ಲೋಕೋ ಪೈಲಟ್ ಸಮಯಪ್ರಜ್ಞೆ ಬೃಹತ್ ದುರಂತ ತಪ್ಪಿಸಿದ ಘಟನೆ – ಉತ್ತರ ಪ್ರದೇಶದಲ್ಲಿ ಆತಂಕ

ಲಕ್ನೋ: ಉತ್ತರ ಪ್ರದೇಶದ ಹಾರ್ದೋಯ್ ಜಿಲ್ಲೆಯಲ್ಲಿ ಮತ್ತೊಮ್ಮೆ ಸಮಾಜ ವಿರೋಧಿ ಶಕ್ತಿಗಳು ಎರಡು ರೈಲುಗಳನ್ನು ಹಳಿತಪ್ಪಿಸಲು ದೊಡ್ಡ ಪಿತೂರಿ ನಡೆಸಿರುವುದು ಬಯಲಾಗಿದೆ.
ದಲೇಲ್ ನಗರ ಮತ್ತು ಉಮ್ರತಾಲಿ ನಡುವೆ ಈ ವಿಧ್ವಸಂಕ ಕೃತ್ಯಕ್ಕೆ ಯತ್ನಿಸಲಾಗಿದ್ದು, ಲೋಕೋ ಪೈಲಟ್ ಸಮಯಪ್ರಜ್ಞೆಯಿಂದ ಭಾರೀ ಅವಘಡ ತಪ್ಪಿದಂತಾಗಿದೆ.
ಘಟನೆಯ ಬಗ್ಗೆ ಮಾಹಿತಿ ಬಂದ ತಕ್ಷಣ, ರೈಲ್ವೆ ಅಧಿಕಾರಿಗಳೊಂದಿಗೆ GRP RPF ಅಧಿಕಾರಿಗಳು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದರು. ಪ್ರಸ್ತುತ, ಹಳಿಯನ್ನು ತೆರವುಗೊಳಿಸಲಾಗಿದ್ದು, ರೈಲುಗಳನ್ನು ಸುರಕ್ಷಿತವಾಗಿ ಕಳುಹಿಸಲಾಗಿದೆ.
ವರದಿಗಳ ಪ್ರಕಾರ, ಸೋಮವಾರ ಸಂಜೆ 5:45 ರ ಸುಮಾರಿಗೆ ಲಕ್ನೋ ಕಡೆಗೆ ಹೋಗುತ್ತಿದ್ದ 20504 ನವದೆಹಲಿ ದಿಬ್ರುಗಢ ರಾಜಧಾನಿ ಎಕ್ಸ್ಪ್ರೆಸ್ ಅನ್ನು ಹಳಿತಪ್ಪಿಸಲು ಸಂಚು ರೂಪಿಸಲಾಗಿತ್ತು. ದುಷ್ಕರ್ಮಿಗಳು ರೈಲ್ವೆ ಹಳಿಗೆ ಮಣ್ಣು ಹಾಕಲು ಬಳಸುವ ಮರದ ಬ್ಲಾಕ್ ಮತ್ತು ಕಬ್ಬಿಣದ ತಂತಿಯನ್ನು ಕೆಳ ಹಳಿಯ ಮೇಲೆ ಇಟ್ಟಿದ್ದರು.
ರಾಜಧಾನಿ ಎಕ್ಸ್ಪ್ರೆಸ್ನ ಲೋಕೋ ಪೈಲಟ್ನ ಸಮಯಪ್ರಜ್ಞೆಯಿಂದ ರೈಲು 10 ನಿಮಿಷಗಳ ಕಾಲ ನಿಂತಿತ್ತು. ಹೀಗಾಗಿ ಆಗಬಹುದಾದ ದೊಡ್ಡ ಅವಘಡವೊಂದು ತಪ್ಪಿದೆ. ಲೋಕೋ ಪೈಲಟ್ ತುರ್ತು ಬ್ರೇಕ್ ಹಾಕುವ ಮೂಲಕ ರೈಲನ್ನು ನಿಲ್ಲಿಸಿದರು. ಅಲ್ಲದೇ ಹಳಿಯ ಮೇಲೆ ಹಾಕಲಾಗಿದ್ದ ಅರ್ಥಿಂಗ್ ವೈರ್ ಮತ್ತು ಮರದ ದಿಮ್ಮಿಯನ್ನು ತೆಗೆದು ರೈಲ್ವೆ ಅಧಿಕಾರಿಗಳಿಗೆ ವಿಷಯ ತಿಳಿಸಿದರು.
ರಾಜಧಾನಿ ಎಕ್ಸ್ಪ್ರೆಸ್ ಸುರಕ್ಷಿತವಾಗಿ ಹಾದುಹೋದ ನಂತರ ಕಠ್ಗೋಡಮ್ ಲಕ್ನೋ ಎಕ್ಸ್ಪ್ರೆಸ್ ಬಂದಿತು ಮತ್ತು ಈ ರೈಲು ಕೂಡ ಕೂದಲೆಳೆಯ ಅಂತರದಲ್ಲಿ ಪಾರಾಯಿತು. ಈ ರೈಲಿನ ಲೋಕೋ ಪೈಲಟ್ ಕೂಡ ತುರ್ತು ಬ್ರೇಕ್ ಹಾಕಿ ರೈಲನ್ನು ನಿಲ್ಲಿಸಿ ರೈಲ್ವೆ ಹಳಿಯ ಮೇಲೆ ಮತ್ತೆ ಇರಿಸಲಾಗಿದ್ದ ಕಬ್ಬಿಣದ ಅರ್ಥಿಂಗ್ ವೈರ್ ಮತ್ತು ಮರದ ದಿಮ್ಮಿಗಳನ್ನು ತೆಗೆದುಹಾಕಿದ್ದು ಬಳಿಕ ರೈಲು ಲಕ್ನೋ ಕಡೆ ಚಲಿಸಿತ್ತು.