ಸಿಕ್ಕಿಂನಲ್ಲಿ ಭೂಕುಸಿತ: ಗಡಿಯಲ್ಲಿ ಸಿಲುಕಿದ 1,000 ಪ್ರವಾಸಿಗರು; ರಕ್ಷಣೆಗಾಗಿ ಭಾರತೀಯ ಸೇನೆಯಿಂದ ‘ಆಪರೇಷನ್ ಹಿಮ ಸೇತು’ ಆರಂಭ

ಗ್ಯಾಂಗ್ಟಕ್: ಉತ್ತರ ಸಿಕ್ಕಿಮ್ ನಲ್ಲಿ ಭಾರತ-ಚೀನಾ ಗಡಿಗೆ ಸಮೀಪ ಹಲವಾರು ಭೂಕುಸಿತಗಳು ಸಂಭವಿಸಿದ್ದು ಲ್ಯಾಚೆನ್ ಮತ್ತು ಚುಂಗ್ಥಾಂಗ್ ನಡುವಿನ ರಸ್ತೆ ಸಂಪರ್ಕಗಳು ಕಡಿತಗೊಂಡಿವೆ. ಸೇನೆಯು ಲ್ಯಾಚೆನ್ ಪ್ರದೇಶದಲ್ಲಿ ಸಿಕ್ಕಿಹಾಕಿಕೊಂಡಿದ್ದ 135 ಪ್ರವಾಸಿಗಳನ್ನು ರಕ್ಷಿಸಿದ್ದು ಈಗಲೂ ಸುಮಾರು 1,000 ಪ್ರವಾಸಿಗಳು ಅತಂತ್ರರಾಗಿದ್ದಾರೆ. ಅವರ ರಕ್ಷಣೆಗಾಗಿ ನಿರಂತರ ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಭಾರೀ ಹಿಮಪಾತದ ನಡುವೆಯೇ ಈಸ್ಟರ್ನ್ ಕಮಾಂಡ್ ನ ತ್ರಿಶಕ್ತಿ ಕಾರ್ಪ್ಸ್ ‘ಆಪರೇಷನ್ ಹಿಮ ಸೇತು’ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದೆ ಎಂದು ಅವರು ಹೇಳಿದರು.
ಈವರೆಗೆ ಒಟ್ಟು 32 ಲಘು ವಾಹನಗಳು ಮತ್ತು 10 ಬೈಕ್ ಗಳನ್ನು ಸ್ಥಳಾಂತರಿಸಲಾಗಿದ್ದು ಕಡಿದಾದ ಹಿಮಾವೃತ ರಸ್ತೆಗಳಲ್ಲಿ ನಾಗರಿಕ ವಾಹನಗಳನ್ನು ಎಳೆದೊಯ್ಯಲು ಮಿಲಿಟರಿ ವಾಹನಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೈದ್ಯಕೀಯ ತುರ್ತು ಸೇವೆಗಳನ್ನು ಒದಗಿಸಲಾಗಿದ್ದು, ತಕ್ಷಣದ ನೆರವು ಅಗತ್ಯವಿರುವವರಿಗೆ ಆದ್ಯತೆ ನೀಡಲಾಗುತ್ತಿದೆ. ಗಡಿ ರಸ್ತೆಗಳ ಸಂಸ್ಥೆಯು ರಕ್ಷಣಾ ಕಾರ್ಯಾಚರಣೆಯಲ್ಲಿ ಸೇನೆಯೊಂದಿಗೆ ಸಹಕರಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
