ಮುಳ್ಳೇರಿಯಾ: ದೈವ ಕಲಾವಿದ ಸತೀಶನ್ ಸಾವು ಕೊಲೆ ಎಂದು ಸ್ಪಷ್ಟ, ಸ್ನೇಹಿತ ಚಿದಾನಂದ ಬಂಧನ

ಮುಳ್ಳೇರಿಯ: ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಡೂರು ಉರುಡೂರು ಚಂದನಕ್ಕಾಡಿನ ದೈವ ಕಲಾವಿದ ಟಿ. ಸತೀಶನ್ ಯಾನೆ ಬಿಜು (46) ಅವರ ಸಾವು ಸ್ನೇಹಿತ ಚಿದಾನಂದನಿಂದ ನಡೆದ ಕೊಲೆ ಕೃತ್ಯ ಎಂದು ಸ್ಪಷ್ಟಗೊಂಡಿದೆ.
ಆರೋಪಿಯನ್ನು ಬೇಕಲ ಡಿವೈಎಸ್ಪಿ ವಿ.ವಿ. ಮನೋಜ್ ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ರಾಜೀವನ್ ವಲಿಯವಳಪ್ಪಿಲ್ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಸತೀಶನ್ ಕಳೆದ ಮಂಗಳವಾರ ಸಂಜೆ ನೆರೆಮನೆಯ ನಿವಾಸಿ ಚೋಮಣ್ಣ ನಾಯ್ಕ ಅವರ ಮನೆಯಲ್ಲಿ ಅರೆ ಪ್ರಜ್ಞಾವಸ್ಥೆಯಲ್ಲಿ ಕಂಡು ಬಂದಿದ್ದರು. ಕೂಡಲೇ ಆಸ್ಪತ್ರೆಗೆ ಕರೆದೊಯ್ದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆಯಲ್ಲಿ ಸತೀಶನ್ ಸಾವಿನ ಬಗ್ಗೆ ನಿಗೂಢತೆ ಹುಟ್ಟಿಕೊಂಡಿತ್ತು. ಮೇಲ್ನೋಟಕ್ಕೆ ದೇಹದಲ್ಲಿ ಗಾಯಗಳು ಕಂಡು ಬಾರದಿದ್ದರೂ ಕುತ್ತಿಗೆಯ ಎಲುಬು ಮುರಿದಿರುವುದು, ದೇಹದ ಹಿಂಭಾಗ ಹಾಗೂ ಆಂತರಿಕ ಗಾಯಗಳು ಕಂಡು ಬಂದಿದ್ದವು. ಈ ನೆಲೆಯಲ್ಲಿ ಪೊಲೀಸರು ನಡೆಸಿದ ತನಿಖೆಯಲ್ಲಿ ಸತೀಶನ್ ಅವರದು ಕೊಲೆ ಎಂಬುದು ತಿಳಿದು ಬಂದಿದೆ.
ಅಂದು ನಡೆದದ್ದೇನು
ಕೊಲೆ ಕೃತ್ಯದ ಕುರಿತು ಪೊಲೀಸ್ ಮೂಲಗಳ ಮಾಹಿತಿ ಇಂತಿದೆ. ಸ್ನೇಹಿತರಾಗಿದ್ದ ಸತೀಶನ್ ಹಾಗೂ ಚಿದಾನಂದ ಅವರು ಆಗಾಗ ನೆರೆಮನೆ ನಿವಾಸಿಯಾದ ಚೋಮಣ್ಣ ನಾಯ್ಕ ಅವರ ಮನೆಯಲ್ಲಿ ಮದ್ಯ ಸೇವಿಸುವ ಪರಿಪಾಠ ಹೊಂದಿದ್ದರು. ಸೋಮವಾರ ಮಧ್ಯಾಹ್ನ ಎಂದಿನಂತೆ ಅವರಿಬ್ಬರು ವರಾಂಡದಲ್ಲಿ ಕುಳಿತು ಮನೆ ಮಾಲಕನ ಜತೆಗೂಡಿ ಮದ್ಯ ಸೇವಿಸಿದ್ದರು. ಅನಂತರ ಮದ್ಯದ ಅಮಲಿನಲ್ಲಿ ಸತೀಶನ್ ಹಾಗೂ ಚಿದಾನಂದ ಅವರ ಮಧ್ಯೆ ವಾಗ್ವಾದವುಂಟಾಯಿತು. ವಾಗ್ವಾದ ತೀವ್ರಗೊಂಡಾಗ ಕುಳಿತಿದ್ದ ಸತೀಶನ್ ಅವರನ್ನು ಚಿದಾನಂದ ಹಿಂದಿನಿಂದ ತಳ್ಳಿದ್ದು, ಅವರು ಕೆಳಗಾಗಿ ಬಿದ್ದು ತಲೆ ನೆಲಕ್ಕೆ ಬಡಿಯಿತು. ಸತೀಶನ್ ಅವರನ್ನು ಬೇರೊಬ್ಬರ ಸಹಾಯದಿಂದ ಎತ್ತಿ ವರಾಂಡದಲ್ಲಿ ಮಲಗಿಸಲಾಯಿತು. ನೋವಾಗುತ್ತಿದೆ ಎಂದು ಹೇಳಿದಾಗ “ಮೂವ್’ ಮುಲಾಮು ಹಚ್ಚಲಾಯಿತು. ಅನಂತರ ನೋವು ನಿವಾರಕ ಮಾತ್ರೆಗಳನ್ನು ನೀಡಿದರು. ಈ ಮಧ್ಯೆ ಸತೀಶನ್ ಅರೆ ಪ್ರಜ್ಞಾವಸ್ಥೆಗೆ ತಲುಪಿದರು. ಅವರು ನಿದ್ರಿಸಿದ್ದಾರೆಂದು ಭಾವಿಸಿ ಚಿದಾನಂದ ಅಲ್ಲಿಂದ ಮರಳಿದ್ದನು.
ಮಂಗಳವಾರ ಸತೀಶನ್ ಮನೆಗೆ ಬಾರದೆ ಇದ್ದ ಕಾರಣ ಸಹೋದರಿ ಸೌಮಿನಿ ಫೋನ್ ಕರೆ ಮಾಡಿದ್ದು, ಯಾರೋ ಸ್ವೀಕರಿಸಿದ್ದರು. ಆದರೆ ಏನು ಹೇಳಿದರೆಂದು ಸ್ಪಷ್ಟಗೊಂಡಿರಲಿಲ್ಲ. ಸತೀಶನ್ ಮದ್ಯದ ಅಮಲಿನಲ್ಲಿದ್ದಿರಬಹುದೆಂದು ಸಹೋದರಿ ಭಾವಿಸಿ ಸುಮ್ಮನಾಗಿದ್ದರು. ಮಂಗಳವಾರ ಸಂಜೆಯಾದರೂ ಸಹೋದರನನ್ನು ಕಾಣದೇ ಇದ್ದಾಗ ಸೌಮಿನಿ ನೆರೆಯ ಚೋಮಣ್ಣ ನಾಯ್ಕ ಅವರ ಮನೆಗೆ ಹೋದರು. ಆಗ ಸತೀಶನ್ ಮನೆ ವರಾಂಡದಲ್ಲಿ ಅರೆ ಪ್ರಜ್ಞಾವಸ್ಥೆಯಲ್ಲಿ ಮಲಗಿರುವುದು ಕಂಡು ಬಂದಿತು. ನೆರೆಮನೆ ನಿವಾಸಿಗಳ ಸಹಾಯದೊಂದಿಗೆ ಅವರನ್ನು ಜನರಲ್ ಆಸ್ಪತ್ರೆಗೆ ಕರೆದೊಯ್ದರೂ ರಕ್ಷಿಸಲು ಸಾಧ್ಯವಾಗಲಿಲ್ಲ.
ಸ್ನೇಹಿತನ ಮರಣೋತ್ತರ ಪರೀಕ್ಷೆಯ ವೇಳೆಗಾಗಲೀ ಅಂತ್ಯಸಂಸ್ಕಾರದಲ್ಲಾಗಲೀ ಚಿದಾನಂದನ ಭಾಗವಹಿಸದ ಕಾರಣ ಪೊಲೀಸರಿಗೆ ಆತನ ಮೇಲೆ ಸಂಶಯ ಮೂಡಿತ್ತು. ಆತನನ್ನು ವಶಕ್ಕೆ ಪಡೆದು ತನಿಖೆಗೊಳಪಡಿಸಿದಾಗ ಘಟನೆಯ ಪೂರ್ಣ ಮಾಹಿತಿ ಬೆಳಕಿಗೆ ಬಂದಿದೆ.