ಯುಎಇ ಮೇಲೆ ಕ್ಷಿಪಣಿ ದಾಳಿ: ಮೂವರು ಭಾರತೀಯರಿಗೆ ಗಾಯ; ದಾಳಿಯನ್ನು ತೀವ್ರವಾಗಿ ಖಂಡಿಸಿದ ಭಾರತ

ಹೊಸದಿಲ್ಲಿ: ಯುನೈಟೆಡ್ ಅರಬ್ ಎಮಿರೇಟ್ಸ್ ನ ಫುಜೈರಾ ತೈಲ ಪ್ರದೇಶದ ಮೇಲೆ ನಡೆದ ಕ್ಷಿಪಣಿ ಮತ್ತು ಡೋನ್ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ಈ ದಾಳಿಯಲ್ಲಿ ಮೂವರು ಭಾರತೀಯ ಪ್ರಜೆಗಳು ಗಾಯಗೊಂಡಿದ್ದಾರೆ.
ವಿದೇಶಾಂಗ ಸಚಿವಾಲಯ ಮಂಗಳವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, “ಜನರು ಮತ್ತು ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸುವುದು ಸ್ವೀಕಾರಾರ್ಹವಲ್ಲ. ಪುಜೈರಾ ದಾಳಿಯಲ್ಲಿ ಭಾರತೀಯರು ಗಾಯಗೊಂಡಿರುವುದು ಗಂಭೀರ ವಿಷಯ” ಎಂದು ತಿಳಿಸಿದೆ. ಯುದ್ಧವನ್ನು ತಕ್ಷಣವೇ ನಿಲ್ಲಿಸಿ, ನಾಗರಿಕರನ್ನು ಗುರಿಯಾಗಿಸುವ ಕ್ರಮಗಳನ್ನು ನಿಲ್ಲಿಸಬೇಕೆಂದು ಭಾರತ ಒತ್ತಾಯಿಸಿದೆ.

ಸೋಮವಾರ ಫುಜೈರಾವನ್ನು ಗುರಿಯಾಗಿಸಿಕೊಂಡು ಕ್ಷಿಪಣಿಗಳು ಮತ್ತು ಪ್ರೋನ್ ಗಳ ದಾಳಿ ನಡೆದಿದೆ. ಈ ದಾಳಿಗೆ ಇರಾನ್ ಕಾರಣವೆಂದು ಯುಎಇ ಆರೋಪಿಸಿದೆ. ದಾಳಿಯ ವೇಳೆ ನಾಲ್ಕು ಕ್ರೂಸ್ ಕ್ಷಿಪಣಿಗಳನ್ನು ಹಾರಿಸಲಾಗಿದ್ದು, ಅವುಗಳಲ್ಲಿ ಮೂರನ್ನು ವಾಯು ರಕ್ಷಣಾ ವ್ಯವಸ್ಥೆಗಳು ತಡೆಹಿಡಿದಿವೆ. ಇನ್ನೊಂದು ಕ್ಷಿಪಣಿ ಸಮುದ್ರಕ್ಕೆ ಬಿದ್ದಿದೆ.
ಇದೇ ವೇಳೆ, ಡೋನ್ ದಾಳಿಯಿಂದ ಪುಜೈರಾದ ತೈಲ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತುರ್ತು ಸೇವಾ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಬುಧಾಬಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ, ಗಾಯಗೊಂಡ ಭಾರತೀಯರಿಗೆ ಚಿಕಿತ್ಸೆ ಮತ್ತು ನೆರವು ಒದಗಿಸಲು ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ತಿಳಿಸಿದೆ.
ಭಾರತವು ಹಾರ್ಮುಝ್ ಜಲಸಂಧಿಯಲ್ಲಿನ ಅಂತರರಾಷ್ಟ್ರೀಯ ಹಡಗು ಮಾರ್ಗಗಳ ಭದ್ರತೆ ಕಾಪಾಡಬೇಕೆಂದು ಒತ್ತಾಯಿಸಿದೆ. ಇಂಧನ ಸಾಗಣೆಗೆ ಈ ಮಾರ್ಗ ಅತ್ಯಂತ ಮಹತ್ವದ್ದಾಗಿದೆ.
ಇತ್ತೀಚೆಗೆ ಅಮೆರಿಕ ಮತ್ತು ಇರಾನ್ ನಡುವೆ ಕದನ ವಿರಾಮದ ಬಳಿಕ ಶಾಂತಿ ನೆಲೆಸಿದ್ದರೂ, ಈ ದಾಳಿಯೊಂದಿಗೆ ಪ್ರದೇಶದಲ್ಲಿ ಮತ್ತೆ ಉದ್ವಿಗ್ನತೆ ಹೆಚ್ಚಾಗಿದೆ. ದುಬೈ ಮತ್ತು ಅಬುಧಾಬಿಯಲ್ಲಿ ಕ್ಷಿಪಣಿ ಎಚ್ಚರಿಕೆಗಳನ್ನು ನೀಡಲಾಗಿದೆ.
ಯುಎಇ ವಿದೇಶಾಂಗ ಸಚಿವಾಲಯವು ದಾಳಿಯನ್ನು ಖಂಡಿಸಿ, ದೇಶದ ಭದ್ರತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಹಕ್ಕು ತನ್ನಲ್ಲಿದೆ ಎಂದು ಎಚ್ಚರಿಸಿದೆ. ಪುಜೈರಾ ಯುಎಇನ ಪ್ರಮುಖ ತೈಲ ರಫ್ತು ಕೇಂದ್ರವಾಗಿದ್ದು, ಹಾರ್ಮುಝ್ ಜಲಸಂಧಿಯನ್ನು ಬಿಟ್ಟು ಒಮಾನ್ ಕೊಲ್ಲಿಯ ಮೂಲಕ ತೈಲ ಸಾಗಣೆಗೆ ಇದು ಮಹತ್ವದ್ದಾಗಿದೆ.