ವಿಷವಿಕ್ಕಿ ಚಿರತೆ ಹತ್ಯೆ: ಜಾನುವಾರು ಕಳೆದುಕೊಂಡಿದ್ದ ರೈತ ದೊರೆಸ್ವಾಮಿ ಬಂಧನ!

ಚಾಮರಾಜನಗರ: ವಿಷವಿಕ್ಕಿ ಚಿರತೆ ಹತ್ಯೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ದೊರೆಸ್ವಾಮಿಯನ್ನು ಪೊಲೀಸರು ಬಂಧಿಸಿದ್ದಾರೆ.

ಚಾಮರಾಜನಗರ ತಾಲೂಕಿನ ಹೊಮ್ಮ-ಬಸವರಾಜಪುರ ಬಳಿ ಚಿರತೆ ಕಳೇಬರ ಪತ್ತೆಯಾಗಿತ್ತು. ದೊರೆಸ್ವಾಮಿಗೆ ಸೇರಿದ ನಾಯಿ, ಜಾನುವಾರುಗಳನ್ನು ಚಿರತೆ ಕೊಂದಿತ್ತು. ಪ್ರತೀಕಾರಕ್ಕಾಗಿ ವಿಷಪ್ರಶಾನ ಮಾಡಿ ಚಿರತೆ ಹತ್ಯೆ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.

ಚಿರತೆ ಕೊಂದಿದ್ದ ಕರುವಿನ ಮಾಂಸಕ್ಕೆ ಕ್ರಿಮಿನಾಶಕ ಹಾಕಿರುವ ಶಂಕೆ ವ್ಯಕ್ತವಾಗಿದೆ. ಕ್ರಿಮಿನಾಶಕ ಬೆರೆಸಿದ್ದ ಕರುವಿನ ಮಾಂಸ ತಿಂದು ಚಿರತೆ ಸಾವಿಗೀಡಾಗಿದೆ. ಘಟನೆಯಾಗಿ ಕೇವಲ 24 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ಬಿಆರ್ಟಿ ಅರಣ್ಯ ಸಿಬ್ಬಂದಿ ಹಾಗೂ ಸಂತೇಮರಹಳ್ಳಿ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿದ್ದರು. ಆರೋಪಿಯು ಕಾರ್ಬೋ ಪ್ಲೋರಾನ್ ಎಂಬ ಕ್ರಿಮಿನಾಶಕ ಬೆರೆಸಿದ್ದಾನೆ ಎನ್ನಲಾಗಿದೆ. ಹಿಂದೆ ಮಲೆ ಮಹದೇಶ್ವರ ವನ್ಯಧಾಮದಲ್ಲೂ 6 ಹುಲಿ ಹತ್ಯೆಗೆ ಇದೇ ಕೀಟನಾಶಕ ಬಳಸಲಾಗಿತ್ತು. ತನಿಖೆ ವೇಳೆ ಆರೋಪಿ ವಿಚಾರವನ್ನು ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.