ಫೇಸ್ಬುಕ್ ಜಾಹೀರಾತು ನೋಡಿ ಸಾಲಕ್ಕಾಗಿ ಮುಂದಾದ ವ್ಯಕ್ತಿಗೆ ಲಕ್ಷಾಂತರ ರೂ. ವಂಚನೆ

ಬೆಂಗಳೂರು: ಫೇಸ್ ಬುಕ್ ನಲ್ಲಿ ಬಂದ ಜಾಹೀರಾತು ಗಮನಿಸಿ ಸಾಲ ಪಡೆಯಲು ಮುಂದಾದ ವ್ಯಕ್ತಿಯಿಂದ 2.86 ಲಕ್ಷ ರೂ. ಪಡೆದು ವಂಚನೆ ಮಾಡಿದ್ದು, ದಕ್ಷಿಣ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊಸಕೆರೆಹಳ್ಳಿ ನಿವಾಸಿ ಕೆ.ಬಿ. ರಾಮಚಂದ್ರ ರೆಡ್ಡಿ ವಂಚನೆಗೆ ಒಳಗಾದವರು.
ಏಪ್ರಿಲ್ 20ರಂದು ಫೇಸ್ ಬುಕ್ ನೋಡುತ್ತಿದ್ದಾಗ ಸಾಲ ಕೊಡುವುದಾಗಿ ಜಾಹೀರಾತು ಬಂದಿತ್ತು. ಗಮನಿಸಿ ಲಿಂಕ್ ಮೇಲೆ ಒತ್ತಿದಾಗ ತಕ್ಷಣ ಅಪರಿಚಿತ ವ್ಯಕ್ತಿ ಕರೆ ಮಾಡಿದ. ಸಾಲ ಕೊಡುವುದಾಗಿ ಭರವಸೆ ಕೊಟ್ಟು ವಾಟ್ಸ್ಆಯಪ್ನಲ್ಲಿ ಆಧಾರ್, ಪಾನ್ಕಾರ್ಡ್, ಬ್ಯಾಂಕ್ ಪಾಸ್ಬುಕ್ ಕಳುಹಿಸುವಂತೆ ಸೂಚಿಸಿದ್ದ.
ಅದರಂತೆ ಎಲ್ಲ ಮಾಹಿತಿಯನ್ನು ವಾಟ್ಸ್ಆಯಪ್ನಲ್ಲಿ ಕಳುಹಿಸಿದಾಗ ದಾಖಲೆ ಪರಿಶೀಲನೆ ಶುಲ್ಕ ಎಂದುಹೇಳಿ ಮೊದಲ ಬಾರಿಗೆ 2,500 ರೂ. ಪಡೆದುಕೊಂಡಿದ್ದ. ಮತ್ತೆ ಸಾಲಕ್ಕೆ ವಿಮೆ ಕಂತು ಎಂದು ಹೇಳಿ 19,600 ರೂ. ವರ್ಗಾವಣೆ ಮಾಡಿಸಿಕೊಂಡಿದ್ದು, ಎನ್ಒಸಿ ಶುಲ್ಕವೆಂದು 14,500 ರೂ. ಹಾಕಿಸಿಕೊಂಡಿದ್ದಾರೆ. ಇದೇ ರೀತಿಯಾಗಿ ನಾನಾ ಸುಳ್ಳು ಹೇಳಿ ಹಂತ ಹಂತವಾಗಿ 2.86 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡಿದ್ದಾರೆ.
ಈ ಬಗ್ಗೆ ಪ್ರಶ್ನೆ ಮಾಡಿ ವಾಪಸ್ ಹಣ ನೀಡುವಂತೆ ಒತ್ತಾಯ ಮಾಡಿದಾಗ ಸಂಪರ್ಕವನ್ನೇ ಕಡಿತ ಮಾಡಿಕೊಂಡಿದ್ದಾರೆ ಎಂದು ರಾಮಚಂದ್ರ ರೆಡ್ಡಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.