40 ವರ್ಷಗಳ ನಂತರ ಪಶ್ಚತ್ತಾಪ ಅನುಭವಿಸಿ ರಹಸ್ಯ ಬಿಚ್ಚಿಟ್ಟ ವ್ಯಕ್ತಿ

ತಿರುವನಂತಪುರಂ:ತಾನೆಸಗಿದ್ದ ಕೊಲೆಯನ್ನು ತನ್ನೊಳಗೇ ಬಚ್ಚಿಟ್ಟುಕೊಂಡಿದ್ದ ಕೇರಳದ ವ್ಯಕ್ತಿಯೊಬ್ಬ 40 ವರ್ಷಗಳ ಬಳಿಕ ಬಹಿರಂಗಪಡಿಸಿ, ಪೊಲೀಸರ ಮುಂದೆ ಶರಣಾದ ಅಚ್ಚರಿಯ ಘಟನೆ ನಡೆದಿದೆ. 14 ವರ್ಷದ ಬಾಲಕನಾಗಿದ್ದಾಗ ವ್ಯಕ್ತಿಯೊಬ್ಬನನ್ನು ಕೊಂದಿದ್ದಾಗಿ ಮುಹಮ್ಮದಾಲಿ ಎಂಬಾತ ತಪ್ಪೊಪ್ಪಿಕೊಂಡಿದ್ದಾನೆ.

“1986ರಲ್ಲಿ ನನ್ನ ಮೇಲೆ ದೌರ್ಜನ್ಯವೆಸಗಲು ಯತ್ನಿಸಿದಾಗ, ಆತ್ಮರಕ್ಷಣೆಗಾಗಿ ಆತನಿಗೆ ನಾನು ಒದ್ದೆ. ಒದ್ದ ರಭಸಕ್ಕೆ ಆತ ಸಮೀಪದಲ್ಲೇ ಇದ್ದ ನದಿಗೆ ಬಿದ್ದ. ಭಯದಿಂದಾಗಿ ಕೊಲೆ ಬಗ್ಗೆ ಬಾಯ್ಬಿಡದೇ ಮೌನ ವಹಿಸಿದೆ’ ಎಂದು ಮುಹಮ್ಮದಾಲಿ ಹೇಳಿದ್ದಾರೆ. “ಬಳಿಕ ಆತನ ಮೃತದೇಹವನ್ನು ಹೊರತೆಗೆದ ಪೊಲೀಸರು ಸಹಜ ಸಾವೆಂದು ಪ್ರಕರಣ ಮುಕ್ತಾಯಗೊಳಿಸಿದ್ದರು.

ಸ್ಥಳೀಯರು ಮೃತ ವ್ಯಕ್ತಿಗೆ ಮೂರ್ಛೆ ರೋಗವಿತ್ತು ಎಂದು ಮಾತನಾಡಿಕೊಳ್ಳುತ್ತಿದ್ದರು. ಈ ಘಟನೆ ನನ್ನನ್ನು ಸದಾ ಕಾಡುತ್ತಲೇ ಇತ್ತು. ಅಲ್ಲದೆ ಘಟನೆ ಬಳಿಕ ನನ್ನ ಕುಟುಂಬವು ದುರಂತಗಳಿಗೆ ಸಾಕ್ಷಿಯಾಯಿತು.
ಅಪಘಾತವೊಂದರಲ್ಲಿ ಹಿರಿಯ ಮಗ ಮೃತಪಟ್ಟರೆ, ಕಿರಿಯ ಮಗ ಗಂಭೀರವಾಗಿ ಗಾಯಗೊಂಡ. ಈ ವೇಳೆ ಮುಚ್ಚಿಟ್ಟ ಸತ್ಯ ಹೇಳಿ ಶರಣಾಗಬೇಕೆಂದು ನಿರ್ಧರಿಸಿದೆ’ ಎಂದು ಮುಹಮ್ಮದಾಲಿ ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹಳೆ ದಾಖಲೆಗಳನ್ನು, ಪತ್ರಿಕಾ ವರದಿಗಳನ್ನು ಪರಿಶೀಲಿಸುತ್ತಿದ್ದಾರೆ. ಆರೋಪಿ ಈಗ ನ್ಯಾಯಾಂಗ ವಶದಲ್ಲಿದ್ದಾನೆ.