ಜಮೀನು ವಿವಾದ ತೀವ್ರ- ತಲ್ವಾರ್ನಿಂದ ಹೊಡೆದು ಅಣ್ಣನನ್ನೇ ಕೊಲೆ ಮಾಡಿದ ತಮ್ಮ

ಕೋಲಾರ: ಜಮೀನು ವಿವಾದದ ಹಿನ್ನೆಲೆಯಲ್ಲಿ ತಲ್ವಾರ್ನಿಂದ ತಲೆಗೆ ಹೊಡೆದು ತಮ್ಮನೇ ಅಣ್ಣನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಚಲಪತಿ ಅಲಿಯಾಸ್ ವೆಂಕಟಾಚಲಪತಿ (50) ಕೊಲೆಯಾದ ಅಣ್ಣ. ಪಕ್ಕದ ಮನೆಯಲ್ಲೇ ವಾಸ ಮಾಡುವ ತಮ್ಮ ಮುನಿರಾಜು (40) ಕೊಲೆ ಮಾಡಿ ಬಳಿಕ ಪೊಲೀಸರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ. ಬೆಳಗ್ಗೆ 6:30ರ ಸುಮಾರಿಗೆ ಕುರಿಗಳಿಗೆ ಮೇವು ನೀಡಲು ಹೋದ ಅಣ್ಣನನ್ನು ತಲ್ವಾರ್ನಿಂದ ಕೊಚ್ಚಿ ತಮ್ಮ ಕೊಲೆ ಮಾಡಿದ್ದಾನೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ರಾಮಾಪುರದಲ್ಲಿಇಂದು ಮುಂಜಾನೆ ಈ ಘಟನೆ ನಡೆದಿದೆ.
ಅಣ್ಣ ಚಲಪತಿ ಜಮೀನಿನಲ್ಲಿ ಸರಿಯಾಗಿ ಭಾಗ ಕೊಡದ ಹಿನ್ನೆಲೆ ಹಲವು ಬಾರಿ ನ್ಯಾಯ ಪಂಚಾಯ್ತಿಗಳನ್ನು ಮಾಡಲಾಗಿದೆ. ಜೊತೆಗೆ ಜಮೀನು ವಿವಾದ ನ್ಯಾಯಾಲಯದಲ್ಲೂ ಇದ್ದು, ಇತ್ತೀಚೆಗೆ ಹಿರಿಯರ ಸಮ್ಮುಖದಲ್ಲಿ 35 ಲಕ್ಷ ಹಣ ಕೊಟ್ಟು ತೀರ್ಮಾನ ಸಹ ಮಾಡಿಕೊಂಡಿದ್ದಾನೆ. ಆದರೆ ಇಂದು ಮುಂಜಾನೆ ಕುರಿ ಶೆಡ್ಗೆ ತೆರಳಿದ ಅಣ್ಣನನ್ನ ಹಿಂಬಾಲಿಸಿದ ತಮ್ಮ ಮುನಿರಾಜು ಶೆಡ್ನಲ್ಲಿ ತಲ್ವಾರ್ನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ಇನ್ನೂ ಮನೆಯಿಂದ ಶೆಡ್ಗೆ ಚಲಪತಿ ತೆರಳುವ ಹಾಗೂ ನಂತರ ತಮ್ಮ ಮುನಿರಾಜು ಶೆಡ್ಗೆ ತೆರಳಿ ಬಾಗಿಲು ಹಾಕಿಕೊಳ್ಳುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನೂ ಕೊಲೆ ಮಾಡಿದ ಬಳಿಕ ಪೊಲೀಸರಿಗೆ ಶರಣಾಗಿರುವ ಕೊಲೆ ಆರೋಪಿ ಮುನಿರಾಜು ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಇನ್ನೂ ಸ್ಥಳಕ್ಕೆ ಎಫ್ಎಸ್ಎಲ್ ತಂಡ ಹಾಗೂ ಕೆಜಿಎಫ್ ಎಸ್ಪಿ ಶಿವಾಂಶು ರಜಪೂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೂದಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಇನ್ನೂ ಚಲಪತಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ತನ್ನ ಪತಿಯನ್ನ ತಲ್ವಾರ್ನಿಂದ ಕೊಚ್ಚಿ ಚುಚ್ಚಿಕೊಲೆ ಮಾಡಿದ್ದಾರೆ. ಇದರಲ್ಲಿ ಮುನಿರಾಜು ಮಾತ್ರವಲ್ಲದೇ ಸಾಕಷ್ಟು ಜನರ ಕುತಂತ್ರ ಸಹ ಇದೆ. ಅಲ್ಲದೆ ಕೊಲೆ ಮಾಡಿದ ಬಳಿಕ ಮತ್ತಷ್ಟು ತಲೆಗಳನ್ನ ಬಲಿ ಪಡೆಯುವುದಾಗಿಯೂ ಅವರೇ ಹೇಳಿದ್ದಾರೆ ಎಂದು ಪತ್ನಿ ನಾರಾಯಣಮ್ಮ ಹಾಗೂ ತಂಗಿ ಸುನಂದಮ್ಮ ಆರೋಪಿಸಿದ್ದಾರೆ.