ಹವಾಮಾನ ಇಲಾಖೆ ಅಲರ್ಟ್: ಕರ್ನಾಟಕ ಸೇರಿ ಹಲವು ರಾಜ್ಯಗಳಿಗೆ ಮುಂಗಾರು ಪ್ರವೇಶ; ಭಾರೀ ಮಳೆ ಮುನ್ಸೂಚನೆ!

ಹೊಸದಿಲ್ಲಿ: ಮುಂಗಾರು ಮಾರುತವು ಸೋಮವಾರ ಪಶ್ಚಿಮ-ಮಧ್ಯ ಮತ್ತು ಪೂರ್ವ-ಮಧ್ಯ ಅರಬ್ಬಿ ಸಮುದ್ರ, ತೆಲಂಗಾಣ, ಮಹಾರಾಷ್ಟ್ರ ಕರ್ನಾಟಕ ಹಾಗೂ ಆಂಧ್ರಪ್ರದೇಶದ ಹೆಚ್ಚಿನ ಭಾಗಗಳಿಗೆ ಪ್ರವೇಶಿಸಿದೆ.
ಕೇರಳಕ್ಕೆ ನಿಗದಿತ ಸಮಯಕ್ಕಿಂತ ಮೂರು ದಿನ ತಡವಾಗಿ, ಜೂನ್ 4ರಂದು ಪ್ರವೇಶಿಸಿದ ಕೆಲವೇ ದಿನಗಳ ಬಳಿಕ ಮುಂಗಾರು ಈಗ ದೇಶದ ಇತರ ಭಾಗಗಳಿಗೆ ವ್ಯಾಪಿಸುತ್ತಿದೆ. ಮುಂಗಾರು ಆರಂಭ ವಿಳಂಬವಾಗಿದ್ದರೂ, ಅದರ ಮುನ್ನಡೆಯು ಬಹುತೇಕ ಸಹಜವಾಗಿದೆ.
ಮುಂದಿನ ಏಳು ದಿನಗಳಲ್ಲಿ ಕೇರಳ, ಕರ್ನಾಟಕ, ತಮಿಳುನಾಡು, ಈಶಾನ್ಯ ರಾಜ್ಯಗಳು ಮತ್ತು ಪಶ್ಚಿಮ ಬಂಗಾಳದ ಹಿಮಾಲಯ ತಪ್ಪಲಿನ ಪ್ರದೇಶಗಳಲ್ಲಿ ಅಲ್ಲಲ್ಲಿ ಭಾರೀದಿಂದ ಅತಿ ಭಾರೀ ಮಳೆಯಾಗುವ (7-20 ಸೆಂ.ಮೀ) ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಜೂನ್ 8 ಮತ್ತು 9ರಂದು ಕರ್ನಾಟಕ ಮತ್ತು ಕೇರಳದಲ್ಲಿ ಅಲ್ಲಲ್ಲಿ ಅತ್ಯಂತ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಪಶ್ಚಿಮ ಮಾರುತಗಳ ಪ್ರಭಾವದಿಂದಾಗಿ ಜೂನ್ 11ರಂದು ಗುಡುಗು, ಬಿರುಗಾಳಿ (ಗಂಟೆಗೆ 50-60 ಕಿ.ಮೀ. ವೇಗ) ಮತ್ತು ಆಲಿಕಲ್ಲು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಮುಂಗಾರು ಸದ್ಯ ಉತ್ತಮ ಪ್ರಗತಿಯನ್ನು ತೋರಿಸುತ್ತಿದ್ದು ಮುಂದಿನ ಎರಡರಿಂದ ಮೂರು ದಿನಗಳಲ್ಲಿ ಇಡೀ ವಾಯುವ್ಯ ಭಾರತ, ಪಶ್ಚಿಮ ಬಂಗಾಳದ ಹಿಮಾಲಯ ತಪ್ಪಲು, ಮಧ್ಯ ಭಾರತದ ಕೆಲವು ಭಾಗಗಳು, ಜಾರ್ಖಂಡ್ ಮತ್ತು ಪೂರ್ವ ಬಿಹಾರವನ್ನು ಆವರಿಸಲಿದೆ ಎಂದು ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ ‘ಪ್ರೈಮೆಟ್ ವೆದರ್ನ ಉಪಾಧ್ಯಕ್ಷ ಮಹೇಶ್ ಪಲಾವತ್ ತಿಳಿಸಿದ್ದಾರೆ.
ಮುಂಗಾರು ಜೂನ್ 16-17ರ ವೇಳೆಗೆ ದಕ್ಷಿಣ ಗುಜರಾತ್ ತಲುಪುವ ನಿರೀಕ್ಷೆಯಿದೆ. ಪಶ್ಚಿಮ ಮತ್ತು ವಾಯುವ್ಯ ಭಾರತದಲ್ಲಿ ಮುಂಗಾರು ಪೂರ್ವ ಚಟುವಟಿಕೆಗಳು ಹೆಚ್ಚಾಗಲಿವೆ ಎಂದಿದ್ದಾರೆ.
ಮಹಾರಾಷ್ಟ್ರ, ತೆಲಂಗಾಣ, ಈಶಾನ್ಯ ರಾಜ್ಯಗಳ ಕೆಲವು ಸ್ಥಳಗಳು ಹಾಗೂ ರಾಜಸ್ಥಾನ, ಪಂಜಾಬ್, ಹರಿಯಾಣ ಮತ್ತು ದಿಲ್ಲಿಯ ಕೆಲವೆಡೆ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2ರಿಂದ 4 ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚಾಗಿದೆ.