ಮಧ್ಯಪ್ರದೇಶದಲ್ಲಿ ರಹಸ್ಯ ಪ್ರಾಣಿ ಕಚ್ಚಿ 6 ಸಾವು: ರೇಬೀಸ್ ಲಸಿಕೆಯ ಪರಿಣಾಮಕಾರಿತ್ವದ ಪ್ರಶ್ನೆ

ಬರ್ವಾನಿ: ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯಲ್ಲಿ ಎರಡು ವಾರಗಳಲ್ಲಿ ನಿಗೂಢ ಪ್ರಾಣಿಯೊಂದು 6 ಮಂದಿಯನ್ನು ಹತ್ಯೆ ಮಾಡಿದೆ. ಸ್ಥಳೀಯರು ನೀಡಿರುವ ಮಾಹಿತಿ ಪ್ರಕಾರ ಅವರೆಲ್ಲರಿಗೂ ರೇಬಿಸ್ ಚುಚ್ಚುಮದ್ದನ್ನು ಚುಚ್ಚಲಾಯಿತು ಆದರೂ ಯಾರೂ ಬದುಕುಳಿಯಲಿಲ್ಲ. ಮೇ 5ರಂದು ಬೆಳಗಿನ ಜಾವ 1 ರಿಂದ 5 ಗಂಟೆ ನಡುವೆ ಈ ಘಟನೆ ನಡೆದಿದೆ.
ಆಗ ಗ್ರಾಮದ 17 ಮಂದಿ ಮಲಗಿದ್ದರು, ಜನರು ಮಲಗಿದ್ದಾಗ ಪ್ರಾಣಿ ದಾಳಿ ಮಾಡಿದೆ. ಪ್ರಾಣಿ ಯಾವುದೆಂದು ಗುರುತಿಸಲು ಸಾಧ್ಯವಾಗಲಿಲ್ಲ. ಲಿಂಬೈ ಗ್ರಾಮದ ಮೂರು ಸ್ಥಳಗಳಲ್ಲಿ ಆ ಪ್ರಾಣಿ ದಾಳಿ ನಡೆಸಿದೆ. ಒಬ್ಬರು ಅಂಗಳ ಗುಡಿಸುತ್ತಿದ್ದ ಸಂದರ್ಭದಲ್ಲಿ ದಾಳಿ ಮಾಡಿದೆ. ಬದುಕುಳಿದವರು ಆ ಪ್ರಾಣಿ ನಾಯಿಯಂತೆ ಕಾಣುತ್ತಿತ್ತು ಎಂದು ಹೇಳಿದ್ದಾರೆ.
ಬೊಗಳಲಿಲ್ಲ, ಗುರುಗುಟ್ಟಲೂ ಇಲ್ಲ ನೆರಳಿನಂತೆ ಬಂದು ಕಚ್ಚಿ ಕಣ್ಮರೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಎಲ್ಲಾ 17 ಮಂದಿಗೆ ಬರ್ವಾನಿ ಮತ್ತು ಇಂದೋರ್ನ ವೈದ್ಯಕೀಯ ಕೇಂದ್ರಗಳಲ್ಲಿ ರೇಬೀಸ್ ವಿರೋಧಿ ಲಸಿಕೆ ನೀಡಲಾಯಿತು. ಆದರೆ ಮೇ 23 ಮತ್ತು ಜೂನ್ 2 ರ ನಡುವೆ, ಅವರಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ . ಅವರಲ್ಲಿ ಇಬ್ಬರು ಮಹಿಳೆಯರು ಮತ್ತು 40 ರಿಂದ 60 ವರ್ಷ ವಯಸ್ಸಿನ ನಾಲ್ವರು ಪುರುಷರು.
ಇತ್ತೀಚಿನ ಪ್ರಕರಣವೆಂದರೆ 40 ವರ್ಷದ ಸುನಿಲ್, ಅವರು ವೈದ್ಯಕೀಯ ಸಲಹೆಯನ್ನು ಪಾಲಿಸದೆ ಇಂದೋರ್ನ ಎಂವೈ ಆಸ್ಪತ್ರೆಯಿಂದ ಹೊರಬಂದರು. ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ನಿಧನರಾದರು.
ವೈದ್ಯರು ಹಿಂದೆಂದೂ ಈ ರೀತಿ ಕಚ್ಚಿರುವ ಗುರುತನ್ನು ನೋಡಿಯೇ ಇಲ್ಲ ಎಂದಿದ್ದಾರೆ. ಎಲ್ಲಾ ವೈದ್ಯಕೀಯ ಶಿಷ್ಟಾಚಾರಗಳನ್ನು ಅನುಸರಿಸಲಾಗಿದೆ ಮತ್ತು ಲಸಿಕೆಯನ್ನು ಮಾರ್ಗಸೂಚಿಗಳ ಪ್ರಕಾರ ಸಂಗ್ರಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮೃತರ ಮೆದುಳಿನ ಅಂಗಾಂಶ, ಗಂಟಲಿನ ಬಯಾಪ್ಸಿಯನ್ನು ವಿವರವಾದ ವಿಶ್ಲೇಷಣೆಗಾಗಿ ದೆಹಲಿಗೆ ಕಳುಹಿಸಲಾಗಿದೆ. ಅವರೆಲ್ಲರ ಸಾವಿಗೆ ರೇಬಿಸ್ ಚುಚ್ಚುಮದ್ದು ಕಾರಣವೇ ಅದರ ಆ ಪ್ರಾಣಿ ಕಚ್ಚಿದ್ದು ಕಾರಣವೇ ಎಂಬುದು ತಿಳಿದುಬರಲಿದೆ.
ಅರಣ್ಯ ಇಲಾಖೆಯು ಪ್ರಾಣಿಗಾಗಿ ನಡೆಸಿದ ಹುಡುಕಾಟದಲ್ಲಿ ಇದುವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ. ಯಾವುದೇ ಹೆಜ್ಜೆಗುರುತುಗಳು, ದೃಶ್ಯಗಳು, ಭೌತಿಕ ಸುಳಿವುಗಳು ಇಲ್ಲ ಎಂದು ಡಿಎಎಫ್ಒ ಆಶಿಶ್ ಬನ್ಸೋದ್ ಹೇಳಿದ್ದಾರೆ.ಕಾಡು ಗ್ರಾಮದಿಂದ ಕೇವಲ 4.5 ಕಿ.ಮೀ ದೂರದಲ್ಲಿದೆ. ನೀವು ರಸ್ತೆಯಲ್ಲಿ ವಾಹನ ಚಲಾಯಿಸುವ ಮೂಲಕ ಅಂತಹ ಪ್ರಾಣಿಯನ್ನು ಹಿಡಿಯಲು ಸಾಧ್ಯವಿಲ್ಲ. ಡ್ರೋನ್ಗಳನ್ನು ಬಳಸಿ, ತಂಡಗಳ ಸಂಖ್ಯೆಯನ್ನು ಹೆಚ್ಚಿಸಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾಮದಲ್ಲಿ ಮೂರು ಸಾಕು ಪ್ರಾಣಿಗಳು ನಿಗೂಢ ಸಂದರ್ಭಗಳಲ್ಲಿ ಸಾವನ್ನಪ್ಪಿವೆ,ಅರಣ್ಯ ಇಲಾಖೆಯಿಂದ ಸಂತ್ರಸ್ತ ಕುಟುಂಬಗಳಿಗೆ ತಲಾ 8 ಲಕ್ಷ ರೂ.ಗಳ ಪರಿಹಾರವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ.