಟಿದೆ ಅಂತ ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಕಿಡಿಕಾರಿದ್ದಾರೆ.


ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸರ್ಕಾರದಿಂದ ಹೆಚ್ಚು ಜಾಹೀರಾತು ನೀಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕದ ಖಜಾನೆಯನ್ನ ಕಾಂಗ್ರೆಸ್ ಖಜಾನೆ ಮಾಡೋಕೆ ಸರ್ಕಾರ ಹೊರಟಿದೆ. ಜನರ ತೆರಿಗೆ ಹಣವನ್ನು ಕಾಂಗ್ರೆಸ್ ಖಜಾನೆ ಮಾಡೋಕೆ ಹೊರಟಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಬೇಲ್ನಲ್ಲಿ ಇದ್ದಾರೆ. ಡಿಕೆ ಬ್ರದರ್ಸ್ ತನಿಖೆ ಎದುರಿಸುತ್ತಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆಯೇ ಬೋಗಸ್. ಕರ್ನಾಟಕದಲ್ಲಿ ಒಬ್ಬರ ಮನೆಗೆ ಈ ಪತ್ರಿಕೆ ಬರೊಲ್ಲ. ಇಂತಹ ಪತ್ರಿಕೆಗೆ ನಮ್ಮ ಮಹಾನುಭಾವ ಸಿಎಂ, ದಾಖಲೆಗಳ ವೀರ ಕೋಟಿ ಕೋಟಿ ಹಣ ಜಾಹಿರಾತು ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.

4 ಕೋಟಿ ರೂ. ಹಣ 2.5 ವರ್ಷಗಳಲ್ಲಿ ಜಾಹೀರಾತು ಕೊಟ್ಟಿದ್ದಾರೆ. ಇಡೀ ಪ್ರಪಂಚದಿಂದ ಅವರಿಗೆ ಬಂದಿರೋ ಜಾಹಿರಾತು 31% ಬಂದಿದೆ. ಕರ್ನಾಟಕದಿಂದ 69% ಜಾಹೀರಾತು ಹೋಗಿದೆ. ಎಲ್ಲೂ ಪತ್ರಿಕೆ ಇಲ್ಲ. ಇಡೀ ಪ್ರಪಂಚದಲ್ಲಿ ನಂಬರ್ ಒನ್ ಪತ್ರಿಕೆ ಅದು. ಇದು ಹಗಲು ದರೋಡೆ. ಆ ಪತ್ರಿಕೆ ಬೇಲ್ ಮೇಲೆ ಇದೆ. ಟ್ರಸ್ಟಿಗಳು ಬೇಲ್ನಲ್ಲಿ ಇದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ಜನ ಛೀಮಾರಿ ಹಾಕಿದ್ದಾರೆ. ಆಲಿಬಾಬಾ 40 ಕಳ್ಳರು ನೋಡಿದ್ದೇವೆ. ಗೃಹಲಕ್ಷ್ಮಿಯಲ್ಲಿ ಹಣ ಕೊಡದೇ ಲೂಟಿ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಲೂಟಿ ಮಾಡಿದೆ. ಈ ಪತ್ರಿಕೆಗೆ ಇಷ್ಟು ಹಣ ಕೊಟ್ಟಿರೋದು ಅಕ್ಷ್ಯಮ್ಯ. ಜನರ ತೆರಿಗೆ ಲೂಟಿ ಮಾಡ್ತಾ ಇದ್ದಾರೆ. ಸಿದ್ದರಾಮಯ್ಯ ಅವರು ಇದಕ್ಕೆ ಲೆಕ್ಕ ಕೊಡಬೇಕು ಅಂತ ಆಗ್ರಹಿಸಿದ್ದಾರೆ.